ಡ್ರಗ್ ದುರುಪಯೋಗ, ಅಕ್ರಮ ಸಾಗಣೆ ಕುರಿತು ಮಾಹಿತಿ ಕಾರ್ಯಾಗಾರ

ಉಡುಪಿ, ಜೂ.26: ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ರೋಟರಿ ಉಡುಪಿ ಮತ್ತು ವಿದ್ಯಾರತ್ನ ನರ್ಸಿಂಗ್ ಕಾಲೇಜ್ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಮಾಹಿತಿ ಕಾರ್ಯಗಾರವನ್ನು ಆಸ್ಪತ್ರೆಯ ಕಮಲ್ ಎ.ಬಾಳಿಗ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿತ್ತು.
ಕಾರ್ಯಗಾರವನ್ನು ಉಡುಪಿ ರೋಟರಿ ಅಧ್ಯಕ್ಷೆ ದೀಪಾ ಭಂಡಾರಿ ಉದ್ಘಾಟಿಸಿದರು. ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ರೋಟರಿ ಕಾರ್ಯದರ್ಶಿ ಶುಭ ಬಾಶ್ರೀ, ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಶ್ರೀಲತಾ ಮಾತನಾಡಿದರು.
ವೇದಿಕೆಯಲ್ಲಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ.ದೀಪಕ್ ಮಲ್ಯ, ಡಾ.ಮಾನಸ್ ಈ.ಆರ್. ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.
ಬೆಂಗಳೂರು ಕ್ರಿಸ್ತು ಜಯಂತಿ ವಿದ್ಯಾರ್ಥಿನಿ ಫ್ಲಾವಿಯ ಸ್ವಾಗತಿಸಿದರು. ಮಂಗಳೂರು ಸೈಂಟ್ ಆಗ್ನೆಸ್ ಪಿ.ಜಿ.ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ವಂದಿಸಿದರು. ರಚನ ರೂತ್ ಡಿ. ಕಾರ್ಯಕ್ರಮ ನಿರೂಪಿಸಿದರು ಈ ಸಂದರ್ಭದಲ್ಲಿ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ಅದರ ಅಪಾಯದ ಕುರಿತಾಗಿ ಮೂಕಾಭಿನಯ ಮತ್ತು ಪ್ರಹಸನ ಪ್ರದರ್ಶಿಸಿದರು.
ನಂತರ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಮಾದಕ ವ್ಯಸನದ ದುಷ್ಪರಿಣಾಮ ಗಳ ಕುರಿತು ಮತ್ತು ಡಾ.ದೀಪಕ್ ಮಲ್ಯ ಮಾದಕ ವ್ಯಸನವನ್ನು ತಡೆಗಟ್ಟುವಲ್ಲಿ ಗೆಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದರು. 120ಕ್ಕೂ ಹೆಚ್ಚಿನ ನರ್ಸಿಂಗ್ ವಿದ್ಯಾರ್ಥಿಗಳು, ಮನಶಾಸ್ತ್ರಜ್ಞ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.







