ನರೇಂದ್ರ ಮೋದಿ ಸಂವಿಧಾನ ಬದಲಾಯಿಸುವ ಕೆಲಸ ಮಾಡಲ್ಲ: ಯತ್ನಾಳ್
![ನರೇಂದ್ರ ಮೋದಿ ಸಂವಿಧಾನ ಬದಲಾಯಿಸುವ ಕೆಲಸ ಮಾಡಲ್ಲ: ಯತ್ನಾಳ್ ನರೇಂದ್ರ ಮೋದಿ ಸಂವಿಧಾನ ಬದಲಾಯಿಸುವ ಕೆಲಸ ಮಾಡಲ್ಲ: ಯತ್ನಾಳ್](https://www.varthabharati.in/h-upload/2024/04/03/1258161-ud-a3-yathnal.webp)
ಉಡುಪಿ: ಬಿಜೆಪಿ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬುದು ಕೇವಲ ಭ್ರಮೆ. ಯಾವ ಕಾರಣಕ್ಕೂ ನರೇಂದ್ರ ಮೋದಿ ಭಾರತದ ಸಂವಿಧಾನವನ್ನು ಬದಲಾವಣೆ ಮಾಡುವಂತಹ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆಯ ಪೂರ್ವಭಾವಿಯಾಗಿ ಕಡಿಯಾಳಿ ಯಲ್ಲಿರುವ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಉಡುಪಿಯಲ್ಲಿ ಕೋಟ, ಮಂಗಳೂರಿನಲ್ಲಿ ಚೌಟ, ಕಾಂಗ್ರೆಸ್ಗೆ ಕೇವಲ ಗೂಟ. ಈ ಚುನಾವಣೆ ಮೋದಿ, ಅಧಿಕಾರಕ್ಕಾಗಿ ಅಲ್ಲ. ಬದಲು ದೇಶ, ಧರ್ಮ ಉಳಿಸುವ ಚುನಾವಣೆಯಾಗಿದೆ. ಮೋದಿ ನಡೆಸಿರುವ 10 ವರ್ಷಗಳ ಆಡಳಿತ ಕೇವಲ ಟ್ರೇಲರ್ ಮಾತ್ರ. ಇನ್ನು ಪೂರ್ಣ ಪಿಕ್ಚರ್ ಮುಂದಿನ 10 ವರ್ಷಗಳಲ್ಲಿ ತೋರಿಸಲಿದ್ದಾರೆ. ಯಾವುದೇ ಭ್ರಷ್ಟಾಚಾರಿಗಳನ್ನು ಮೋದಿ ಬಿಡುವುದಿಲ್ಲ. ಈಗ ಕೆಜ್ರಿವಾಲ ಮುಂದೆ ಡಿಂಗ್ರಿವಾಲ ಎಂದು ಅವರು ಟೀಕಿಸಿದರು.
ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮೋದಿ ಸರಕಾರ 10 ವರ್ಷಗಳ ನೀತಿಯ ಕಾರಣ ಕ್ಕಾಗಿ ಮತ್ತೆ ಬಿಜೆಪಿಗೆ ಮತ ಹಾಕಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ನಮ್ಮಲ್ಲಿ ಇಲ್ಲ. ಕಾಂಗ್ರೆಸ್ ಅಂದರೆ ಸುಳ್ಳು. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ದೂರಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್, ಶಾಸಕರಾದ ಯಶ್ಪಾಲ್ ಎ.ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತರಿದ್ದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಸ್ವಾಗತಿಸಿ ದರು. ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.