ಎಸೆಸೆಲ್ಸಿ ಫಲಿತಾಂಶ: ಮತ್ತೆ ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ನೆಗೆದ ಉಡುಪಿ
ಆರು ವರ್ಷಗಳ ಬಳಿಕ ಜಿಲ್ಲೆಗೆ ಅಗ್ರಸ್ಥಾನ
ಉಡುಪಿ: ಆರು ವರ್ಷಗಳ ಕಾಯುವಿಕೆಯ ಬಳಿಕ ಉಡುಪಿ ಜಿಲ್ಲೆ ಎಸೆಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮತ್ತೆ ಮೊದಲ ಸ್ಥಾನ ಪಡೆದಿದೆ. ಇಂದು ಬೆಂಗಳೂರಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ. 94 ತೇರ್ಗಡೆಯೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನಗೊಂಡಿತು.
2018ರಲ್ಲಿ ಉಡುಪಿ ಜಿಲ್ಲೆ ಕೊನೆಯ ಬಾರಿ ರಾಜ್ಯದಲ್ಲಿ ಅಗ್ರಸ್ಥಾನಿಯಾಗಿತ್ತು. ಆ ಬಳಿಕ ಫಲಿತಾಂಶದಲ್ಲಿ ಹೆಚ್ಚಿನ ವ್ಯತ್ಯಾಸ ವಾಗದಿದ್ದರೂ ವಿವಿಧ ಕಾರಣಗಳಿಂದ ರ್ಯಾಂಕಿಂಗ್ನಲ್ಲಿ ಹಿನ್ನಡೆ ಕಾಣುತ್ತಿತ್ತು. ಕಳೆದ ವರ್ಷ ಉಡುಪಿ ಜಿಲ್ಲೆಯ ಫಲಿತಾಂಶ ಶೇ.91ರಷ್ಟಿದ್ದರೂ ಅದು 17ನೇ ಸ್ಥಾನ ಪಡೆದಿತ್ತು. ಇದೀಗ ಜಿಲ್ಲೆ ಮತ್ತೆ ರಾಜ್ಯದಲ್ಲಿ ಒಂದನೇ ಸ್ಥಾನಕ್ಕೆ ಪುಟಿದು ನೆಗೆದಿದೆ.
ಶೇ.94ರ ತೇರ್ಗಡೆಯೊಂದಿಗೆ ರಾಜ್ಯದಲ್ಲಿ ಮತ್ತೆ ಅಗ್ರಸ್ಥಾನ ಪಡೆದಿರುವುದರಿಂದ ಜಿಲ್ಲೆಯ ಶಿಕ್ಷಣ ಪ್ರೇಮಿಗಳು, ಜನ ಸಾಮಾನ್ಯರು, ವಿದ್ಯಾರ್ಥಿಗಳು, ಹೆತ್ತವರು ಹಾಗೂ ಜಿಲ್ಲಾಡಳಿತದೊಂದಿಗೆ ಇಲಾಖೆಯ ಅಧಿಕಾರಿಗಳ ಸಂಭ್ರಮಕ್ಕೆ ಕಾರಣ ವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆ ಮತ್ತೆ ತನ್ನ ನಿಶ್ಚಿತ ಸ್ಥಾನಕ್ಕೆ ಮರಳಿದೆ ಎಂಬುದು ಎಲ್ಲರ ಒಕ್ಕೊರಳ ಅಭಿಪ್ರಾಯವಾಗಿದೆ.
ಜಿಲ್ಲೆಯಲ್ಲಿ ಗರಿಷ್ಠ 625ರಲ್ಲಿ 623 ಅಂಕ ಪಡೆದ ಕಾರ್ಕಳದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ ಎನ್. ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದು, ಜಿಲ್ಲೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅದೇ ಶಾಲೆಯ ಶೋಧನಾ ಆರ್. ಹೆಗ್ಡೆ 622 ಅಂಕಗಳನ್ನು ಪಡೆಯು ಮೂರನೇ ಜಿಲ್ಲೆಗೆ ಎರಡನೇಯವರಾಗಿದ್ದಾರೆ. ಇನ್ನು ಕನ್ನಡ ಮಾಧ್ಯಮದ ಮಟ್ಟಿಗೆ ಕಾಪು ತಾಲೂಕಿನ ಉಚ್ಚಿಲದ ಸರಸ್ವತಿ ಮಂದಿರ ಪ್ರೌಢ ಶಾಲೆಯ ಸಮರ್ಥ ಜೋಶಿ 621 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಅಗ್ರಸ್ಥಾನ ಪಡೆದಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 14018 ವಿದ್ಯಾರ್ಥಿಗಳಲ್ಲಿ 13,246 ಮಂದಿ ತೇರ್ಗಡೆಗೊಳ್ಳು ವುದರೊಂದಿಗೆ ಶೇ. 94ರ ಸಾಧನೆಯೊಂದಿಗೆ ಜಿಲ್ಲೆ ಅಗ್ರಸ್ಥಾನಿಯಾಗಿದೆ. ಪರೀಕ್ಷೆ ಬರೆದ 7254 ಬಾಲಕರಲ್ಲಿ 6659 ಮಂದಿ ತೇರ್ಗಡೆಗೊಂಡಿದ್ದರೆ, 6764 ಬಾಲಕಿಯರ ಪೈಕಿ 6587 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಡಿಡಿಪಿಐ ಗಣಪತಿ ಅವರು ಮಾಹಿತಿ ನೀಡಿದ್ದಾರೆ.
ರೆಗ್ಯುಲರ್ ವಿದ್ಯಾರ್ಥಿಗಳು ಶೇ.97: ಪ್ರಥಮ ಬಾರಿ ಪರೀಕ್ಷೆ ಬರೆದ ರೆಗ್ಯೂಲರ್ ವಿದ್ಯಾರ್ಥಿಗಳ ಉತ್ತೀರ್ಣತೆಯ ಫಲಿತಾಂಶವನ್ನು ಪರಿಗಣಿಸಿದರೆ ಉಡುಪಿ ಜಿಲ್ಲೆಯ ಸಾಧನೆ ಶೇ.97 ಆಗಿದೆ. ಪುನರಾವರ್ತಿತ ವಿದ್ಯಾರ್ಥಿಗಳು, ಖಾಸಗಿ ವಿದ್ಯಾರ್ಥಿಗಳು ಹಾಗೂ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳ ತೇರ್ಗಡೆಯನ್ನು ಪರಿಗಣನೆಗೆ ತೆಗೆದುಕೊಂಡಾಗ ಅವರು ಶೇ.94ಕ್ಕೆ ಇಳಿದಿದೆ.
ಒಟ್ಟು 13,260 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 12,860 ಮಂದಿ ತೇರ್ಗಡೆಗೊಂಡು ಶೇ.97 ಫಲಿತಾಂಶ ಬಂದಿತ್ತು. ಆದರೆ ಪುನರಾವರ್ತಿತ ವಿದ್ಯಾರ್ಥಿಗಳು ಶೇ.64, ಖಾಸಗಿ ವಿದ್ಯಾರ್ಥಿಗಳು ಶೇ.17 ಹಾಗೂ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಶೇ.41 ತೇರ್ಗಡೆಗೊಂಡಿದ್ದರಿಂದ ಅಂತಿಮವಾಗಿ ಜಿಲ್ಲೆಯ ಫಲಿತಾಂಶ ಶೇ.94 ಎಂದು ಘೋಷಿಸಲಾಗಿತ್ತು.
ಕಾರ್ಕಳ ವಲಯ ಮೇಲುಗೈ: ವಲಯವಾರು ಫಲಿತಾಂಶ ನೋಡಿದಾಗ ಜಿಲ್ಲೆಯಲ್ಲಿ ಕಾರ್ಕಳ ವಲಯ ಶೇ.96.3 ಫಲಿತಾಂಶದೊಂದಿಗೆ ಮೊದಲ ಸ್ಥಾನಿಯಾಗಿದೆ.ಕುಂದಾಪುರ ವಲಯ ಶೇ.95.9 ಫಲಿತಾಂಶದೊಂದಿಗೆ ಮೂರನೇ ಹಾಗೂ ಬೈಂದೂರು ವಲಯ ಶೇ.95.6 ನಾಲ್ಕನೇ ಸ್ಥಾನ ಪಡೆಯಿತು. ಉಳಿದಂತೆ ಬ್ರಹ್ಮಾವರ ವಲಯ ಶೇ.94.2 ಹಾಗೂ ಉಡುಪಿ ವಲಯ ಶೇ.91.8 ಫಲಿತಾಂಶ ಪಡೆದಿದೆ.
ಗ್ರಾಮೀಣ ಮಕ್ಕಳೇ ಬುದ್ಧಿವಂತರು: ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳೇ ಕಲಿಕೆಯಲ್ಲಿ ಬುದ್ಧಿವಂತರು ಎಂಬುದನ್ನು ಇಂದಿನ ಫಲಿತಾಂಶ ತೋರಿಸಿದೆ. ಜಿಲ್ಲೆಯಲ್ಲಿ ಶೇ.95ರಷ್ಟು ಗ್ರಾಮೀಣ ಭಾಗದ ಮಕ್ಕಳು ಉತ್ತೀರ್ಣರಾದರೆ, ನಗರ ಪ್ರದೇಶದ ಮಕ್ಕಳ ಉತ್ತೀರ್ಣತೆ ಪ್ರಮಾಣ ಶೇ.91 ಆಗಿದೆ.
ಗ್ರಾಮೀಣ ಭಾಗದ 10,876 ಮಂದಿ ವಿದ್ಯಾರ್ಥಿಗಳಲ್ಲಿ 10,375 ಮಂದಿ ಉತ್ತೀರ್ಣರಾಗಿದ್ದಾರೆ. 5632 ಬಾಲಕರಲ್ಲಿ 5241 ಮಂದಿ ಹಾಗೂ 5244 ಬಾಲಕಿಯರಲ್ಲಿ 5134 ಮಂದಿ ತೇರ್ಗಡೆಯಾಗಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದ 3142 ಮಂದಿಯಲ್ಲಿ 2871 ಮಂದಿ ಉತ್ತೀಣರಾಗಿದ್ದಾರೆ. 1622 ಬಾಲಕರಲ್ಲಿ 1418 ಮಂದಿ ಹಾಗೂ 1520 ಬಾಲಕಿಯರಲ್ಲಿ 1453 ಮಂದಿ ತೇರ್ಗಡೆಗೊಂಡಿದ್ದಾರೆ.
ಆಂಗ್ಲ ಮಾಧ್ಯಮ ಮೇಲುಗೈ: ಮಾಧ್ಯಮದ ವಿಷಯ ಬಂದಾಗ ಉಡುಪಿ ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೇ ಮೇಲುಗೈ ಪಡೆದಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ.97 ಮಂದಿ ಹಾಗೂ ಕನ್ನಡ ಮಾಧ್ಯಮದಲ್ಲಿ ಬರೆದ ಶೇ.92 ಮಂದಿ ಉತ್ತೀರ್ಣರಾಗಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ 7819 ಮಂದಿ ಪರೀಕ್ಷೆ ಬರೆದಿದ್ದು 7548 ಮಂದಿ ಪಾಸಾಗಿದ್ದರೆ, ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆದ 6199 ಮಂದಿಯಲ್ಲಿ 5698 ಮಂದಿ ತೇರ್ಗಡೆಗೊಂಡಿದ್ದಾರೆ.
ಜಾತಿವಾರು ಫಲಿತಾಂಶ: ಜಿಲ್ಲೆಯಲ್ಲಿ ಜಾತಿವಾರು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶೇ.92ರಷ್ಟು, ಪರಿಶಿಷ್ಟ ಪಂಗಡದ ಶೇ.93, ಪ್ರವರ್ಗ-1ರ ಶೇ.95, 2ಎ ವರ್ಗದ ಶೇ.96, 2ಬಿ-ಶೇ.90, 3ಎ-ಶೇ.98, 3ಬಿ-ಶೇ.97 ಹಾಗೂ ಇತರೆ-ಶೇ.94ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಷಯವಾರು ಫಲಿತಾಂಶ: ವಿಷಯವಾರು ವಿದ್ಯಾರ್ಥಿಗಳ ಸಾಧನೆಯನ್ನು ಗಣನೆಗೆ ತೆಗೆದುಕೊಂಡರೆ ಎಲ್ಲಾ ವಿಷಯ ಗಳಲ್ಲೂ ಶೇ.97ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡು ವಿಶಿಷ್ಟ ಸಾಧನೆ ಮಾಡಿದ್ದಾರೆ. ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಎಲ್ಲಾ ವಿಷಯಗಳಲ್ಲೂ ಶೇ.97 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಎಸೆಸೆಲ್ಸಿಯಲ್ಲಿ ಉಡುಪಿ ಜಿಲ್ಲೆಯ ಸಾಧನೆ
ವರ್ಷ ಫಲಿತಾಂಶ ಶೇ. ರಾಜ್ಯದಲ್ಲಿ ಸ್ಥಾನ
2015 - 93.37 - 1
2016 - 89.64 - 2
2017 - 84.23 - 1
2018 - 88.30 - 1
2019 - 89.49 - 5
2020 - 86.48 - 9
2021 - 100%
2022 - 89.46 - 13
2023 - 91 - 17
2024 - 94 - 1
‘ವರ್ಷದ ಪ್ರಾರಂಭದಿಂದಲೇ ಜಿಲ್ಲೆಯ ಎಲ್ಲಾ ಶಿಕ್ಷಕರು ಪಟ್ಟ ಶ್ರಮಕ್ಕೆ ತಕ್ಕ ಫಲಿತಾಂಶ ಬಂದಿದೆ.ಶೈಕ್ಷಣಿಕ ವರ್ಷ ಆರಂಭದಿಂದಲೇ ಮಕ್ಕಳ ತಯಾರಿ ಮಾಡಲು ಹಾಕಿಕೊಂಡ ಯೋಜನೆ ಹಾಗೂ ಅದನ್ನು ವಿಶೇಷ ಪರಿಶ್ರಮದೊಂದಿಗೆ ಶಿಕ್ಷಕರು ಅನುಷ್ಠಾನಗೊಳಿಸಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸ್ಪೆಷಲ್ ಕ್ಲಾಸ್ಗಳ ಮೂಲಕ, ವಿಷಯವಾರು ಶಿಕ್ಷಕರ ಗುಂಪನ್ನು ಮಾಡಿ ಅವರ ಮೂಲಕ ಎರಡು ಸುತ್ತಿನಲ್ಲಿ ಮಕ್ಕಳಿಗೆ ನೀಡಿದ ವಿಶೇಷ ತರಬೇತಿ ಉತ್ತಮ ಫಲ ನೀಡಿದೆ. ಅಲ್ಲದೇ ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಮನೆಮನೆಗೆ ಭೇಟಿ ನೀಡಿ ಅವರ ಕಲಿಕೆಯ ವಾತಾವರಣವನ್ನು ನಿರ್ಮಿಸಿ ಹೆತ್ತವರಿಗೆ ವಿಷಯ ಮನದಟ್ಟು ಮಾಡಲಾಗಿತ್ತು. ಅಂತಿಮ ಪರೀಕ್ಷೆಗೆ ಮುನ್ನ ಮಾದರಿ ಪರೀಕ್ಷೆ ನಡೆಸಿ ಮಕ್ಕಳಲ್ಲಿ ದೈರ್ಯ ತುಂಬಲಾಗಿತ್ತು. ಇದರೊಂದಿಗೆ ಈ ಬಾರಿ ಪರೀಕ್ಷೆಯಲ್ಲಿ ಅಳವಡಿಸಿದ ವೆಬ್ಕಾಸ್ಟಿಂಗ್ ಕೂಡಾ ನಮಗೆ ನ್ಯಾಯಯುತ ಸ್ಥಾನ ದೊರೆಯುವಲ್ಲಿ ಪಾತ್ರ ವಹಿಸಿದೆ.
-ಗಣಪತಿ, ಡಿಡಿಪಿಐ ಉಡುಪಿ ಜಿಲ್ಲೆ