ಪಿ.ಎಂ. ವಿಶ್ವಕರ್ಮ ಯೋಜನೆ ತರಬೇತಿ ಕಾರ್ಯಗಾರ

ಹೆಬ್ರಿ: ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಉಚಿತ ಕೌಶಲ್ಯ ತರಬೇತಿ ಕಾರ್ಯಾಗಾರ ಹಾಗೂ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರವು ಪೆರ್ಡೂರು ಶಾರದಾಂಭ ಇನ್ಫೋಟೆಕ್ನಲ್ಲಿ ನಡೆಯಿತು.
ಹೆಬ್ರಿ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಆಧುನಿಕತೆಗೆ ತಕ್ಕಂತೆ ನಾವು ಮಾಡುವ ಕೆಲಸದಲ್ಲಿ ಪರಿಣತಿಯನ್ನು ಕಾಣಬೇಕಾದರೆ ನೂತನ ತಂತ್ರಜ್ಞಾನದ ತರಬೇತಿ ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾರದಂಬ ಇನ್ಫೋಟೆಕ್ನ ಆಡಳಿತ ನಿರ್ದೇಶಕ ರಂಜಿತ್ ಪ್ರಭು ಮಾತನಾಡಿ, ಜಿಲ್ಲೆಯ ಸುಮಾರು 75 ಜನರು ಈ ಉಚಿತ ಕೌಶಲ್ಯ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರದ ಜೊತೆ ಪ್ರತಿದಿನ 500 ರಂತೆ ತರಬೇತಿ ಭತ್ಯೆ ಹಾಗೂ 15 ಸಾವಿರ ಮೊತ್ತದ ಟೂಲ್ ಕಿಟ್ ಮತ್ತು ಅಗತ್ಯ ಇರುವವರಿಗೆ ಒಂದು ಲಕ್ಷ ರೂ. ಸಾಲವನ್ನು ಸರಕಾರದ ಯೋಜನೆ ಅಡಿಯಲ್ಲಿ ನೀಡಲಾಗುವುದು ಎಂದರು.
ರಾಜಪುರ ಸರಸ್ವತ ಸಹಕಾರಿ ಸಂಘದ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಸಿಎಸ್ಸಿಯ ಜಿಲ್ಲಾ ವ್ಯವಸ್ಥಾಪಕ ಮಹೇಶ್ ಕೊಟ್ಟಾರಿ, ಶಾರದಂಬ ಇನ್ಫೋಟೆಕ್ನ ಸಂಚಾಲಕಿ ಆಶಾ ಆರ್.ಪ್ರಭು ಮೊದಲಾದವರು ಉಪಸ್ಥಿತರಿದ್ದರು. ಸುದೇಶ್ ಸ್ವಾಗತಿಸಿದರು. ನೇತ್ರಾವತಿ ಕಾರ್ಯಕ್ರಮ ನಿರೂಪಿಸಿ, ಪ್ರಣತಿ ವಂದಿಸಿದರು.





