ಕನರಾಡಿ ವಾದಿರಾಜ ಭಟ್, ಕೋಟಿ ಪೂಜಾರಿ ಸೂಡಾಗೆ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಘೋಷಣೆ

ಉಡುಪಿ: ಯುವವಾಹಿನಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ತುಳು ಜಾನಪದ ಸಂಶೋಧಕ, ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಹೆಸರಿನಲ್ಲಿ ನೀಡಲಾಗುವ ಈ ಬಾರಿಯ ಜಾನಪದ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಜಾನಪದ ವಿದ್ವಾಂಸ ಕನರಾಡಿ ವಾದಿರಾಜ ಭಟ್ ಹಾಗೂ ಹಿರಿಯ ಬೈದೇರುಗಳ ದರ್ಶನ ಪಾತ್ರಿ ಕೋಟಿ ಪೂಜಾರಿ ಸೂಡಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯುವವಾಹಿನಿಯ ಸಂಚಾಲಕ ಭಾಸ್ಕರ ಸುವರ್ಣ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಸ್ಕರ ಸುವರ್ಣ, ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಇದೇ ಮಾ.3ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಚಿಟ್ಪಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್ನ ಲಕ್ಷ್ಮೀ ಸಭಾಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾಂಭದಲ್ಲಿ ಇಬ್ಬರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಜಿಲ್ಲೆಯ ಪ್ರಮುಖ ಜಾನಪದ ವಿದ್ವಾಂಸರಲ್ಲಿ ಒಬ್ಬರಾದ ಕನರಾಡಿ ವಾದಿರಾಜ ಭಟ್ ಕನ್ನಡ, ತುಳು ಸಾಹಿತ್ಯ ಹಾಗೂ ಜಾನಪದದಲ್ಲಿ ವ್ಯಾಪಕ ಸಂಶೋಧನೆ ನಡೆಸಿದ್ದಾರೆ. ಶಿಷ್ಟ ಸಾಹಿತ್ಯದ ಒಳವಿನಲ್ಲಿ ಮನಸ್ಸು ಮನಸ್ಸು ಗಳನ್ನು ಬೆಸೆಯುವ ಸಂಸ್ಕೃತಿ, ಸಂಸ್ಕಾರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಕೊಡಗಿನ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಇವರು ಬಸ್ರೂರಿನ ಶಾರದಾ ಪದವಿ ಕಾಲೇಜಿನಲ್ಲಿ ಉಪನ್ಯಾಸರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಜಾನಪದ ವಿದ್ವಾಂಸ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಜಾನಪದ ಕಲಾವಿದ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಹಿರಿಯ ಬೈದೇರುಗಳ ದರ್ಶನ ಪಾತ್ರಿ ಸೂಡ ಕೋಟಿ ಪೂಜಾರಿ (75) ಸುದೀಘಕಾಲದಿಂದ ಬ್ರಹ್ಮಬೈದೇರುಗಳ ಗರೋಡಿಯಲ್ಲಿ ಚಾಕರಿ ಮಾಡುತಿದ್ದಾರೆ. ಕಟ್ಟುಕಟ್ಟಳೆಯ ಪರಂಪರೆಯನ್ನು ದೈವನಿಷ್ಠೆಯಿಂದ ಮಾಡುತಿದ್ದಾರೆ. ಕೃಷಿ ಕಾಯಕ ಹಾಗೂ ಗರೋಡಿ ಸೇವೆಯಲ್ಲೇ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು ಓಟಿ ಪೂಜಾರಿ.
ಹಿರಿಯ ತುಳು ಸಾಹಿತಿ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ಇಬ್ಬರು ಹಿರಿಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದ ಭಾಸ್ಕರ ಸುವರ್ಣ, ಪ್ರಶಸ್ತಿಯು ತಲಾ 12,000ರೂ. ನಗದಿನೊಂದಿಗೆ ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಯನ್ನು ಹೊಂದಿದೆ. ಈ ಬಾರಿ ಮಲ್ಪೆಯ ಸಮಾಜ ಸೇವಕ ಈಶ್ವರ ಮಲ್ಪೆ ಅವರಿಗೆ ವಿಶೇಷ ಗೌರವ ಸಮ್ಮಾನ ನಡೆಯಲಿದೆ ಎಂದು ತಿಳಿಸಿದರು.
ಪ್ರಶಸ್ತಿಯನ್ನು ಕೆಮ್ಮಲಜೆ ಜಾನಪದ ಪ್ರಕಾಶನ ಎಂಟು ವರ್ಷಗಳ ಕಾಲ ನೀಡಿದ್ದರೆ, ಕಳೆದ ನಾಲ್ಕು ವರ್ಷಗಳಿಂದ ಯುವ ವಾಹಿನಿ ಉಡುಪಿ ಘಟಕ ನೀಡುತ್ತಿದೆ.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಕ್ಕ ಶ್ರೀನಿವಾಸ ಕಾಲೇಜಿನ ಪ್ರಾಧ್ಯಾಪಕ, ವಾಗ್ಮಿ ಪ್ರೊ.ಎಂ.ಎಸ್.ಕೋಟ್ಯಾನ್ ಪ್ರದಾನ ಮಾಡುವರು. ತೆಂಕನಿಡಿಯೂರು ಕಾಲೇಜಿನ ಪ್ರಾಧ್ಯಾಪಕ ಡಾ.ದುಗ್ಗಪ್ಪ ಕಜೆಕಾರ್ ಸನ್ಮಾನಿತರನ್ನು ಅಭಿನಂದಿಸುವರು. ಯುವವಾಹಿನಿಯ ಮಂಗಳೂರು ಕೇಂದ್ರ ಸಮಿತಿಯ ಲೋಕೇಶ್ ಕೋಟ್ಯಾನ್ ಹಾಗೂ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷೆ ಅಮಿತಾಂಜಲಿ ಕಿರಣ್, ಬನ್ನಂಜೆ ಬಾಬು ಅಮೀನ್ ಹಾಗೂ ರಘುರಾಮ ಮಾಬಿಯಾನ್ ಉಪಸ್ಥಿತರಿದ್ದರು.







