ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರಕ್ಕೆ ಕಟಿ ಬದ್ಧ: ಭಾಸ್ಕರ ಶೆಟ್ಟಿ
ಉಡುಪಿ, ಮೇ 16: ಪ್ರಸ್ತುತ ಶಿಕ್ಷಣ ಕ್ಷೇತ್ರ ಗೊಂದಲ ಗೂಡಾಗಿದ್ದು, ವಿವಿಧ ಹಂತಗಳಲ್ಲಿನ ಶಿಕ್ಷಕರ/ಉಪನ್ಯಾಸಕರ ತರಬೇತಿಗಳು ಹಾಗೂ ನೇಮಕ, ಭಡ್ತಿ ವರ್ಗಾವಣೆ, ಪಿಂಚಣಿ ಸಮಸ್ಯೆ, ವಿಳಂಬ ನೀತಿಗಳು ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳು ಶಿಕ್ಷಣ ಕ್ಷೇತ್ರವನ್ನು ಆವರಿಸಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕಟಿಬದ್ಧನಾಗಿದ್ದೇನೆ ಎಂದು ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಟಿ.ಭಾಸ್ಕರ ಶೆಟ್ಟಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಅನುದಾನಿತ ಅನುದಾನ ರಹಿತ ಖಾಯಂ ಹಾಗೂ ಖಾಯಂ ಅಲ್ಲದ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧಕ ಬೋಧಕೇತರ ನಿರತ ನೌಕರಿಗೆ ನಿಯಮಿತವಾಗಿ ನಿರ್ಧರಿಸಿಲ್ಪ ಟ್ಟಿರುವ ಮಾಸಿಕ ವೇತನ ತಿಂಗಳ ಅಂತ್ಯದಲ್ಲಿಯೇ ನಿರಂತರವಾಗಿ ಪಾವತಿಸಬೇಕು. ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ನವೀಕರಣ, ಆಡಳಿತಾತ್ಮಕ ವ್ಯತ್ಯಾಸದ ತಾರತಮ್ಯ ನೀತಿಗಳನ್ನು ನಿವಾರಿಸಿ ಏಕಗವಾಕ್ಷಿಯಡಿ ತರಬೇಕು ಎಂದು ಅಭಿಪ್ರಾಯ ಪಟ್ಟರು.
ಶೈಕ್ಷಣಿಕ ವಿಷಯಗಳಲ್ಲಿ ಏಕರೂಪತೆಗೆ ಆದ್ಯತೆ ನೀಡಲಾಗುವುದು. ಹಳೆ ಮತ್ತು ಹೊಸ ಪಿಂಚಣಿ ವ್ಯವಸ್ಥೆಯ ನೌಕರರು ನಮ್ಮ ಅಸ್ತಿತ್ವ ಮತ್ತು ಜೀವನ ನಿರ್ವಹಣೆಗಾಗಿ ದ್ವಂದ್ವವಾಗಿದ್ದು, ಈ ತಾರತಮ್ಯ ನಿವಾರಣೆಗೆ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರೆಸಲು ಆದ್ಯತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಸುಬ್ಬಣ್ಣ ಶೆಟ್ಟಿ, ಮಂಜುನಾಥ್ ಶೆಟ್ಟಿ, ರಮೇಶ್ ಕೋಟ್ಯಾನ್, ಮಂಜುನಾಥ್ ಉಪಸ್ಥಿತರಿದ್ದರು.