"ನನ್ನ ಅವಧಿಯ ಅನುದಾನದ ಕಾಮಗಾರಿಗಳ ಉದ್ಘಾಟನೆಗೆ ನನ್ನನ್ನು ಕರೆಯುತ್ತಿಲ್ಲ"
ಉಡುಪಿ ಶಾಸಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ರಘುಪತಿ ಭಟ್
![ನನ್ನ ಅವಧಿಯ ಅನುದಾನದ ಕಾಮಗಾರಿಗಳ ಉದ್ಘಾಟನೆಗೆ ನನ್ನನ್ನು ಕರೆಯುತ್ತಿಲ್ಲ ನನ್ನ ಅವಧಿಯ ಅನುದಾನದ ಕಾಮಗಾರಿಗಳ ಉದ್ಘಾಟನೆಗೆ ನನ್ನನ್ನು ಕರೆಯುತ್ತಿಲ್ಲ](https://www.varthabharati.in/h-upload/2024/05/15/1266725-whatsapp-image-2024-05-15-at-52414-pm.webp)
ಉಡುಪಿ: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ರಘುಪತಿ ಭಟ್ ತನ್ನ ಮನೆಯಲ್ಲಿ ಸ್ಥಾಪಿಸಿದ ಚುನಾವಣಾ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಇಂದು ಉಡುಪಿ ಶಾಸಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿದರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೂ ನನಗೆ ಗೌರವ, ಮನ್ನಣೆ, ಪ್ರೀತಿ ಬಿಜೆಪಿ ನಾಯಕರಿಂದ ಸಿಕ್ಕಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ನಿಕಟಪೂರ್ವ ಶಾಸಕನಾಗಿರುವ ನನ್ನ ಫೋಟೋವನ್ನು ಕಚೇರಿಯಿಂದ ತೆಗೆಯುವ ಮಟ್ಟಕ್ಕೆ ಬಿಜೆಪಿ ಹೋಗಿದೆ ಎಂದು ರಘುಪತಿ ಭಟ್ ಬೇಸರ ವ್ಯಕ್ತಪಡಿಸಿದರು.
ಬ್ರಹ್ಮಾವರ ಕಚೇರಿಯಲ್ಲೂ ನನ್ನ ಫೋಟೋವನ್ನು ತೆಗೆಯಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆ ಕರಪತ್ರಗಳಲ್ಲಿ ಮಾಜಿ ಶಾಸಕನ ನೆಲೆಯಲ್ಲಿ ನನ್ನ ಫೋಟೋ ಕೂಡ ಹಾಕಿಲ್ಲ. ನಾನು ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದೇನೆ ಎಂದು ಅವರು ಪ್ರಶ್ನಿಸಿದರು.
ಇವತ್ತಿಗೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಿಂದ. ಈ ಕಾಮಗಾರಿಗಳ ಉದ್ಘಾಟನೆಗೆ ನನ್ನನ್ನು ಕರೆಯುತ್ತಿಲ್ಲ. ಕಾರ್ಯಕರ್ತರು ನನಗೆ ಅಭಿನಂದನೆ ಸಲ್ಲಿಸಿ ಹಾಕುವ ಫ್ಲೆಕ್ಸ್ಗಳನ್ನು ತೆಗೆಸುವ ಪರಿಸ್ಥಿತಿ ಇಲ್ಲಿ ಇದೆ ಎಂದು ಅವರು ಹೇಳಿದರು.
ನೆರೆಯ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾಜಿ ಶಾಸಕರ ಅನುದಾನದಲ್ಲಿ ಯಾವುದೇ ಕಾಮಗಾರಿ ನಡೆದರೂ, ಅವರೇ ಮಾಜಿ ಶಾಸಕರ ಮನೆಗೆ ಹೋಗಿ ಕಾರಿನಲ್ಲಿ ಅವರನ್ನು ಕರೆದುಕೊಂಡು ಬಂದು, ಅವರಿಂದಲೇ ಕಾಮಗಾರಿಯ ಉದ್ಘಾಟನೆ ಮಾಡಿಸುತ್ತಾರೆ. ಅಲ್ಲದೆ ಅವರ ಫೋಟೋ ಕೂಡ ಹಾಕಿಸುತ್ತಾರೆ. ಮೊನ್ನೆ ಲೋಕಸಭಾ ಚುನಾವಣೆಯಲ್ಲೂ ಮಾಜಿ ಶಾಸಕರ ಫೋಟೋವನ್ನು ಹಾಕಿಸಿದ್ದಾರೆ. ಆದರೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅದು ಯಾವುದೂ ನಡೆಯಲ್ಲ ಎಂದು ಅವರು ಉಡುಪಿ ಶಾಸಕರ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಪಕ್ಷಕ್ಕಾಗಿ ಕೆಲಸ, ತ್ಯಾಗ್ಯ ಮಾಡಿದ್ದೇನೆ. ಪಕ್ಷ ಕಟ್ಟಿ ಬೆಳೆಸಿರುವುದರಲ್ಲಿ ನನ್ನ ಪಾತ್ರ ಕೂಡ ಇದೆ. ಚುನಾವಣೆಯಲ್ಲಿ ನಾನು ಪಕ್ಷದ ವಿರುದ್ಧ ಒಂದು ಶಬ್ದ ಮಾತನಾಡಿದ್ದರೆ ನನ್ನ ಫೋಟೋ ತೆಗೆಯುವ ಕೆಲಸ ಮಾಡಲಿ. ಆದರೆ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಅನ್ಯಾಯ ಮಾಡದ ನನ್ನನ್ನು ನಡೆಸಿಕೊಂಡ ರೀತಿ ಯಿಂದ ನನಗೆ ತುಂಬಾ ನೋವಾಗಿದೆ. ಆ ಕಾರಣಕ್ಕೆ ನಾನು ಈಗ ಪಕ್ಷೇತರನಾಗಿ ಸ್ಪರ್ಧಿಸುವಂತಾಗಿದೆ ಎಂದು ರಘುಪತಿ ಭಟ್ ತಿಳಿಸಿದರು.