ಶಿರೂರಿನಲ್ಲಿ ಡಿಸಿ ಮನ್ನಾ ಭೂಮಿ ದಲಿತರಿಗೆ ಹಂಚುವಂತೆ ಆಗ್ರಹ: ದಲಿತರಿಂದ ಅಹೋರಾತ್ರಿ ಅನಿರ್ಧಿಷ್ಟವಾವಧಿ ಉಪವಾಸ ಸತ್ಯಾಗ್ರಹ

ಕುಂದಾಪುರ : ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಭೂಮಿ ದಲಿತರಿಗೆ ಹಂಚದೆ ಅನ್ಯಾಯ ಎಸಗಿರುವುದಾಗಿ ಆರೋಪಿಸಿ ದಲಿತ ಸಂಘಟನೆ ಕಾರ್ಯಕರ್ತರು ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಅನಿರ್ದಿಷ್ವಾವಧಿ ಉಪವಾಸ ಸತ್ಯಾಗ್ರಹ ಮಂಗಳವಾರವೂ ಮುಂದುವರೆದಿದೆ.
ಸೋಮವಾರ ರಾತ್ರಿ ಚಿಮಣಿ ಬೆಳಕಿನಲ್ಲಿ ಧರಣಿ ಸ್ಥಳದಲ್ಲಿ ಕೂತು ಪ್ರತಿಭಟನಾಕಾರರು ರಾತ್ರಿ ಕಳೆದಿದ್ದು, ಶಿರೂರಿನ ದಲಿತ ಮುಖಂಡರಾದ ರಾಘವೇಂದ್ರ ಹಾಗೂ ರಮೇಶ್ ಶಿರೂರು ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು ಸ್ಥಳೀಯ ದಲಿತ ಸಂಘಟನೆ ಮುಖಂಡರು ಅವರೊಂದಿಗೆ ಕೈಜೋಡಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳೇ ಕಳೆದರೂ ಬೈಂದೂರಿನ ಶಿರೂರಿನಲ್ಲಿ ಡಿಸಿ ಮನ್ನಾ ಭೂಮಿ ಹಂಚದ ಉಡುಪಿ ಜಿಲ್ಲಾಡಳಿತವು ದಲಿತರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಮಾಜಿಕವಾಗಿ ಹಿಂದುಳಿಯುವಂತೆ ಮಾಡಿ ದಲಿತರ ಸಾಂವಿಧಾನಿಕ ಹಕ್ಕುಗಳ ಕಗ್ಗೋಲೆ ಮಾಡಿ ದಲಿತ ವಿರೋಧಿ ನಡವಳಿಕೆ ತೋರಿದ್ದಾರೆ. ಮುಖ್ಯಮಂತ್ರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಈ ಸತ್ಯಾಗ್ರಹ ಮಂದು ವರೆಯಲಿದೆ ಎಂದು ರಾಘವೇಂದ್ರ ಶಿರೂರು ತಿಳಿಸಿದ್ದಾರೆ.
ಈ ಸಂದರ್ಭ ಅಂಬೇಡ್ಕರ್ ಯುವಸೇನೆ ಬೈಂದೂರು ತಾಲೂಕು ಅಧ್ಯಕ್ಷ ರಾಮ ಎಂ.ಮಯ್ಯಾಡಿ, ಬೈಂದೂರು ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ರಂಗ ಯಡ್ತರೆ, ದಲಿತ ಮುಖಂಡರಾದ ಮಾದೇವ ಬಾಕಡ, ಮಹಾಲಕ್ಷ್ಮೀ ಬೈಂದೂರು, ಈಶ್ವರ್ ಶಿರೂರು, ವಾಸು ಶಿರೂರು, ಮಂಜುನಾಥ ಶಿರೂರು, ಮಂಗಳ ಶಿರೂರು, ಲಕ್ಷ್ಮಿ ಶಿರೂರು, ಚೇತನ್, ನಾರಾಯಣ ಬೈಂದೂರು, ಮಹಾದೇವ ತೊಂಡೆಮಕ್ಕಿ, ಮಹಾದೇವ ಬೈಂದೂರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಉಡುಪಿ ಜಿಲ್ಲಾ ಸಮಿತಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದರು. ಉತ್ತರ ಕನ್ನಡ ಜಿಲ್ಲೆಯಿಂದ ದಲಿತ ಸಂಘಟನೆಯ ಮುಖಂಡರು ಆಗಮಿಸಿದ್ದಾರೆ.
‘ಶಿರೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ದಲಿತ ವಿರೋಧಿ ನಿರ್ಣಯ ಕೈಗೊಳ್ಳಲಾಗುತ್ತಿದೆ. ಎಸ್ಸಿ-ಎಸ್ಟಿಗೆ ಮೀಸಲಿಟ್ಟ ಸುಮಾರು 45 ಎಕ್ರೆ ಡಿಸಿ ಮನ್ನಾಭೂಮಿ ಇದ್ದು ಇತರರು ಅದನ್ನು ಕಬಳಿಸಿದ್ದಾರೆ. ಮೀಸಲಿಟ್ಟ ಭೂಮಿ ನೀಡದಿರುವ ಜಿಲ್ಲಾಡಳಿತದ ಧೋರಣೆ ಖಂಡನೀಯ. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಚುನಾಯಿತ ಜನ ಪ್ರತಿನಿಧಿಗಳು ಸ್ಪಂದನೆ ನೀಡಿಲ್ಲ. ಸಿಎಂ ಬರುವ ತನಕ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ’
-ರಾಘವೇಂದ್ರ ಶಿರೂರು, ಹೋರಾಟಗಾರರು
‘ತಾಲ್ಲೂಕು ಆಡಳಿತದ ಎದುರು ಎರಡನೇ ದಿನ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು, ತಹಶಿಲ್ದಾರ್, ಇಒ, ಪೊಲೀಸ್ ಅಧಿಕಾರಿಗಳು ಬಿಟ್ಟರೆ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಸರಕಾರದ ಯಾರೊಬ್ಬರು ನಮ್ಮ ಹೋರಾಟದ ಬಗ್ಗೆ ಕಾಳಜಿ ವಹಿಸಿಲ್ಲ. ಶಾಸಕರು ಸದನದಲ್ಲಿ ಶಿರೂರು ಭಾಗದ ದಲಿತರ ವಿಚಾರ ಮಾತನಾಡಬೇಕು. ನಮ್ಮ ಸಮಸ್ಯೆ ಬಗೆಹರಿಯದಿದ್ದರೆ ಮುಂಬರುವ ಸಂಸತ್ ಚುನಾವಣೆಯಲ್ಲಿ ದಲಿತರು ಶಕ್ತಿ ಪ್ರದರ್ಶನ ಮಾಡುತ್ತೇವೆ’
-ಮಾದೇವ ಬಾಕಡ, ದಲಿತ ಮುಖಂಡರು
‘ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಭೂಮಿಯನ್ನು ಭೂಮಾಲಿಕರು ಕಬಳಿಸುತ್ತಿದ್ದು ಈ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ದಲಿತರ ಕುಂದು ಕೊರತೆ ಸಭೆಯಲ್ಲಿ ಧ್ವನಿಯೆತ್ತಲಾಗಿದ್ದರೂ ಅಧಿಕಾರಿಗಳು ಸೂಕ್ತ ಕ್ರಮವಹಿಸಿಲ್ಲ. ಮೀಸಲಿಟ್ಟ ಸ್ಥಳ ಬೇರೆಯವರಿಗೆ ವರ್ಗಾವಣೆಯಾಗಬಾರದು. ಅತಿಕ್ರಮಣಕ್ಕೆ ಅವಕಾಶ ನೀಡಬಾರದು. ದಲಿತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಮುಂದುವರೆಯಲಿದ್ದು ಉಪವಾಸ ನಿರತರಿಗೆ ಯಾವುದೇ ಸಮಸ್ಯೆಯಾದರೆ ಸರಕಾರವೇ ನೇರ ಹೊಣೆ.
-ಮಹಾಲಕ್ಷ್ಮಿ ಬೈಂದೂರು
ಉಪವಾಸ ಸತ್ಯಾಗ್ರಹನಿರತರ ಬೇಡಿಕೆಗಳು
ದಲಿತ ವಿರೋಧಿ ನಿರ್ಣಯ ಕೈಗೊಳ್ಳುತ್ತಿರುವ ಶಿರೂರು ಗ್ರಾಪಂ ಅಧಿಕಾರಿ ಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಶಿರೂರು ಗ್ರಾಮದ ಸರ್ವೆ ನಂಬರ್ 217 /1ಆ1 ರಲ್ಲಿ ದಲಿತ ಕುಟುಂಬಗಳು ಕೃಷಿ ಭೂಮಿಗಾಗಿ ಸಲ್ಲಿಸಿರುವ ಅರ್ಜಿಗೆ ಕೂಡಲೇ ಭೂಮಿ ಮಂಜೂರು ಮಾಡಬೇಕು.
ಬೈಂದೂರು ತಾಲೂಕು ಶಿರೂರು ಗ್ರಾಮದಲ್ಲಿ ಒತ್ತುವರಿ ಆಗಿರುವ ಡಿಸಿ ಮನ್ನಾ ಭೂಮಿಯನ್ನು ತೆರವುಗೊಳಿಸಬೇಕು. ಡಿಸಿ ಮನ್ನಾ ಭೂಮಿಯಲ್ಲಿ ಅಕ್ರಮ ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಬೇಕು. ಡಿಸಿ ಮನ್ನಾ ಭೂಮಿಯನ್ನು ಅರ್ಹ ಪರಿಶಿಷ್ಟ ಸಮುದಾಯಗಳಿಗೆ ಶೀಘ್ರವಾಗಿ ಹಂಚಿಕೆಯ ಮಾಡಬೇಕು. ಬೈಂದೂರು ತಾಲೂಕಿನಲ್ಲಿ 94 ಸಿ ಮತ್ತು ಅಕ್ರಮ-ಸಕ್ರಮ ಹೆಸರಿನಲ್ಲಿ ಆದ ಭೂ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.
ಶಿರೂರು ಗ್ರಾಮದ ಮುದ್ರಮಕ್ಕಿಯ ಪರಿಶಿಷ್ಟಕಾಲೋನಿಯ ದಲಿತ ಕುಟುಂಬ ಗಳು 94 ಸಿ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗೆ ಹಕ್ಕುಪತ್ರ ನೀಡಬೇಕು. ಮನೆ ಧ್ವಂಸ ಪ್ರಕರಣದ ಸಂತ್ರಸ್ತೆ ದಲಿತ ಮಹಿಳೆ ಮಂಗಳ ಇವರ ಕುಟುಂಬಕ್ಕೆ ಕೂಡಲೇ ಪುನರ್ ವಸತಿ ಕಲ್ಪಿಸಬೇಕು. ಪರಿಶಿಷ್ಟ ಸಮುದಾಯದವರಿಗೆ ದೌರ್ಜನ್ಯ ಆದಾಗ ದೂರನ್ನು ಸ್ವೀಕರಿಸಲು ವಿಳಂಬ ಮತ್ತು ಕೌಂಟರ್ ಕೇಸಿನ ಭಯ ಒಡ್ಡದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕ್ರಮ ವಹಿಸಬೇಕು.







