ಗ್ಯಾರಂಟಿ ಯೋಜನೆ ಕಾಂಗ್ರೆಸ್ನ ಕೈಹಿಡಿಯಲಿದೆ: ಐವನ್ ಡಿಸೋಜ
ಉಡುಪಿ, ಎ.17: ಎಲ್ಲರ ನಿರೀಕ್ಷೆಗಳನ್ನು ಮೀರಿ ಸಿದ್ಧರಾಮಯ್ಯ ಸರಕಾರ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಕೈಹಿಡಿಯಲಿದೆ. ಕಾಂಗ್ರೆಸ್ ಪಕ್ಷ 20ಕ್ಕಿಂತ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ನ ರಾಜ್ಯ ವಕ್ತಾರ ಐವನ್ ಡಿಸೋಜ ಆಶಾವಾದ ವ್ಯಕ್ತಪಡಿಸಿದ್ದಾರೆ.
ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಬಡವರ ಹಾಗೂ ಮಹಿಳೆಯರ ಆರ್ಥಿಕ ಸುಧಾರಣೆ ಗಾಗಿ ಕೈಗೊಂಡ ಕಾರ್ಯಕ್ರಮಗಳು ಎಂಬುದನ್ನು ರಾಜ್ಯದ ಆರೂವರೆ ಕೋಟಿ ಜನರು ಒಪ್ಪಿಕೊಂಡಿದ್ದಾರೆ ಎಂದವರು ಹೇಳಿದರು.
ರಾಜ್ಯದಲ್ಲಿರುವ ಪ್ರತಿ ಕುಟುಂಬ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಲ್ಲಾ ಒಂದು ಯೋಜನೆಯ ಫಲಾನುಭವಿಯಾಗಿದೆ ಎಂಬುದು ಪ್ರಚಾರಕ್ಕಾಗಿ ತೆರಳಿದಾಗ ನಮಗೆ ಅನುಭವಕ್ಕೆ ಬಂದಿವೆ. ಯೋಜನೆಯ ಪ್ರತಿಯೊಬ್ಬ ಫಲಾನುಭವಿಯೂ ಈ ಬಗ್ಗೆ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದೆ. ಇದು ನಮ್ಮಲ್ಲಿ ಗೆಲುವಿನ ಹುರುಪನ್ನು ತುಂಬಿದೆ ಎಂದರು.
ಮುಂದಿನ ಲೋಕಭಾ ಚುನಾವಣೆಗಾಗಿ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ನಾರಿ ನ್ಯಾಯ್ ಗ್ಯಾರಂಟಿ ಎಂಬ ಐದು ಗ್ಯಾರಂಟಿ ಯೋಜನೆಯನ್ನು ದೇಶದ ಜನತೆಗೆ ಘೋಷಿಸಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ಈ ಐದು ಗ್ಯಾರಂಟಿಗಳೂ ದೇಶಾದ್ಯಂತ ಅನುಷ್ಠಾನಗೊಳ್ಳಲಿದೆ. ಇದರಲ್ಲಿ ಮಹಾಲಕ್ಷ್ಮಿ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂ.ನ ಭರವಸೆ ನೀಡಲಾಗಿದೆ ಎಂದರು.
ಈ ಬಾರಿ ಕರಾವಳಿಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಅವರ ಗೆಲುವು ಸಂಸತ್ತಿನಲ್ಲಿ ಕ್ಷೇತ್ರಕ್ಕೆ ಸಮರ್ಥ ಜನಪ್ರತಿನಿಧಿಯನ್ನು ಒದಗಿಸಲಿದೆ.ಇಲ್ಲಿ ಹೆಗ್ಡೆ ಅವರ ಗೆಲುವು ನೂರಕ್ಕೆ ನೂರು ಗ್ಯಾರಂಟಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹ್ಡೆ ಕೊಳ್ಕೆಬೈಲ್, ಭಾಸ್ಕರ ರಾವ್ ಕಿದಿಯೂರು, ಕೃಷ್ಣಮೂರ್ತಿ ಆಚಾರ್ಯ, ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.