ತುಳು ಸಂಸ್ಕೃತಿ ಚಿಂತಕ ಬೆನೆಟ್ ಅಮ್ಮಣ್ಣಗೆ ಪೊಳಲಿ ಶೀನಪ್ಪ ಹೆಗ್ಡೆ-ಎಸ್.ಆರ್.ಹೆಗ್ಡೆ ಪ್ರಶಸ್ತಿ

ಉಡುಪಿ, ಜೂ.5: ತುಳುಭಾಷೆ ಹಾಗೂ ಸಂಸ್ಕೃತಿ ಚಿಂತಕ ಬೆನೆಟ್ ಜಿ. ಅಮ್ಮಣ್ಣ ಅವರು 2024ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್. ಆರ್.ಹೆಗ್ಡೆ ಅವರ ಜಂಟಿ ಹೆಸರಲ್ಲಿ ನೀಡಲಾಗುವ ಪೊಳಸಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ ಇವರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು 20,000ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳ ಗೊಂಡಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆನೆಟ್ ಜಿ. ಅಮ್ಮಣ್ಣ ಉಡುಪಿ ತಾಲೂಕಿನ ಪಾಂಗಾಳದವರು. ಅವರು 30 ವರ್ಷಗಳ ಕಾಲ ಮಂಗಳೂರಿನ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪತ್ರಾಗಾರ ವಿಭಾಗದಲ್ಲಿ ಪತ್ರಾಗಾರ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತುಳುನಾಡಿನ ಸಾಹಿತ್ಯ, ಶಿಕ್ಷಣ, ಸಂಸ್ಕೃತಿಗೆ ವಿದೇಶಿಯರ ಕೊಡುಗೆಗಳು, ತುಳುನಾಡು ಚರಿತ್ರೆ ಇವರ ಆಸಕ್ತಿಯ ಕ್ಷೇತ್ರ ಗಳು. ಇದಕ್ಕೆ ಸಂಬಂಧಿಸಿದ ಸಂಶೋಧನೆ, ದಾಖಲೀಕರಣ, ಹಸ್ತಪ್ರತಿ, ಸಂರಕ್ಷಣೆ, ಭಾಷಾಂತರ ಮೊದಲಾದ ಕ್ಷೇತ್ರಗಳಲ್ಲಿ ಇವರು ಕೊಡುಗೆಯನ್ನು ನೀಡಿದ್ದಾರೆ.
ಚಿಗುರಿದ ಬದುಕು (ಕಿರು ಕಾದಂಬರಿ), ಕ್ರೈಸ್ತರು ಮತ್ತು ಬಾಸೆಲ್ ಮಿಶನ್, ಜಾನ್ ಜೇಮ್ಸ್ ಬ್ರಿಗೆಲ್ ಬದ್ಕ್ ಬೊಕ್ಕ ಬರವು, ಕಾರ್ಕಳದಲ್ಲಿ ಕ್ರೈಸ್ತರು- ಒಂದು ಅಧ್ಯಯನ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೋಟಿಚೆನ್ನಯ, ಅಪ್ರಕಟಿತ ತುಳು ಪಾಡ್ದನಗಳು, ತುಳು ಕ್ರಮಾರ್ಕ ಕಥೆ, ತುಳು ಪಂಚತಂತ್ರ ತುಳುಗಾದೆಗಳು ಮುಂತಾದ ಪುಸ್ತಕಗಳನ್ನು ಇತರರೊಂದಿಗೆ ಸಂಪಾದಿಸಿದ್ದಾರೆ. ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಅವರ ಬಾಸೆಲ್ ಮಿಶನ್ ಪ್ರೆಸ್ನ ಪಿತಾಮಹ ಗಾಡ್ ಫ್ರೆಡ್ ವೈಗ್ಲೆ, ಉಡುಪಿಯ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಶತಮಾ ನದ ಹೆಜ್ಜೆಗಳು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕ್ರೈಸ್ತರು, ರೈಟ್ ರೆವೆರೆಂಡ್ ಡಾ.ಸಿ.ಡಿ ಜತ್ತನ್ನ (ಬದುಕು ಸಾಧನೆ) ಕೃತಿ ಗಳು ಪ್ರಕಟಣೆಯ ಹಾದಿಯಲ್ಲಿವೆ. ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಶೋಧನೆ ಹಾಗೂ ಪತ್ರಾಗಾರ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಗಿದೆ.
ಹಂಪಿ ಕನ್ನಡ ವಿವಿ ಹಾಗೂ ಸುದಾನ-ಕಿಟೆಲ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಸ್ಟಡೀಸ್ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ 18ನೇ ಕರ್ನಾಟಕ ಹಸ್ತಪ್ರತಿ ಸಮ್ಮೇಳನ 2022ರಲ್ಲಿ ಅವರು ಸಮ್ಮಾನಿತರಾಗಿದ್ದಾರೆ.
ಪೊಳಲಿ ಶೀನಪ್ಪ ಹೆಗ್ಡೆ ಎಂದೇ ಪ್ರಸಿದ್ಧರಾದ ನಂದಳಿಕೆ ಅಮುಣಂಜೆಗುತ್ತು ಶೀನಪ್ಪ ಹೆಗ್ಗಡೆ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಗಾಂಧೀಜಿ ಚಳುವಳಿಯಲ್ಲಿ ಹಲವಾರು ಬಾರಿ ಕಾರಾಗೃಹ ವಾಸವನ್ನೂ ಅನುಭಸಿದವರು. ಇವರ ಹಲವಾರು ಕೃತಿಗಳಲ್ಲಿ ‘ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯಕಟ್ಟು’ ಮುಖ್ಯ ವಾದುವು. ಅವರ ಮಗ ಸೀತಾರಾಮ ಹೆಗ್ಡೆ (1943-2014) ಎಸ್.ಆರ್. ಹೆಗ್ಡೆ ಎಂದೇ ಪರಿಚಿತರು. ಇವರು ಮಡದಿ ಇಂದಿರಾ ಹೆಗ್ಡೆಯವರೊಂದಿಗೆ ಸೇರಿ ರಚಿಸಿದ ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ವಿದ್ವಾಂಸರ ಮೆಚ್ಚುಗೆ ಗಳಿಸಿದೆ. ಇವರು ಸೈನಿಕರಾಗಿ, ಪತ್ರಿಕಾ ನಿರ್ವಹಣಾಧಿಕಾರಿಯಾಗಿ, ತುಳುಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರ ಜಂಟಿ ಹೆಸರಲ್ಲಿ ಈ ಪ್ರಶಸ್ತಿ.







