ಕುಂದಾಪುರ, ಬೈಂದೂರಿನಲ್ಲಿ ಬಿರುಸಿನ ಮಳೆ: ಹಲವು ಮನೆಗಳಿಗೆ ಹಾನಿ

ಕುಂದಾಪುರ, ಜೂ.26: ಕುಂದಾಪುರ ಹಾಗೂ ಬೈಂದೂರು ತಾಲೂಕಿ ನಾದ್ಯಂತ ಮಂಗಳವಾರ ರಾತ್ರಿಯಿಂದ ಆರಂಭ ಗೊಂಡ ಮಳೆಯು, ಬುಧವಾರ ದಿನವಿಡೀ ನಿರಂತರವಾಗಿ ಸುರಿದಿದೆ. ಕೆಲವೆಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.
ಕೋಟೇಶ್ವರ ಗ್ರಾಮದ ಭಾರತಿ ಎಂಬವರ ಮನೆಗೆ ಹಾನಿಯಾಗಿ ಅಂದಾಜು 10 ಸಾವಿರ ರೂ., ಗುಜ್ಜಾಡಿ ಗ್ರಾಮದ ಬೆಣ್ಗೆರೆಯ ವಾಸುದೇವ ಸೆರೆಗಾರ್ ಎಂಬವರ ದನದ ಕೊಟ್ಟಿಗೆಗೆ ಹಾನಿಯಾಗಿ ಅಂದಾಜು 15 ಸಾವಿರ ರೂ., ಕಾವ್ರಾಡಿ ಗ್ರಾಮದ ರಾಮ ಮಂದಿರ ರಸ್ತೆಯ ಶಾರದಾ ಅವರ ಮನೆಗೆ ಹಾನಿಯಾಗಿ 60 ಸಾವಿರ ರೂ.ನಷ್ಟ ಸಂಭವಿಸಿದೆ.
ಕಳೆದ ಕೆಲ ದಿನಗಳಿಂದ ಭಾರೀ ಮಳೆಯಿಂದಾಗಿ ಕಡಲ ಅಲೆಗಳ ಅಬ್ಬರವೂ ಜೋರಾಗಿದೆ. ಭಾರೀ ಗಾತ್ರದ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತ್ತಿವೆ. ಬೀಜಾಡಿ, ಕೋಡಿ, ಗಂಗೊಳ್ಳಿ, ಕಂಚುಗೋಡು, ಮರವಂತೆ, ನಾವುಂದ, ಕೊಡೇರಿ, ಮಡಿಕಲ್, ಅಳ್ವೆಗದ್ದೆ ಕಡಲ ತೀರದಲ್ಲಿ ಕಡಲ್ಕೊರೆತ ಭೀತಿಯು ಎದುರಾಗಿದೆ.
Next Story





