ಪರಿಸರ ಅರ್ಥಶಾಸ್ತ್ರಕ್ಕೆ ಆದ್ಯತೆ ನೀಡಿ: ಡಾ.ರೇಶ್ಮಿ ಭಾಸ್ಕರನ್

ಉಡುಪಿ: ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮತ್ತು ನೈಸರ್ಗಿಕ ಸಂಪನ್ಮೂಲಗಳು ನಶಿಸುತ್ತಿರುವ ಈ ಸಂದರ್ಭದಲ್ಲಿ ನಾವು ಪರಿಸರ ಅರ್ಥಶಾಸ್ತ್ರದತ್ತ (ಇಕೊಲೊಜಿಕಲ್ ಎಕನಾಮಿಕ್ಸ್) ಗಮನ ಹರಿಸದಿದ್ದರೆ, ಜಗತ್ತು ವಿನಾಶದ ಅಂಚಿಗೆ ತಲುಪುತ್ತದೆ ಎಂದು ಹಿರಿಯ ಅರ್ಥಶಾಸ್ತ್ರಜ್ಞೆ ಡಾ.ರೇಸ್ಮಿ ಭಾಸ್ಕರನ್ ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲದಲ್ಲಿ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ’ಪರಿಸರ ಅರ್ಥಶಾಸ್ತ್ರದ ಪ್ರಸ್ತುತತೆ’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
ಸಾಂಪ್ರದಾಯಿಕ ಅರ್ಥಶಾಸ್ತ್ರವು ಯಾವುದೇ ಮಿತಿಯನ್ನು ಹೊಂದಿಲ್ಲ. ನಮ್ಮ ಅಗತ್ಯತೆಗಳಿಗೂ ಮೀರಿ ಜಗತ್ತಿನಲ್ಲಿ ಸೀಮಿತ ಸಂಪನ್ಮೂಲಗಳಿವೆ. ಆರ್ಥಿಕತೆಯು ಅಭಿವೃದ್ಧಿಗೊಂಡಾಗ, ಅದು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹೆಚ್ಚುವರಿ ಹೊರೆಯನ್ನು ಹೇರುತ್ತದೆ. ಇದು ಭೂಮಿಯನ್ನು ವಿಪತ್ತಿನಂಚಿಗೆ ಕೊಂಡೊಯ್ಯುತ್ತದೆ ಎಂದು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪಿಹೆಚ್ಡಿ ಪದವಿಯನ್ನು ಪಡೆದಿರುವ ಡಾ. ರೇಶ್ಮಿ ಭಾಸ್ಕರನ್ ನುಡಿದರು.
ಜಗತ್ತಿನಲ್ಲಿ ದೇಶಗಳ ಮತ್ತು ವ್ಯಕ್ತಿಗಳ ನಡುವೆ ಸಂಪತ್ತಿನ ಸಮಾನ ಹಂಚಿಕೆ ಆಗಿಲ್ಲ. ಸಣ್ಣ ಪ್ರಭಾವಿ ಜನಸಂಖ್ಯೆ ಜಗತ್ತಿನಲ್ಲಿ ಸಂಪನ್ಮೂಲಗಳ ಪ್ರಮುಖ ಪಾಲನ್ನು ನಿಯಂತ್ರಿಸುತ್ತಿದೆ. ದೇಶ-ದೇಶಗಳು ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿ ತೊಡಗಿ ರುವಾಗ, ಅಗತ್ಯವಿರುವವರ ಮೂಲಭೂತ ಅಗತ್ಯಗಳನ್ನು ನಿರ್ಲಕ್ಷಿಸ ಲಾಗುತ್ತಿದೆ. ಜಾಗತೀಕರಣವು ಮತ್ತೊಂದು ರೀತಿಯ ವಸಾಹತುಶಾಹಿಗೆ ದಾರಿ ಮಾಡಿಕೊಟ್ಟಿದೆ ಎಂದು ಡಾ.ಭಾಸ್ಕರನ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪರಿಸರ ತಜ್ಞ ಡಾ. ಶ್ರೀಕುಮಾರ್, ಭೂಮಿಯ ಸಂಪನ್ಮೂಲಗಳನ್ನು ಕಬಳಿಸುವ, ಸಮಾನತೆಯನ್ನು ಪರಿಗಣಿಸದ ಬೆಳವಣಿಗೆಯತ್ತ ಗಮನಹರಿಸುವುದರಿಂದ ಅಭಿವೃದ್ಧಿಯ ಕಲ್ಪನೆಯೇ ನಮ್ಮ ಸಮಸ್ಯೆಯ ಮೂಲವಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಇಂದು ಪರಿಸರ ಅರ್ಥಶಾಸ್ತ್ರವು ನಮ್ಮ ಅಸ್ತಿತ್ವ ದೊಂದಿಗೆ ಸಂಪರ್ಕ ಕಲ್ಪಿಸುವ ಸಂಶೋಧನೆಯ ಪ್ರಮುಖ ಕ್ಷೇತ್ರವಾಗಿದೆ ಎಂದರು.
ತನಿಷ್ಕಾ ಕೋಟ್ಯಾನ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಡಾ ರವೀಂದ್ರನಾಥನ್, ಡಾ ಐಡಾ ಡಿಸೋಜಾ ಮತ್ತಿತರರು ಭಾಗವಹಿಸಿದ್ದರು.







