ಸ್ವಾಭಿಮಾನದ ಬದುಕಿಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಗತ್ಯ: ಬಿ.ವೈ.ರಾಘವೇಂದ್ರ
![ಸ್ವಾಭಿಮಾನದ ಬದುಕಿಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಗತ್ಯ: ಬಿ.ವೈ.ರಾಘವೇಂದ್ರ ಸ್ವಾಭಿಮಾನದ ಬದುಕಿಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಗತ್ಯ: ಬಿ.ವೈ.ರಾಘವೇಂದ್ರ](https://www.varthabharati.in/h-upload/2024/04/02/1257911-ud-a2-nagoor.webp)
ಬೈಂದೂರು, ಎ.2: ದೇಶ, ಕರ್ನಾಟಕ, ಕ್ಷೇತ್ರದ ರೈತರು, ಬಡವರು, ಮಹಿಳೆಯರು ಸಹಿತ ಎಲ್ಲರೂ ಸ್ವಾಭಿಮಾನದಿಂದ ಬದುಕಬೇಕಾದರೆ ಕೇಂದ್ರ ದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ 60 ವರ್ಷಕ್ಕೂ ಹೆಚ್ಚು ಕಾಲ ಈ ದೇಶವನ್ನು ಆಳಿದ್ದರೂ ಬಡವರನ್ನು ಅಭಿವೃದ್ಧಿ ಮಾಡಿಲ್ಲ. ಬಡವರು ಬಡವರಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ ಎಂದು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.
ನಾಗೂರಿನ ಲಲಿತಾಕೃಷ್ಣ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ 5 ರೂ. ಪ್ರೋತ್ಸಾಹಧನ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ರೈತರು ಬರಗಾಲ ಎದುರಿಸುತ್ತಿದ್ದರೂ ಕಳೆದ 6 ತಿಂಗಳಿಂದ ಹಾಲಿನ ಪ್ರೋತ್ಸಾಹ ನೀಡಿಲ್ಲ. 650 ಕೋ.ರೂ. ನೀಡಲು ಬಾಕಿಯಿದೆ. ಕೃಷಿ ಸಮ್ಮಾನ ಅಡಿಯಲ್ಲಿ ನೀಡುತ್ತಿದ್ದ ರಾಜ್ಯದ ಪಾಲನ್ನು ಕಾಂಗ್ರೆಸ್ ಸರಕಾರ ನಿಲ್ಲಿಸಿ ಬಿಟ್ಟಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಸರಕಾರ ಜನರ ಬದುಕಿಗೆ ಮಾರಕವಾಗಿದೆ ಎಂದರು.
ಕಂಬದಕೋಣೆ ಜಿ.ಪಂ. ವ್ಯಾಪ್ತಿಯಲ್ಲಿ ಸುಮಾರು 298 ಕೋ.ರೂ. ಕಾಮಗಾರಿಯಾಗಿದೆ. ಗ್ರಾಮೀಣ ರಸ್ತೆಗೆ 40 ಕೋ.ರೂ., ಕಿಂಡಿ ಅಣೆಕಟ್ಟಿಗೆ 11 ಕೋ.ರೂ., ಬಂದರಿಗೆ 212 ಕೋ.ರೂ., ಶಾಲಾ ಕಾಲೇಜು ಅಭಿವೃದ್ಧಿಗೆ 2.78 ಕೋ.ರೂ., ಕೆರೆ ಅಭಿವೃದ್ಧಿಗೆ 1.10 ಕೋ.ರೂ., ನದಿ ದಂಡೆ ಸಂಕ್ಷಣೆಗೆ 5.72 ಕೋ.ರೂ ನೀಡಲಾಗಿದೆ. ವಿವಿಧ ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿಗೆ 25 ಕೋ.ರೂ. ಒದಗಿಸಲಾಗಿದೆ. ಹೀಗೆ ಮುಂದೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಗ್ರಾಪಂ ಅಧ್ಯಕ್ಷ ಶೇಖರ್ ಖಾರ್ವಿ ಮೊದ ಲಾದವರು ಉಪಸ್ಥಿತರಿದ್ದರು.