ತಲ್ಲೂರು: ಕೆಳದಿ ಅರಸರು ಸೂಫಿ ಸಂತರಿಗೆ ನೀಡಿದ ತಾಮ್ರಪಟ ದಾನ ಶಾಸನ ಪತ್ತೆ

ಉಡುಪಿ, ಡಿ.9: ಸೂಫಿ ಸಂತನೊಬ್ಬನಿಗೆ ದಾನ ನೀಡಿದ ಕೆಳದಿ ಅರಸರದ ಕಾಲದ ತಾಮ್ರ ಶಾಸನವೊಂದು ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪತ್ತೆಯಾಗಿದೆ ಎಂದು ಶಿರ್ವ ಕಾಲೇಜಿನ ನಿವೃತ್ತ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಈ ಅಪರೂಪದ ತಾಮ್ರಪಟ ಶಾಸನವು 46 ಸೆ.ಮೀ. ಉದ್ದ, 33 ಸೆ.ಮೀ. ಅಗಲ ಮತ್ತು 3 ಮಿ.ಮೀ. ದಪ್ಪವಿದೆ. ಆಯತಾಕಾರದ ಈ ತಾಮ್ರಪಟದ ಎರಡೂ ಬದಿ ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಕಂಡರಿಸಿದ ಬರವಣಿಗೆಯಿದೆ. ಶಾಸನದ ಮುಮ್ಮುಖದಲ್ಲಿ ಹದಿನೇಳು ಸಾಲಿನ ಬರವಣಿಗೆ ಇದ್ದರೆ, ಹಿಮ್ಮುಖದಲ್ಲಿ ಹದಿಮೂರು ಸಾಲುಗಳ ಬರಹವಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.
ಶಾಸನವು ಶೈವಸ್ತುತಿಯೊಂದಿಗೆ ಆರಂಭವಾಗಿದ್ದು, ನಂತರ ಶಾಲಿವಾಹನ ಶಕ ವರುಷ 1666ನೆ ರುಧಿರೋದ್ಗಾರಿ ಸಂವತ್ಸರದ ಆಷಾಢ ಬ 5 ಯಲ್ಲು ಎಂಬ ಕಾಲಮಾನದ ಉಲ್ಲೇಖವಿದೆ. ಶಾಸನೋಕ್ತ ಕಾಲಮಾನವು ಕ್ರಿ.ಶ. 1744ರ ಜುಲೈ 4ಕ್ಕೆ ಸರಿಹೊಂದುತ್ತದೆ. ನಂತರ ಶ್ರೀಮದ್ ಎಡವ ಮುರಾರಿ, ಕೋಟೆ ಕೋಟೆ ಕೋಳಾಹಳ ವಿಶುಧ ವೈದಿಕ ಸಿದ್ಧಾಂತ ಪ್ರತಿಷ್ಠಾಪಕ ಕೆಳದಿ ಸದಾಶಿವರಾಯ ನಾಯಕರ ವಂಶೋದ್ಭವ ಸೋಮಶೇಖರ ನಾಯಕರ ಧರ್ಮಪತ್ನಿ ಚೆನ್ನಮ್ಮಾಜಿಯವರ ಪ್ರಪೌತ್ರರು ಬಸವಪ್ಪ ನಾಯಕರ ಪೌತ್ರರು ಸೋಮಶೇಖರ ನಾಯಕರ ಅನುಜ ವೀರಭದ್ರ ನಾಯಕರ ಪುತ್ರರು ಬಸವಪ್ಪ ನಾಯಕರು. ಈ ಎರಡನೇ ಬಸವಪ್ಪ ನಾಯಕರ ಆಳ್ವಿಕೆಯ ಕಾಲದಲ್ಲಿ ನೀಡಿದ ದಾನ ಶಾಸನವಿದು.
ಶಾಸನದ ಮಹತ್ವ: ಕೆಳದಿಯ ಎರಡನೇ ಬಸವಪ್ಪ ನಾಯಕರು ಬಿದನೂರಿನ ತಮ್ಮ ರಾಜಧಾನಿಯ ಹೊಸಪೇಟೆಯೊಳಗೆ ತಮ್ಮ ತಾಯಿ ಮಲ್ಲಮ್ಮಾಜಿಯವರ ಹೆಸರಿನಲ್ಲಿ ಒಂದು ಸ್ವತಂತ್ರ ಮಠವನ್ನು ಕಟ್ಟಿಸಿ, ಆ ಮಠವನ್ನು ಡಂಬಳದ ಫಕೀರ ದೇವರಿಗೆ ಕೊಟ್ಟರು. ಮಂತ್ರಿ ಗುರುವಪ್ಪನವರ ವಿನಂತಿಯ ಮೇರೆಗೆ ಆರು ಟನ್ ಹಾಗ ಮತ್ತು ಭೂಸ್ವಾಸ್ತೆಯನ್ನು ಮಠಕ್ಕೆ ಶಿವಾರ್ಪಿತವಾಗಿ ಕೊಟ್ಟರು.
ಶಾಸನೋಕ್ತ ಫಕೀರ ದೇವರು, ಡಂಬಳದ ಪ್ರಖ್ಯಾತ ಸೂಫಿ ಸಂತರ ಫಕೀರೇಶ್ವರ ಮಠ ಡಂಬಳದಲ್ಲಿದೆ. ಸೂಫಿ ಪಂಥದ ಫಕೀರರಿಗೆ ತನ್ನ ರಾಜಧಾನಿ ಬಿದನೂರಿನಲ್ಲಿ ಮಠವನ್ನು ಕಟ್ಟಿಸಿ ಭಾರಿ ಮೊತ್ತದ ಹಣ ಮತ್ತು ಭೂ ದಾನವನ್ನು ನೀಡಿರುವುದು, ಕೆಳದಿ ಅರಸರ ಧಾರ್ಮಿಕ ಸೌಹಾರ್ದತೆಗೆ ಈ ಶಾಸನ ಸಾಕ್ಷಿಯಾಗಿದೆ. ಬಿದನೂರು ಎಂಬುದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಇಂದಿನ ನಗರವಾಗಿದೆ. ಶಾಸನದ ಕೊನೆಯಲ್ಲಿ ಶ್ರೀಸದಾಶಿವ ಎಂಬ ರುಜುವಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.







