ಉಡುಪಿ ನಗರದ ಎತ್ತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ| ಮೂರು ಕಡೆ ಹೊಸ ಬೋರ್ವೇಲ್: ಐದು ಟ್ಯಾಂಕರ್ ಸಜ್ಜು
![ಉಡುಪಿ ನಗರದ ಎತ್ತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ| ಮೂರು ಕಡೆ ಹೊಸ ಬೋರ್ವೇಲ್: ಐದು ಟ್ಯಾಂಕರ್ ಸಜ್ಜು ಉಡುಪಿ ನಗರದ ಎತ್ತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ| ಮೂರು ಕಡೆ ಹೊಸ ಬೋರ್ವೇಲ್: ಐದು ಟ್ಯಾಂಕರ್ ಸಜ್ಜು](https://www.varthabharati.in/h-upload/2024/04/02/1257928-download.webp)
ಉಡುಪಿ: ಉಡುಪಿ ನಗರಕ್ಕೆ ನೀರು ಒದಗಿಸುವ ಬಜೆಯಲ್ಲಿರುವ ಸ್ವರ್ಣ ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ನಗರಸಭೆಯು ಮುಂಜಾಗ್ರತಾ ಕ್ರಮವಾಗಿ ನದಿಯ ಗುಂಡಿಗಳಲ್ಲಿ ಶೇಖರಣೆ ಗೊಂಡ ನೀರನ್ನು ಪಂಪ್ ಮಾಡಿ ಹರಿಸಲು ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ.
ಸದ್ಯ ಬಜೆಯಲ್ಲಿ 5.13 ಮೀಟರ್ ನೀರಿನ ಸಂಗ್ರಹ ಇದ್ದು, ಮೇ 15ರವರೆಗೆ ಈ ನೀರು ಸಾಕಾಗುತ್ತದೆ. ಅದರ ನಂತರ ಮಳೆ ಬಾರದಿದ್ದರೆ ಸ್ವರ್ಣ ನದಿಯ ಶಿರೂರು ಸಮೀಪದ ಹೊಂಡಗಳಲ್ಲಿ ಶೇಖರಣೆಗೊಂಡಿರುವ ನೀರನ್ನು ಪಂಪ್ ಮಾಡಿ ಬಜೆಗೆ ಹರಿಯುವಂತೆ ಮಾಡಲು ಈಗಾಗಲೇ ಟೆಂಡರ್ ಕರೆಯ ಲಾಗಿದೆ. ಈ ಮೂಲಕ ನೀರಿನ ಸಮಸ್ಯೆ ಆಗದಂತೆ ನಗರಸಭೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ನಗರಸಭೆ ವ್ಯಾಪ್ತಿಯ ಮಣಿಪಾಲ ಇಂಡಸ್ಟ್ರೀಯಲ್ ಏರಿಯಾ, ಸುಬ್ರಹ್ಮಣ್ಯ ನಗರ, ಸಂತೆಕಟ್ಟೆ ಸೇರಿದಂತೆ ಕೆಲವು ಎತ್ತರ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದ್ರಾಳಿ, ಸಂತೆಕಟ್ಟೆ, ಕಸ್ತೂರ್ಬಾ ನಗರ ಮೂರು ಹೊಸ ಬೋರ್ವೆಲ್ಗಳನ್ನು ಕೊರೆದು ಎತ್ತರ ಪ್ರದೇಶಗಳಿಗೆ ಹೊಂದಾಣಿಕೆ ಮಾಡಿ ನೀರನ್ನು ಪೂರೈಸಲಾಗುತ್ತಿದೆ ಎಂದು ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ನಿಗದಿ ಪಡಿಸಿರುವ ಸರಕಾರಿ ದರದಂತೆ ಐದು ಟ್ಯಾಂಕರ್ ಗಳನ್ನು ಟೆಂಡರ್ ಕರೆದು ಸಿದ್ಧಪಡಿಸಿ ಇಡಲಾಗಿದೆ. ನೀರಿನ ಸಮಸ್ಯೆ ಕಂಡು ಬರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತದೆ. ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಎಲ್ಲೂ ಬಂದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.