ಮೊಬೈಲ್ ಬಿಟ್ಟು ಕ್ರೀಡೆಗೆ ಪ್ರಾಮುಖ್ಯತೆ ನೀಡುವುದು ಅಗತ್ಯ: ಉಡುಪಿ ಸಿಇಓ ಪ್ರತೀಕ್ ಬಾಯಲ್
ಕುಂದಾಪುರದಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಆಟದ ದಿನಾಚರಣೆ
![ಮೊಬೈಲ್ ಬಿಟ್ಟು ಕ್ರೀಡೆಗೆ ಪ್ರಾಮುಖ್ಯತೆ ನೀಡುವುದು ಅಗತ್ಯ: ಉಡುಪಿ ಸಿಇಓ ಪ್ರತೀಕ್ ಬಾಯಲ್ ಮೊಬೈಲ್ ಬಿಟ್ಟು ಕ್ರೀಡೆಗೆ ಪ್ರಾಮುಖ್ಯತೆ ನೀಡುವುದು ಅಗತ್ಯ: ಉಡುಪಿ ಸಿಇಓ ಪ್ರತೀಕ್ ಬಾಯಲ್](https://www.varthabharati.in/h-upload/2024/06/11/1271478-ud-j11-game.webp)
ಕುಂದಾಪುರ, ಜೂ.11: ಶಾರೀರಿಕ, ಮಾನಸಿಕ ಸ್ಥಿತಿ ಉತ್ತಮಗೊಳಿಸಲು ಆಟ ಅಗತ್ಯ. ಪಾಠದ ಜೊತೆಗೆ ಆಟದ ಹಕ್ಕು ಮಕ್ಕಳಿಗೆ ಸಿಗಬೇಕು ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಾರಗೊಂಡಿದೆ. ನಗರ ಪ್ರದೇಶಗಳಲ್ಲಿ ಆಟದ ಬದಲು ಮೊಬೈಲ್, ಇಂಟರ್ನೆಟ್ ಬಳಕೆ ಹೆಚ್ಚುತ್ತಿದ್ದು ಕ್ರೀಡೆಗೆ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಅಂತರಾಷ್ಟ್ರೀಯ ಆಟದ ದಿನಾಚರಣೆ ಅಂಗವಾಗಿ ನಮ್ಮ ಭೂಮಿ ಸಂಸ್ಥೆಯ ನೇತೃತ್ವದಲ್ಲಿ ಕುಂದಾಪುರ ವ್ಯಾಸರಾಜ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ’ಆಟ ನಮ್ಮ ಹಕ್ಕು-ಜೊತೆಯಾಗಿ ಆಡೋಣ, ಜೊತೆಯಾಗಿ ಬೆಳೆಯೋಣ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮೀ ಎಸ್.ಆರ್ ಮಾತನಾಡಿ, ಕ್ರೀಡೆಯು ಸ್ನೇಹಕ್ಕೆ ಮೂಲವಾಗುತ್ತದೆ. ಆಟದಿಂದ ಸ್ನೇಹ ಬೆಸೆಯಲಿದೆ. ಕ್ರೀಡಾ ಸ್ಫೂರ್ತಿಯಿಂದ ನಿತ್ಯ ಜೀವನದಲ್ಲಿ ಉಲ್ಲಾಸ-ಉತ್ಸಾಹ ಹೆಚ್ಚಲಿದ್ದು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಕ್ರೀಡೆಯಲ್ಲಿ ಸಾಧನೆಗೈದರೆ ಬೇರೆಬೇರೆ ಕ್ಷೇತ್ರದಲ್ಲಿ ವಿಫುಲ ಅವಕಾಶ ಸಿಗಲಿದೆ ಎಂದರು.
ಇದೇ ಸಂದರ್ಭ ನಮ್ಮ ಭೂಮಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾಗಿದ್ದ ದಿವಂಗತ ದಾಮೋದರ ಆಚಾರ್ಯ ಅವರ ನೆನಪಿನಲ್ಲಿ ಸಂಸ್ಥೆಯಿಂದ ಪ್ರಕಟಿತ ’ದಾಮು ದುಂದುಭಿ’ ಹಾಗೂ ’ಮಂಜನ ಸುಂಕದ ಕಟ್ಟೆ’ ಪುಸ್ತಕ ಬಿಡುಗಡೆ ಮಾಡಲಾ ಯಿತು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಾನ್ ಡಿಸೋಜ ಮಾತನಾಡಿದರು. ಇದಕ್ಕೂ ಮೊದಲು ಕುಂದಾಪುರ ಶಾಸ್ತ್ರೀ ವೃತ್ತದಿಂದ ಜಾಥಾ ನಡೆಯಿತು.
ಭಾರತದಿಂದ ಪ್ರತಿನಿಧಿಸಿದ ಹಾಲಾಡಿ ಮಕ್ಕಳ ಸಂಘದ ಅಂಜಲಿ, ನಾಡ ಮಕ್ಕಳ ಸಂಘದಿಂದ ಶ್ರೀರಕ್ಷಾ, ತನುಷ್, ಉಳ್ಳೂರು-74 ಕಾಮನಬಿಲ್ಲು ಮಕ್ಕಳ ಸಂಘದಿಂದ ನಿಶ್ಮಿತಾ, ವಿಜಯನಗರ ಜಿಲ್ಲೆಯ ದುಡಿಯುವ ಮಕ್ಕಳ ’ಭೀಮ ಸಂಘ’ದ ಪ್ರತಿನಿಧಿಯಾಗಿ ಮಹೇಶ್ವರಿ ಮಾತನಾಡಿದರು.
ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಯು.ಬಿ.ನಂದಕುಮಾರ್, ಸಿಡಿಪಿಒ ದೀಪಾ, ತಾ.ಪಂ ಪ್ರಬಂಧಕ ರಾಮಚಂದ್ರ ಮಯ್ಯ, ಉದ್ಯಮಿ ಕೆ.ಆರ್. ನಾಯ್ಕ್, ಸಿಡ್ಬ್ಲೂಸಿ ನಮ್ಮಭೂಮಿ ಸಂಸ್ಥೆಯ ಕ್ಷೇತ್ರ ಕಾರ್ಯಕ್ರಮ ನಿರ್ದೇಶಕ ಶ್ರೀನಿವಾಸ ಗಾಣಿಗ, ಸಹನಿರ್ದೇಶಕಿ ಕೃಪಾ ಎಂ.ಎಂ, ಉಪ ಕಾರ್ಯಕಾರಿ ನಿರ್ದೇಶಕ ಶಿವಾನಂದ ಶೆಟ್ಟಿ, ಸುರೇಶ್, ಗಾಣಿಗ ಸಂಘದ ಎಚ್.ಎಸ್.ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಆಟದ ದಿನ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂ.11 ಅನ್ನು ಅಂತಾರಾಷ್ಟ್ರೀಯ ಆಟದ ದಿನವಾಗಿ ಅಂಗೀಕರಿಸಿದೆ ಎಂದು ಘೋಷಿಸಲು ದಿ ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್(ಸಿ.ಡಬ್ಲ್ಯೂ.ಸಿ) ಸಂಸ್ಥೆಯ ಹೆಮ್ಮೆಪಡುತ್ತದೆ. ವಿಶ್ವದಾದ್ಯಂತ ಮಕ್ಕಳ ಜೀವನದಲ್ಲಿ ಆಟದ ಮಹತ್ವವನ್ನು ಗುರುತಿಸುವ ಗಮನಾರ್ಹ ಹೆಜ್ಜೆಯಾಗಿದೆ ಎಂದು ಹಟ್ಟಿಯಂಗಡಿಯ ನಮ್ಮಭೂಮಿ ಸಿಡಬ್ಲ್ಯೂಸಿ ಸಂಸ್ಥೆ ಕಾರ್ಯಕ್ರಮ ನಿರ್ದೇಶಕರು ತಿಳಿಸಿದ್ದಾರೆ.
ಈ ಐತಿಹಾಸಿಕ ಅನುಮೋದನೆಯಾಗಲು ಪೂರಕವಾಗಿ ನಡೆದ ಪ್ರಕ್ರಿಯೆಗಳಲ್ಲಿ ನಮ್ಮ ಸಂಸ್ಥೆಯ ಸೌಕರ್ಯಕಾರಿಕೆಯಲ್ಲಿ ಕರ್ನಾಟಕದ ಉಡುಪಿ ಮತ್ತು ವಿಜಯನಗರ ಜಿಲ್ಲೆಗಳ ಮಕ್ಕಳ ಸಂಘ ಹಾಗೂ ಭೀಮಸಂಘದ ಸುಮಾರು 460ಕ್ಕೂ ಹೆಚ್ಚು ಮಕ್ಕಳ ಕೊಡುಗೆ ಇದೆ. ಪ್ರತಿನಿಧಿಗಳಾಗಿ ಅಂತಾ ರಾಷ್ಟ್ರೀಯ ಮಟ್ಟದ ’ಮಕ್ಕಳು ಮತ್ತು ಯುವ ಜನರ ಸಲಹಾ ಗುಂಪಿನ’ ಸದಸ್ಯರಾಗಿ ಭಾರತವನ್ನು 5 ಮಕ್ಕಳು ಅತ್ಯಂತ ಸಕ್ರೀಯವಾಗಿ ಪ್ರತಿನಿಧಿಸಿದ್ದರು ಎಂದರು.
‘ಶಾಲೆಯಲ್ಲಿ ದೈಹಿಕ ಶಿಕ್ಷಣಕ್ಕೆ(ಪಿಇಟಿ) ನಿಗದಿಯಾದ ವೇಳೆಯೂ ಪಠ್ಯ ತರಗತಿ ಮಾಡಲಾಗುತ್ತಿತ್ತು. ಮನೆಗೆ ಬಂದರೆ ಓದು-ಮನೆ ಕೆಲಸ ಮಾಡಲು ಹೇಳುತ್ತಿದ್ದರು. ಹೆಣ್ಮಕ್ಕಳಿಗೆ ಆಟವಾಡಲು ಯಾವುದೇ ಸೂಕ್ತ ವ್ಯವಸ್ಥೆಯಿರಲಿಲ್ಲ. ಗಂಡು ಮಕ್ಕಳಿಗಷ್ಟೇ ಸೀಮಿತ ಅಂದುಕೊಂಡ ಮಕ್ಕಳ ಆಟದ ಸೌಕರ್ಯ ಎಲ್ಲರಿಗೂ ಸಮಾನವಾಗಿ ದೊರಕುವುದು ನಮ್ಮ ಬೇಡಿಕೆಯಾಗಿತ್ತು. ಮಕ್ಕಳ ಸಂಘದ ಮೂಲಕ ಇದು ಸಾಕಾರಾವಾಗಿದೆ.
-ನಿಶ್ಮಿತಾ, ವಿದ್ಯಾರ್ಥಿನಿ