‘ಜನಸಾಮಾನ್ಯರು ಜನಸ್ಪಂದನದ ಸದ್ಬಳಕೆ ಮಾಡಿಕೊಳ್ಳಿ’
ಬೈಂದೂರು ತಾಲೂಕು ಜನಸ್ಪಂದನ ಕಾರ್ಯಕ್ರಮ
ಬೈಂದೂರು, ಜು.10: ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಜನಸ್ಪಂದನ ಒಂದು ಉತ್ತಮ ಅವಕಾಶವಾಗಿದೆ. ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.
ಬುಧವಾರ ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಬೈಂದೂರು ಪಟ್ಟಣ ಪಂಚಾಯತ್ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ತಾಲೂಕು ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಸರಕಾರ ಪ್ರಾರಂಭಿಸಿದ ಜನಸ್ಪಂದನ ಕಾರ್ಯಕ್ರಮದ ಮೂಲ ಉದ್ದೇಶ ಜನರನ್ನು ತಲುಪಿ ಅವರ ಸಮಸ್ಯೆಗಳನ್ನು ನಿವಾರಿಸುವುದಾಗಿದೆ. ಮನವಿಗಳು ಕೇವಲ ಸಭೆಗೆ ಸೀಮಿತವಾಗಿರದೆ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕು ಎಂದರು.
ನೆರೆಗೆ ಮಳೆಯೊಂದೇ ಕಾರಣವಲ್ಲ, ಸಾಮಾನ್ಯವಾಗಿ ಅಧಿಕಾರಿಗಳು ಮಳೆ ಕಾರಣವೆನ್ನುತ್ತಾರೆ. ಆದರೆ ವಾಸ್ತವವಾಗಿ ಮನುಷ್ಯನೇ ಇದಕ್ಕೆ ಕಾರಣ ಹೊಳೆ ಹಾಗೂ ನೀರು ಹರಿಯುವ ತೋಡುಗಳ ಅತಿಕ್ರಮಣದಿಂದ ಹಲವು ಪ್ರದೇಶ ಗಳಲ್ಲಿ ಕೃತಕ ನೆರೆ ಸೃಷ್ಟಿಗೊಳ್ಳುತ್ತದೆ. ಇದರಿಂದ ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ನೆರೆ ಪರಿಹಾರಕ್ಕಾಗಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಹಾಗೂ ಮಳೆಗಾಲ ಮುಗಿದ ನಂತರ ಭವಿಷ್ಯದಲ್ಲಿ ನೆರೆ ಸಂಭವಿಸ ದಂತೆ ಪರಿಹಾರ ಕಂಡುಕೊಳ್ಳಲು ಚರ್ಚೆ ನಡೆಯಬೇಕಾದ ಅಗತ್ಯವಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮಾತನಾಡಿ, ಕೆಲವು ಸಮಸ್ಯೆಗಳು ಅನೇಕ ಸಮಯದಿಂದ ಬಾಕಿ ಉಳಿದಿದ್ದು ವಿವಿಧ ಇಲಾಖೆಗಳ ವ್ಯಾಪ್ತಿಗಳಲ್ಲಿ ಅವುಗಳನ್ನು ತಕ್ಷಣ ಪರಿಹರಿಸಿ ನ್ಯಾಯ ಕೊಡುವ ಉದ್ದೇಶದಿಂದ ಸರಕಾರ ಜನಸ್ಪಂದನವನ್ನು ಜಾರಿಗೆ ತಂದಿದೆ. ಇದರಿಂದ ಸಾರ್ವಜನಿಕರ ಬಹುತೇಕ ಸಮಸ್ಯೆಗಳು ಸ್ಥಳ ದಲ್ಲೆ ಇತ್ಯರ್ಥ ವಾಗುತ್ತಿವೆ. ಗ್ರಾಪಂನ ಕೆಡಿಪಿ ಸಭೆಯಲ್ಲಿ ಪಂಚಾಯತ್ ಅಧಿಕಾರಿಗಳು ಗೈರು ಹಾಜರಾಗುತ್ತಾರೆ ಎಂಬ ದೂರುಗಳಿದ್ದು ಸಭೆಗೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಬೈಂದೂರು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ, ತಹಶೀಲ್ದಾರ ಪ್ರದೀಪ್ ಆರ್, ಡಿಡಿಎಲ್ಆರ್ ರವೀಂದ್ರ, ಬೈಂದೂರು ವೃತ್ತನಿರೀಕ್ಷಕ ಸವಿತ್ರತೇಜ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕ ಗಣಪತಿ ಹೋಬಳಿದಾರ್ ಹಾಗೂ ರಾಮಕೃಷ್ಣ ದೇವಾಡಿಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ವಂದಿಸಿದರು.
147 ಅರ್ಜಿಗಳ ಸ್ವೀಕಾರ
ಇಂದಿನ ಜನಸ್ಪಂದನ ಸಭೆಯಲ್ಲಿ ರಸ್ತೆ, ಮನೆಮಂಜೂರು, ಚರಂಡಿ ವ್ಯವಸ್ಥೆ, ಗೋಶಾಲೆ ನಿರ್ಮಾಣ, ಕುಡಿಯುವ ನೀರು ಸರಬರಾಜಿನಲ್ಲಿ ಉಪ್ಪು ನೀರು ತಡೆ ಬಗ್ಗೆ, ಸ್ಮಶಾನ ಜಾಗ ಮಂಜೂರು, ಹಕ್ಕುಪತ್ರ, ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಒಟ್ಟು 147 ಅರ್ಜಿಗಳು ಸ್ವೀಕೃತವಾಗಿವೆ.
ಉಪ್ಪುಂದ ಗ್ರಾಮವೂ ಸೇರಿದಂತೆ ತಾಲೂಕಿನ ಹೆದ್ದಾರಿ ಸಮೀಪ ಹಾಗೂ ಇತರ ಕಡೆ ಬೀಡಾಡಿ ಜಾನುವಾರುಗಳು ಹೆಚ್ಚಿವೆ. ಇದರಿಂದ ರಸ್ತೆ ಅಪಘಾತವಾಗುವ ಜೊತೆಗೆ ಗಾಯಗೊಂಡಿರುವ ದನಕರುಗಳನ್ನು ಆರೈಕೆ ಮಾಡಲು ಸ್ಥಳವಿಲ್ಲ. ಹೀಗಾಗಿ ಗೋಮಾಳ ಜಾಗದಲ್ಲಿ ಗೋಶಾಲೆ ಆರಂಭಿಸಲು ಜನರು ಮನವಿ ನೀಡಿದರು.