ಸೌಜನ್ಯಳಿಗೆ ನ್ಯಾಯಕ್ಕಾಗಿ ನೋಟಾಕ್ಕೆ ಮತ ನೀಡಿ: ಮಹೇಶ್ ಶೆಟ್ಟಿ ತಿಮರೋಡಿ
ಉಡುಪಿ: 12 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ, ಬರ್ಬರವಾಗಿ ಹತ್ಯೆಗೊಳಗಾದ ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ 17ರ ಹರೆಯದ ಸೌಜನ್ಯಳಿಗೆ ಹಾಗೂ ಆಕೆಯ ಹೆತ್ತವರಿಗೆ ಇನ್ನೂ ನ್ಯಾಯದೊರಕಿಲ್ಲ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಸೌಜನ್ಯಳಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ನೋಟಾಕ್ಕೆ (ಮೇಲಿನ ಯಾವ ಅಭ್ಯರ್ಥಿಯೂ ಅಲ್ಲ) ಮತ ಚಲಾಯಿಸುವಂತೆ ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯಳ ಭೀಕರ ಹತ್ಯೆ ನಡೆದು 12 ವರ್ಷಗಳೇ ಕಳೆದುಹೋದವು.ಕಳೆದ 11 ವರ್ಷಗಳಿಂದ ನ್ಯಾಯಕ್ಕಾಗಿ ನಾವು ನಡೆಸುತ್ತಿರುವ ನಿರಂತರ ಹೋರಾಟದ ಹೊರತಾಗಿಯೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಭ್ರಷ್ಟ ವ್ಯವಸ್ಥೆಯಿಂದ ಕುಟುಂಬಕ್ಕೆ ಸಿಕ್ಕಿದ್ದು, ಆರೋಪಿಗಳ ಪ್ರಭಾವಿ ಕುಟುಂಬದಿಂದ ಅಪರಮಾನ, ಹೋರಾಟಗಾರರ ಮೇಲೆ ಸುಳ್ಳು ಕೇಸುಗಳು ಮಾತ್ರ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಕರಾವಳಿಯ ಮತದಾರರು ಧರ್ಮಸ್ಥಳ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ 2012ರವರೆಗೆ ಹಿಂದಿನ 10 ವರ್ಷಗಳಲ್ಲಿ ನಡೆದ ಸೌಜನ್ಯಳೂ ಸೇರಿದಂತೆ 18 ಅಮಾಯಕ ಹೆಣ್ಣು ಮಕ್ಕಳ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಮತ ಚಲಾವಣೆ ವೇಳೆ ನೋಟಾ ಬಟನ್ ಒತ್ತಬೇಕು ಎಂದವರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತಮ್ಮಣ್ಣ ಶೆಟ್ಟಿ, ಚರಣ್ ಶೆಟ್ಟಿ, ಅನಿಲ್, ದಿನೇಶ್ ಗಾಣಿಗ ಉಪಸ್ಥಿತರಿದ್ದರು.