ಕುಂದಾಪುರ: ಕೃಷಿ ಕೂಲಿಕಾರರ ಸಮಾವೇಶ
![ಕುಂದಾಪುರ: ಕೃಷಿ ಕೂಲಿಕಾರರ ಸಮಾವೇಶ ಕುಂದಾಪುರ: ಕೃಷಿ ಕೂಲಿಕಾರರ ಸಮಾವೇಶ](https://www.varthabharati.in/h-upload/2024/05/16/1266991-ud-m16-samavesha.webp)
ಉಡುಪಿ, ಮೇ16: ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ (ಎಐಎಡಬ್ಲ್ಯುಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವ ದಲ್ಲಿ ಕುಂದಾಪುರ ತಾಲೂಕು ಉದ್ಯೋಗ ಖಾತರಿ ಯೋಜನೆ ಕೆಲಸಗಾರರ ಗುಂಪಿನ ಕಾಯಕ ಬಂಧುಗಳ ಹಾಗೂ ಕೃಷಿಕೂಲಿಕಾರರ ಸಮಾವೇಶ ಮಂಗಳವಾರ ಕುಂದಾಪುರ ಕಾರ್ಮಿಕ ಭವನದ ಸಭಾಂಗಣದಲ್ಲಿ ಜರುಗಿತು.
ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು ಕೂಲಿಕಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೆಲಸಗಾರರ ಗುಂಪಿನ ಕಾಯಕ ಬಂಧುಗಳ ಹಲವು ಬೇಡಿಕೆಗಳ ತ್ವರಿತ ಈಡೇರಿಕೆಗಾಗಿ ರಾಜ್ಯವ್ಯಾಪಿ ಕೃಷಿ ಕೂಲಿಕಾರರನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಸಿದರು.
ಸಂಘದ ಬೇಡಿಕೆಗಳಲ್ಲಿ ಕೆಲಸಗಾರರ ಗುಂಪಿನ ಕಾಯಕ ಬಂಧುಗಳಿಗೆ ಬಾಕಿ ಕೊಡಬೇಕಾದ ಪ್ರೋತ್ಸಾಹಧನ ಪ್ರತೀ ಮಾನವ ದಿನ ಒಂದರ ರೂ.5.00, ದಿನ ಒಂದರ ಕೂಲಿ ರೂ.600, ವಾರ್ಷಿಕ 200 ದಿನಗಳ ಕೆಲಸ, ನಗರ ಪ್ರದೇಶಗಳಿಗೂ ನರೇಗಾ ಯೋಜನೆ ವಿಸ್ತರಣೆ ಮುಖ್ಯವಾಗಿದೆ. ಈ ಬೇಡಿಕೆಗಳ ಈಡೇರಿಕೆಗೆ ರಾಜ್ಯವ್ಯಾಪಿ ಹೋರಾಟ ನಡೆಯಲಿದೆ ಎಂದರು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸಭಾಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕವಿರಾಜ್ ಎಸ್., ನಾಗರತ್ನ ನಾಡ, ಸತೀಶ ಖಾರ್ವಿ, ಸುರೇಶ ಖಾರ್ವಿ, ರಾಮ ಕಟ್ಬೆಲ್ತೂರು, ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ ಉಪಸ್ಥಿತರಿದ್ದರು.