ಉಡುಪಿ: ನಕಲಿ ಪರಶುರಾಮ ಮೂರ್ತಿ ನಿರ್ಮಿಸಿದ ಆರೋಪಿಯ ಶೀಘ್ರ ತನಿಖೆಗೆ ಆಗ್ರಹಿಸಿ ಎಸ್ಪಿಗೆ ಮನವಿ

ಉಡುಪಿ: ಕಾರ್ಕಳ ತಾಲೂಕಿನ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಕಲಿ ಪರಶುರಾಮ ಮೂರ್ತಿ ನಿರ್ಮಿಸಿದ ಪ್ರಕರಣದ ಆರೋಪಿಯನ್ನು ತ್ವರಿತಗತಿಯಲ್ಲಿ ತನಿಖೆ ಮಾಡಿ ಸತ್ಯವನ್ನು ಜಿಲ್ಲೆಯ ಜನರ ಮುಂದೆ ಬಹಿರಂಗಪಡಿಸಬೇಕೆಂದು ಆಗ್ರಹಿಸಿ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ವತಿಯಿಂದ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಪರಶುರಾಮರ ನಕಲಿ ಮೂರ್ತಿಯ ವಿಚಾರದಲ್ಲಿ ಏನು ಹಗರಣ ನಡೆದಿಲ್ಲ ಎಂದು ಕೆಲವರು ಸರಕಾರದ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸರಕಾರದ ಭಾಗವಾಗಿರುವ ಪೊಲೀಸ್ ಇಲಾಖೆಯು ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿರುವ ಥೀಮ್ ಪಾರ್ಕ್ ಹಗರಣದ ಪ್ರಕರಣದಲ್ಲಿ ಆರೋಪಿ ಕ್ರಿಶ್ ಆರ್ಟ್ ವರ್ಲ್ಡ್ ಮಾಲಕ ಕೃಷ್ಣನಾಯಕ್ ರನ್ನು ಕೂಡಲೆ ತನಿಖೆಗೆ ಒಳಪಡಿಸಬೇಕು. ಆ ಮೂಲಕ ಅಕ್ರಮವಾಗಿ ಸರಕಾರದಿಂದ ಬಿಡುಗಡೆಯಾಗಿರುವ ಹಣದಿಂದ ಜಿಎಸ್ ಟಿ ತೆರಿಗೆ ವಂಚನೆ ಮಾಡಿ, ಅಕ್ರಮ ಹಣ ವರ್ಗಾವಣೆಯನ್ನು ಯಾರಿಗೆಲ್ಲ ಮಾಡಿದ್ದಾರೆ ಎಂಬ ಸತ್ಯವನ್ನು ಹೊರ ತರಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧ್ಯಕ್ಷ ಕ ಡಾ. ಕೆ ಅರುಣ್ ಸಕಾರಾತ್ಮಕವಾಗಿ ಸ್ಪಂದಿಸಿ, ಇನ್ನು ಕೆಲವೆ ದಿನಗಳಲ್ಲಿ ಈ ಪ್ರಕರಣದ ಕುರಿತು ನಿಜಾಂಶವನ್ನು ಕಲೆಹಾಕಿ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗುವುದು ಹಾಗೂ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯ ಗೌರವ ಅಧ್ಯಕ್ಷ ಕೆ ಕೃಷ್ಣ ಮೂರ್ತಿ ಆಚಾರ್ಯ, ಅಧ್ಯಕ್ಷ ಬಜಗೋಳಿ ಕೃಷ್ಣ ಶೆಟ್ಟಿ, ಉಪಾಧ್ಯಕ್ಷ ನವೀನ್ ಸಾಲಿಯಾನ್ ಉಪಸ್ಥಿತರಿದ್ದರು.







