ಶಿಕ್ಷಣ ತಜ್ಞ ಆರ್.ಎಸ್.ಬೆಳ್ಳೆ ಸಂಸ್ಮರಣೆ-ಪುರಸ್ಕಾರ ಪ್ರದಾನ

ಶಿರ್ವ: ಸಮಾಜಮುಖಿ ವ್ಯಕ್ತಿತ್ವವನ್ನು ರೂಢಿಸಿಕೊಂಡಾಗ ಮಾತ್ರ ಅಭಿವೃದ್ಧಿ ಹಾಗೂ ಯಶಸ್ಸು ಸಂಪೂರ್ಣ ಸಾಧ್ಯವಾ ಗುತ್ತದೆ ಎಂಬುದಕ್ಕೆ ಶಿಕ್ಷಣ ತಜ್ಞ ಮತುತಿ ಸಮಾಜಸೇವಕ ಆರ್.ಎಸ್.ಬೆಳ್ಳೆ ಅವರ ಬದುಕೇ ಉದಾಹರಣೆ ಯಾಗಿದೆ ಎಂದು ಕಟ್ಟಿಂಗೇರಿ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ದೇವದಾಸ್ ಹೆಬ್ಬಾರ್ ಹೇಳಿದ್ದಾರೆ.
ಪಡುಬೆಳ್ಳೆ ಪಾಂಬೂರಿನಲ್ಲಿ ರವಿವಾರ ಜರಗಿದ ಆರ್.ಎಸ್.ಬೆಳ್ಳೆ ಸಂಸ್ಮರಣೆಯ ಹೊನಲು ಬೆಳಕಿನ ಮಿತ್ರಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಆರ್.ಎಸ್.ಬೆಳ್ಳೆ ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ ಯಾಗಿದ್ದರು. ನಿವೃತ್ತಿ ಬಳಿಕ ಗ್ರಾಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರದ್ದು ತ್ಯಾಗಪೂರ್ಣ ಬದುಕಾಗಿದ್ದು, ತನ್ನ ಶಕ್ತಿಗೂ ಮೀರಿ ಜನರಿಗೆ ನೆರವು ನೀಡುತ್ತಿದ್ದರು ಎಂದರು.
ಕವಿ, ಸಾಹಿತಿ ರಿಚ್ಚಾರ್ಡ್ ದಾಂತಿ ಪಾಂಬೂರು ಸಂಸ್ಮರಣಾ ಭಾಷಣ ಮಾಡಿದರು. ಉಡುಪಿಯ ಹಿರಿಯ ನ್ಯಾಯವಾದಿ ಜಯಶಂಕರ ಕುತ್ಪಾಡಿ ಅವರಿಗೆ ಆರ್.ಎಸ್.ಬೆಳ್ಳೆ ಸ್ಮರಣಾರ್ಥ ಮೊದಲ ವರ್ಷದ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯ ವಾಸು ಆಚಾರ್, ಪಡುಬೆಳ್ಳೆ ನಾರಾಯಣ ಗುರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ದೇವಾಡಿಗ, ಕಸಾಪ ಕಾಪು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಬೆಳ್ಳೆ ಪರಿಚಯ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಪಾಂಬೂರು, ಸ್ಯಾಮ್ಸನ್ ನೊರೋನ್ನಾ ದಿಂದೊಟ್ಟು, ಮುರಳೀಧರ ಆರ್.ಸಾಮಗ ಬೆಳ್ಳೆ ಮಾತನಾಡಿದರು.
ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿ ದರು. ಕಾಪು ತಾಪಂ ಮಾಜಿ ಸದಸ್ಯೆ ಸುಜಾತಾ ಎಸ್. ಸುವರ್ಣ, ನಿವೃತ್ತ ಕಚೇರಿ ಸಿಬಂದಿ ಕ್ರಿಸ್ತಿನ್ ಫೆರ್ನಾಂಡಿಸ್, ನಿವೃತ್ತ ಹಿರಿಯ ಶುಶ್ರೂಶಕಿ ಉಷಾ ಮರಾಠೆ, ಪತ್ರಕರ್ತ ಶ್ರೀರಾಮ ದಿವಾಣ, ಪೆಲ್ವಿನ್ ಫ್ರಾನ್ಸಿಸ್ ಕ್ವಾಡ್ರಸ್, ಅರುಣ್ ನೊರೋನ್ನಾ, ಪೀಟರ್ ಮತಾಯಸ್ ಉಪಸ್ಥಿತರಿದ್ದರು.







