ಉಡುಪಿ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತರಬೇತಿ

ಉಡುಪಿ, ಮೇ 27: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದಾದರೂ ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ. ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸ್ವಂತ ಉದ್ಯೋಗ ಅಥವಾ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುವುದಾದರೂ ಅವರಿಗೆ ಸೂಕ್ತ ತರಬೇತಿ ನೀಡುವುದರಿಂದ ವಿದ್ಯಾರ್ಜನೆ ಮಾಡಿದ ಎಲ್ಲಾ ಮಕ್ಕಳು ಉದ್ಯೋಗ ಸ್ಥರಾಗಲು ಸಾಧ್ಯ ಎಂದು ಪಲಿಮಾರು ಮಠಾಧೀಶರಾದ ಶ್ರೀವಿದಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಉಡುಪಿ ಪಲಿಮಾರು ಮಠದ ಯೋಗದೀಪಿಕಾ ಟ್ರಸ್ಟ್, ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಸಹಯೋಗದಲ್ಲಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡು ತಿದ್ದರು. ಇದೇ ವೇಳೆ ಶ್ರೀಕೃಷ್ಣ ಟೆಕ್ನಿಕಲ್ ಎಜ್ಯುಕೇಶನ್ ಸೆಂಟರ್ನ ವಾರ್ಷಿಕೋತ್ಸವವೂ ಸಂಪನ್ನಗೊಂಡಿತು.
ವಿಜ್ಞಾನ ಯುಗದಲ್ಲಿ ಎಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಉಪಕರಣಗಳ ಬಳಕೆ ಹೆಚ್ಚಾಗಿರುವುದರಿಂದ ಇಂತಹ ವಿದ್ಯೆಗೆ ಬೇಡಿಕೆ ಇದೆ. ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ತರಬೇತಿ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು.
ಪಲಿಮಾರು ಮಠದ ಮ್ಯಾನೇಜರ್ ಬಲರಾಮ ಭಟ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಸಂಸ್ಥೆಯ ಪ್ರಾಶುಪಾಲ ಸುಧೀಂದ್ರ ಯು.ಬಿ ಪ್ರಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ರವೀಂದ್ರ ಸ್ವಾಗತಿಸಿದರೆ ನಿತಿನ್ ಸೇರಿಗಾರ್ ವಂದಿಸಿದರು.







