‘ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ’
ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೈಂದೂರು, ಜೂ.29: ರಾಜಕಾರಣ ಯಾರ ಮನೆಯ ಆಸ್ತಿ ಅಲ್ಲ. ಇದು ನಿಂತ ನೀರಲ್ಲ. ಸೋಲಿನಿಂದ ಧೃತಿಗೆಡದೆ ಪಕ್ಷ ಸಂಘಟಿಸಿ, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಧೈರ್ಯದ ನುಡಿಗಳನ್ನು ಹೇಳಿದ್ದಾರೆ.
ಬೈಂದೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಒಂದು ಕಾಲದಲ್ಲಿ ಮಂಗಳೂರು, ಉಡುಪಿ ಜಿಲ್ಲೆಗಳು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಯಾಗಿದ್ದವು. ಇದೀಗ ಕಾಂಗ್ರೆಸ್ ಸಂಕಷ್ಟ ಸ್ಥಿತಿಯಲ್ಲಿದೆ. ನಮ್ಮ ಪಕ್ಷದಲ್ಲಿ ನ್ಯೂನತೆಗಳಿವೆ. ಮೊದಲು ಅವು ಸರಿಯಾಗಬೇಕು. ಚುನಾವಣೆ ಒಳ್ಳೆತನದಿಂದ ನಡೆಯಲ್ಲ, ಒಳ್ಳೆಯ ಹೆಸರಿದ್ದರೂ ಚುನಾವಣೆಯಲ್ಲಿ ಪ್ರಯೋಜನವಿಲ್ಲ. ಆದರೂ ಸತ್ಯ ಒಂದು ದಿನ ಗೆದ್ದೆಗೆಲ್ಲುತ್ತೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿತ್ತು. ಆದರೆ ಈ ಬಾರಿ ಯುಪಿಯಿಂದ ಆರು ಮಂದಿ ಸಂಸದರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ 4.50 ಲಕ್ಷ ಮತಗಳ ಲೀಡ್ನಿಂದ ಗೆದ್ದಿದ್ದ ಮೋದಿ, ಈ ಬಾರಿ ಕೇವಲ 1.45 ಲಕ್ಷ ಅಂತರದಿಂದ ಗೆದ್ದಿದ್ದಾರೆ. ಇದರರ್ಥ ದೇಶದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಾಜಿ ಶಾಸಕ ಗೋಪಾಲ್ ಪೂಜಾರಿ ಕಳೆದ ಬಾರಿ ಗೆದ್ದಿದ್ದರೆ ಅವರೇ ಸಚಿವರಾಗುತ್ತಿದ್ದರು. ಎಲ್ಲರೂ ಮತ್ತೆ ಸಂಘಟನೆ ಮಾಡೋಣ. ಧೈರ್ಯದಿಂದ ಮುನ್ನಡೆಯಬೇಕು. ಮುಂದಿನ ಚುನಾವಣೆಗೆ ಈಗಲೇ ಸಿದ್ದತೆ ಮಾಡೋಣ. ಗೋಪಾಲ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುವೆ. ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ಸರಕಾರದ ಬಳಿ ಕಾರ್ಯಕ್ರಮಗಳಿಲ್ಲ. ಕೇವಲ ಪ್ರಚಾರವಷ್ಟೇ ಅವರ ಕೆಲಸ. ರಾಹುಲ್ ಗಾಂಧಿ ಇವತ್ತು ವಿರೋಧ ಪಕ್ಷದ ನಾಯಕ ರಾಗಿದ್ದಾರೆ. ಇದಕ್ಕೆ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರಗೆ ಭಾರತ್ ಜೋಡೋ ಯಾತ್ರೆ ನಡೆಸಿದ್ದೆ ಕಾರಣ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವ ರಾಷ್ಟ್ರಕ್ಕೆ ಸಿಗಲಿದೆ ಎಂದರು.
ಸಭೆಯಲ್ಲಿ ಮಾಜಿ ಶಾಸಕ ಗೋಪಾಲ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ತಾಪಂ ಮಾಜಿ ಸದಸ್ಯ ಮದನ್ ಕುಮಾರ್, ಮುಖಂಡರಾದ ಕಿಶನ್ ಹೆಗ್ಡೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.







