ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿರುವ ಕುಡಿಯುವ ನೀರಿನ ಘಟಕಗಳು!
ದುರಸ್ಥಿ ಕಾಣದ ಶೀತಲೀಕೃತ ಯಂತ್ರಗಳು: ಅರವಟ್ಟಿಗೆ ಸ್ಥಾಪಿಸಲು ಆಗ್ರಹ
ಉಡುಪಿ, ಮೇ 5: ಸುಡು ಬಿಸಿಲ ಧಗೆಯ ವಾತಾವರಣದಲ್ಲಿ ನೀರಡಿಕೆ ಯಾದರೆ ಕುಡಿಯಲು ಹನಿ ನೀರು ಸಿಗದ ಪರಿಸ್ಥಿತಿ ಉಡುಪಿ ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಎದುರಾಗಿದೆ. ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಶೀತಲೀಕೃತ ಕುಡಿಯುವ ನೀರಿನ ಯಂತ್ರಗಳಿದ್ದರೂ ಊಟಕಿಲ್ಲದ ಉಪ್ಪಿನ ಕಾಯಿಯಂತಾಗಿವೆ.
ಹಳೆ ಸರಕಾರಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಗಡಿಯಾರ ಗೋಪುರದ ಬಳಿಯ ಪೋಲಿಸ್ ಚೌಕಿ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಶೀತಲೀಕೃತ ಕುಡಿಯುವ ನೀರಿನ ಯಂತ್ರಗಳು ಕೆಟ್ಟು ಹೋಗಿ ವರ್ಷಗಳೇ ಕಳೆದಿವೆ. ಸಾರ್ವಜನಿಕರು ದಾಹ ತೀರಿಸಲು ನೀರಿನ ಘಟಕಗಳತ್ತ ತೆರಳಿ ನಳ ತಿರುಗಿಸಿ ಹನಿ ನೀರು ಸಿಗದೆ ವಾಪಸ್ಸಾಗುವ ಅಯ್ಯೋಮಯ ದೃಶ್ಯಗಳು ಕಂಡುಬರುತ್ತಿವೆ.
ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಶ್ರೀೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳ ದಲ್ಲಿಯೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಯಾತ್ರಿಕರು ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಉಷ್ಣ ಹವೆ ವಾತಾವರಣದಿಂದ ಜನರು ಕೆಂಗೆಟ್ಟು ಹೋಗಿದ್ದಾರೆ.
ಉಡುಪಿ ಜಿಲ್ಲಾಡಳಿತ, ನಗರಸಭೆ ಈ ಕುರಿತು ತಕ್ಷಣವೇ ಕ್ರಮ ತೆಗೆದು ಕೊಂಡು ನಗರದ ಸಾರ್ವಜನಿಕ ಸ್ಥಳಗಳಲ್ಲಿರುವ ಶೀತಲೀಕೃತ ಕುಡಿಯುವ ನೀರಿನ ಯಂತ್ರಗಳನ್ನು ದುರಸ್ಥಿಪಡಿಸಬೇಕು. ಅಲ್ಲದೆ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ನೀರಿನ ಅರವಟ್ಟಿಗೆ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳ ಕಾಡು, ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.