ದ್ವಿತೀಯ ಪಿಯು ಫಲಿತಾಂಶ: ನಿರೀಕ್ಷಿಸಿದ ಅಂಕಗಳು ಗಳಿಸಿದ ಖುಷಿಯಿದೆ: ಹರ್ಷಿತ್

ಉಡುಪಿ, ಎ.11: ‘ನಾನು ಪರೀಕ್ಷೆಯಲ್ಲಿ 596 ಅಂಕಗಳನ್ನು ನಿರೀಕ್ಷಿಸಿದ್ದೆ. ಇಂದು ಪ್ರಕಟಿತ ಫಲಿತಾಂಶದಲ್ಲಿ ನನಗೆ ಅಷ್ಟೇ ಅಂಕಗಳು ಬಂದಿವೆ. ಸಿಎ ಮಾಡುವುದು ನನ್ನ ಗುರಿಯಾಗಿದ್ದು, ಅದರಲ್ಲಿ ಮುಂದುವರಿಯುತ್ತೇನೆ.’ ಹೀಗೆಂದವರು ಬುಧವಾರ ಪ್ರಕಟಿತ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ 596 ಅಂಕಗಳೊಂದಿಗೆ ರಾಜ್ಯದಲ್ಲೇ ದ್ವಿತೀಯ ಸ್ಥಾನವನ್ನು ಉಳಿದ ನಾಲ್ವರೊಂದಿಗೆ ಹಂಚಿಕೊಂಡ ನಗರದ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ಎಸ್.ಎಚ್.
ನನಗೆ ಮೊದಲಿನಿಂದಲೂ ವಿಜ್ಞಾನದಲ್ಲಿ ಆಸಕ್ತಿ ಇರಲಿಲ್ಲ. ಅಕೌಂಟೆನ್ಸಿ ನನ್ನ ನೆಚ್ಚಿನ ವಿಷಯ (ಸಬ್ಜೆಕ್ಟ್) ಆಗಿತ್ತು. ಹೀಗಾಗಿ ನಾನು ವಾಣಿಜ್ಯ ವಿಭಾಗ ಸೇರಿಕೊಂಡೆ. ನನಗೆ ಸಿಎ ಮಾಡಬೇಕು ಎಂಬ ಉದ್ದೇಶ ಇದೆ. ಇಂದು ಸಿಎಗೆ ತುಂಬಾ ಸ್ಕೋಪ್ ಸಹ. ಅಲ್ಲದೇ ವಾಣಿಜ್ಯ ವಿಭಾಗದಲ್ಲೂ ವೃತ್ತಿಪರ ಕೋರ್ಸ್ ಗಳಿವೆ ಎಂದು ಹರ್ಷಿತ್ ನುಡಿದರು.
ತರಗತಿಯಲ್ಲಿ ಮಾಡಿದ ಪಾಠವನ್ನು ಕೇಳಿಸಿಕೊಳ್ಳುತ್ತಿದ್ದೆ. ಪಾಠ ಮುಗಿಸಿ ಬಂದ ಮೇಲೆ ಅರ್ಧ ಗಂಟೆ ರಿವಿಜನ್ ಮಾಡುತ್ತಿದೆ. ಪರೀಕ್ಷೆಯ ಒಂದು ವಾರಕ್ಕೆ ಮುಂಚೆ ಹಿಂದಿನ ಪ್ರಶ್ನೆಪತ್ರಿಕೆಗಳ ಅಧ್ಯಯನ ಮಾಡಿದೆ. ವಿಶೇಷ ಪ್ರಯತ್ನಗಳೇನು ಬೇಕಾಗಿಲ್ಲ. ಅವತ್ತಿನ ಪಾಠ ಅವತ್ತೇ ಓದಿಕೊಂಡರೆ ಸಾಕು. ಆದರೆ ಶಿಕ್ಷಕರು ಮತ್ತು ಹೆತ್ತವರ ಬೆಂಬಲ ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ. ಶಿಕ್ಷಕರು ನನ್ನನ್ನು ಪರೀಕ್ಷೆ ಗೆ ತಯಾರಿ ಮಾಡಿದ್ದರು. ಮುಂದಿನ ವರ್ಷಗಳ ಪ್ರಶ್ನೆ ಪತ್ರಿಕೆ ಕೊಟ್ಟು ಸಹಕರಿಸಿದರು. ಮನೆಯವರು ನನಗೆ ವಿಶೇಷ ಪ್ರೋತ್ಸಾಹ ನೀಡಿದರು ಎಂದು ಹರ್ಷಿತ್ ನುಡಿದರು.







