ಡಾ.ಗುರುರಾಜ ಭಟ್ ತುಳುನಾಡಿನಲ್ಲಿ ಇತಿಹಾಸ ಸಂಶೋಧನೆಗೆ ಸ್ಪಷ್ಟವಾದ ಮಾರ್ಗಸೂಚಿ ರೂಪಿಸಿದವರು: ಡಾ.ಪುಂಡಿಕಾ ಗಣಪಯ್ಯ ಭಟ್
ಮಿಲಾಗ್ರಿಸ್ ಕಾಲೇಜಲ್ಲಿ ಇತಿಹಾಸಜ್ಞನ ಜನ್ಮಶತಮಾನೋತ್ಸವ ಉದ್ಘಾಟನೆ
ಕಲ್ಯಾಣಪುರ, ಜೂ.13: ತುಳುನಾಡಿನಲ್ಲಿ ಇತಿಹಾಸ ಅಧ್ಯಯನ ಹಾಗೂ ಸಂಶೋಧನೆಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ರೂಪಿಸಿದವರು ಖ್ಯಾತ ಇತಿಹಾಸಜ್ಞ ಡಾ. ಪಾದೂರು ಗುರುರಾಜ್ ಭಟ್. ತಮ್ಮ ಜೀವನವನ್ನೇ ಅವರು ತುಳುನಾಡಿನ ಭವ್ಯ ಇತಿಹಾಸ ಹಾಗೂ ಸಂಸ್ಕೃತಿಯ ಅಧ್ಯಯನ ಮತ್ತು ಸಂಶೋಧನೆಗೆ ಅರ್ಪಿಸಿಕೊಂಡಿದ್ದರು ಎಂದು ಮೂಡಬಿದರೆಯ ಹಿರಿಯ ಇತಿಹಾಸಕಾರ ಹಾಗೂ ಧವಳ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಪುಂಡಿಕಾ ಗಣಪಯ್ಯ ಭಟ್ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಇಂದು ನಡೆದ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿದ್ದ ಡಾ.ಗುರುರಾಜ್ ಭಟ್ರ ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡಿ ದಿಕ್ಸೂಚಿ ಭಾಷಣದಲ್ಲಿ ಅವರು ನಾಡಿನ ಶ್ರೇಷ್ಠ ಇತಿಹಾಸಜ್ಞರಲ್ಲೊಬ್ಬ ರಾದ ಡಾ.ಭಟ್ರ ಕುರಿತು ಮಾತನಾಡುತಿದ್ದರು.
ತುಳುನಾಡಿನ ಇತಿಹಾಸ ಅಧ್ಯಯನಕ್ಕೊಂದು ಸ್ಪಷ್ಟ ದಾರಿ ಹಾಕಿಕೊಟ್ಟಿದ್ದೇ ಅಲ್ಲದೇ, ಇಲ್ಲಿನ ವಾಸ್ತುಶಿಲ್ಪ ಹಾಗೂ ಮೂರ್ತಿ ಶಿಲ್ಪಗಳ ಅಧ್ಯಯನವನ್ನು ಸಹ ಅವರು ಮಾಡಿದ್ದು, ಅನಂತರ ಇದನ್ನು ಯಾರೂ ಮುಂದುವರಿಸಲಿಲ್ಲ. ಇದನ್ನು ಈಗಲೂ ಮುಂದುವರಿಸಲು ಇತಿಹಾಸ ಆಸಕ್ತರಿಗೆ ವಿಪುಲ ಅವಕಾಶಗಳಿವೆ ಎಂದು ಡಾ.ಗಣಪಯ್ಯ ಭಟ್ ನುಡಿದರು.
ಗುರುರಾಜ ಭಟ್ ಬದುಕು, ವೃತ್ತಿ ಜೀವನದ ಬೆಳವಣಿಗೆ, ಸಾಧನೆಗಳು ಹಾಗೂ ಇತಿಹಾಸ ಕ್ಷೇತ್ರಕ್ಕೆ ಅದರಲ್ಲೂ ತುಳು ನಾಡಿನ ಇತಿಹಾಸಕ್ಕೆ ಅವರ ಕೊಡುಗೆಗಳ ಕುರಿತು ಸಮಗ್ರವಾಗಿ ಮಾತನಾಡಿದ ಡಾ.ಭಟ್, 1967ರಿಂದ 1976ರವರೆಗೆ ಇದೇ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಕಾಲೇಜಿನ ಬೆಳವಣಿಗೆಯೊಂದಿಗೆ ಇತಿಹಾಸಕಾರನಾಗಿಯೂ ಎಲ್ಲೆಡೆ ಗುರುತಿಸಿಕೊಂಡರು. 1976ರಲ್ಲಿ ವೃತ್ತಿಯಿಂದ ನಿವೃತ್ತಿ ಪಡೆದು 1978ರಲ್ಲಿ ಅಕಾಲಿನ ನಿಧನರಾಗುವವರೆಗೂ ಪೂರ್ಣಕಾಲಿಕ ಸಂಶೋಧಕರಾಗಿ ಅವರು ಕಾರ್ಯತತ್ವರರಾಗಿದ್ದರು ಎಂದರು.
ಡಾ.ಪಿ.ಗುರುರಾಜ ಭಟ್ಟರ ಹೆಚ್ಚುಗಾರಿಕೆ ಇರುವುದೇ ಅವರ ಕ್ಷೇತ್ರ ಕಾರ್ಯಗಳಲ್ಲಿ. ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲೆಮೂಲೆಗಳಿಗೂ ತೆರಳಿ ಎಲ್ಲಾ ದೇವಸ್ಥಾನಗಳ ಅಧ್ಯಯನ ಹಾಗೂ ಸಂಶೋಧನೆ ನಡೆಸಿದ್ದರು. ಕೆಲವೊಮ್ಮೆ ಅವರು ಬರಿಗಾಲಿನಲ್ಲಿ ಮೈಲುಗಟ್ಟಲೆ ನಡೆದು ಅಧ್ಯಯನ ಮಾಡುತ್ತಿದ್ದರು ಎಂದು ಅವರು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ಅವರು ಮಾತನಾಡಿ, ತಮ್ಮ ಸಾಧನೆ, ಸಂಶೋಧನೆ ಹಾಗೂ ಅಧ್ಯಯನಗಳ ಮೂಲಕವೇ ಸಾಮಾಜಿಕ ಜಾಲತಾಣಗಳಿಲ್ಲದ ಐವತ್ತರ ದಶಕದಿಂದಲೂ ಇತಿಹಾಸಕಾರರಾಗಿ ಹೊರಜಗತ್ತು ಅರಿತಿದ್ದ ಸಂಶೋಧಕ ಗುರುರಾಜ ಭಟ್ಟರಾಗಿದ್ದರು. ಅವರು ಈ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರೆಂಬುದು ನಮಗೆ ಈಗಲೂ ಹೆಮ್ಮೆಯ ವಿಷಯ ಎಂದರು.
ಹಿರಿಯ ಸಾಹಿತಿ, ವಿಮರ್ಶಕ, ನಿವೃತ್ತ ಪ್ರಾಧ್ಯಾಪಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ, ಇತಿಹಾಸಕಾರ ಹಾಗೂ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿಜಗದೀಶ್ ಶೆಟ್ಟಿ, ಉಡುಪಿ ಗುರುರಾಜ್ ಭಟ್ ಸ್ಮಾರಕ ಟ್ರಸ್ಟ್ನ ಟ್ರಸ್ಟಿ ಪಿ.ಪರಶುರಾಮ ಭಟ್, ಮಂಗಳೂರು ವಿವಿ ಇತಿಹಾಸ ಸಿಕ್ಷಕರ ಸಂಘಟನೆ ‘ಮಾನುಷ’ದ ಉಪಾಧ್ಯಕ್ಷ ಡಾ.ರಾಬರ್ಟ್ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ.ಜಯರಾಮ ಶೆಟ್ಟಿಗಾರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾ ಡಿದರೆ, ಕನ್ನಡ ವಿಭಾಗದ ಡಾ.ಹರಿಣಾಕ್ಷಿ ಎಂ.ಡಿ. ವಂದಿಸಿದರು. ರವಿನಂದನ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಡಾ. ಗುರುರಾಜ್ ಭಟ್ ಸ್ಮಾರಕ ಟ್ರಸ್ಟ್ ಉಡುಪಿ, ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಶಿಕ್ಷಕರ ಸಂಘ ‘ಮಾನುಷ’ ಮತ್ತು ಐಕ್ಯೂಎಸಿ, ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕನ್ನಡದ ಮೊದಲ ತಾಮ್ರಶಾಸನವನ್ನು ಪತ್ತೆ ಮಾಡಿದವರು
ಇತಿಹಾಸಕಾರರಾಗಿ ಡಾ.ಪಿ.ಗುರುರಾಜ ಭಟ್ ಅವರು ತುಳುನಾಡಿನ 2000ಕ್ಕೂ ಅಧಿಕ ದೇವಸ್ಥಾನ, ಸ್ಮಾರಕಗಳಿಗೆ ಖುದ್ದು ಭೇಟಿ ನೀಡಿ ಅಧ್ಯಯನ ನಡೆಸಿದ್ದಲ್ಲದೇ ಆ ಬಗ್ಗೆ ವಿವರವಾಗಿ ದಾಖಲಿಸಿದ್ದಾರೆ ಕೂಡಾ. ಅವರು ತುಳುನಾಡಿನಲ್ಲಿ 50ಕ್ಕೂ ಅಧಿಕ ಶಾಸನಗಳನ್ನು ಅಧ್ಯಯನ ನಡೆಸಿದ್ದಾರೆ. ಇದರೊಂದಿಗೆ ಜಿಲ್ಲೆಯನ್ನಾಳಿದ 14 ಅರಸು ಮನೆತನಗಳ ಬಗ್ಗೆ ಕ್ರಮಬದ್ಧ ಅಧ್ಯಯನವನ್ನು ಅವರು ನಡೆಸಿದ್ದಾರೆ ಎಂದು ಡಾ.ಗಣಪಯ್ಯ ಭಟ್ ಹೇಳಿದರು.
ಡಾ.ಗುರುರಾಜ್ ಭಟ್ರನ್ನು ಈಗಲೂ ನೆನಪಿಸುವುದು ಅವರು ಕನ್ನಡ ಭಾಷೆ ಮತ್ತು ಲಿಪಿಯಲ್ಲಿದ್ದ ಕನ್ನಡದ ಮೊತ್ತ ಮೊದಲ ತಾಮ್ರಶಾಸನವನ್ನು ಪತ್ತೆ ಮಾಡಿ ವಿದ್ವತ್ ಲೋಕಕ್ಕೆ ಪರಿಚಯಿಸಿರುವುದಕ್ಕೆ. 1972ರಲ್ಲಿ ಬೆಳ್ಮಣ್ಣಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿದ್ದ ಈ ತಾಮ್ರಶಾಸನವನ್ನು ಅವರು ಬೆಳಕಿಗೆ ತರುವ ಮೂಲಕ ಅದರ ಸಮಗ್ರ ಅಧ್ಯಯನವನ್ನೂ ನಡೆಸಿದ್ದಾರೆ ಎಂದರು.
ಅಲ್ಲದೇ ಡಾ.ಪಿ.ಗುರುರಾಜ ಭಟ್ಟರ ಸಂಶೋಧನೆಯಿಂದಲೇ ತುಳುನಾಡಿನ ಇತಿಹಾಸ 2500 ವರ್ಷಗಳಿಗೂ ಹಿಂದಕ್ಕೆ ಇರುವುದು ಪತ್ತೆಯಾಗಿದೆ. ಕ್ರಿ.ಪೂ.2-3ನೇ ಶತಮಾನದ ಕಬ್ಬಿಣಯುಗದ ಸಮಾಧಿ ಸ್ಮಾರಕಗಳನ್ನು ಅವರು ಜಿಲ್ಲೆಯ ಹಲವೆಡೆ ಪತ್ತೆ ಮಾಡಿದ್ದಾರೆ. ಇದರಿಂದ ತುಳುನಾಡಿನ ಇತಿಹಾಸ 2500ವರ್ಷಗಳಿಗೂ ಹಿಂದಕ್ಕೆ ಚಾಚಿಕೊಂಡಿರುವುದು ಖಚಿತವಾಗಿದೆ.
ಈ ಮೂಲಕ ಡಾ.ಗುರುರಾಜ ಭಟ್ಟರು ಕ್ಷೇತ್ರ ಕಾರ್ಯಕ್ಕೊಂದು ಮಾದರಿಯನ್ನು ಹಾಗೂ ಹೊಸ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ ಎಂದರು.