ರೆವೆರೆಂಡ್ ಕಿಟಲ್ ಕುರಿತ ಚಲನಚಿತ್ರ ಪ್ರದರ್ಶನ

ಮಣಿಪಾಲ: ಪ್ರಥಮ ಆಧುನಿಕ ಕನ್ನಡ ಶಬ್ದಕೋಶವನ್ನು ನಿರ್ಮಿಸಿದ ರೆ.ಫಾ.ಫರ್ಡಿನಾಂಡ್ ಕಿಟಲ್ ಜನಸಾಮಾನ್ಯರ ಸೇವೆಯನ್ನು ದೇವರ ಸೇವೆ ಎಂದು ಪರಿಗಣಿಸಿದ್ದಾರೆ ಎಂದು ಚಿತ್ರ ನಿರ್ದೇಶಕ ಪ್ರಶಾಂತ್ ಪಂಡಿತ್ ಹೇಳಿದ್ದಾರೆ.
ಮಾಹೆಯ ಗಾಂಧೀಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ತನ್ನ ನಿರ್ದೇಶನದ ರೆವೆರೆಂಡ್ ಕಿಟಲ್ ಅವರ ಚಲನಚಿತ್ರವನ್ನು ಪ್ರದರ್ಶಿಸಿದ ನಂತರ ನಡೆದ ಚರ್ಚೆಯಲ್ಲಿ ಅವರು ಮಾತನಾಡುತಿದ್ದರು.
ರೆವೆರೆಂಡ್ ಕಿಟಲ್ ಸಂಘಟನೆಯೊಳಗಿನ ವಿರೋಧವನ್ನು ಎದುರಿಸಿ ತಮ್ಮ ಕೆಲಸವನ್ನು ಮುಂದುವರೆಸಿದರು. ಅವರು ಧರ್ಮ, ಭಾಷೆ ಮತ್ತು ಭೌಗೋಳಿಕತೆಯ ಎಲ್ಲೆಗಳನ್ನು ಮೀರಿದ 40ಕ್ಕೂ ಹೆಚ್ಚು ವಿದ್ವತ್ಪೂರ್ಣ ಕೃತಿಗಳನ್ನು ನಿರ್ಮಿಸಿದರು ಎಂದರು.
ಚಿತ್ರದಲ್ಲಿನ ಮೊದಲ ವ್ಯಕ್ತಿ ನಿರೂಪಣೆಯು ಜರ್ಮನಿಯಲ್ಲಿ ವಾಸಿಸುವ ತನ್ನ ಮಕ್ಕಳಿಗೆ ಕಿಟೆಲ್ ಬರೆದ ವೈಯಕ್ತಿಕ ಪತ್ರಗಳು ಮತ್ತು ವೃತ್ತಿಪರ ಪತ್ರಗಳು ಮತ್ತು ಅವರ ಮೇಲಧಿಕಾರಿಗಳಿಗೆ ಬರೆದ ವರದಿಗಳನ್ನು ಬಳಸುತ್ತದೆ. ಅವರು ರಚಿಸಿದ ವಿದ್ವತ್ಪೂರ್ಣ ಕೃತಿಗಳು ಮತ್ತು ಅವರ ಬರಹಗಳಲ್ಲಿನ ದೇವತಾಶಾಸ್ತ್ರದ ಉಲ್ಲೇಖಗಳು ಪ್ರಜ್ಞೆಯ ನಿರೂಪಣೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ವೀಕ್ಷಕರಿಗೆ ಆ ಯುಗದ ನೋಟವನ್ನು ನೀಡುತ್ತದೆ ಎಂದರು.
ಚಿಂತಕ ಪ್ರೊ.ಫಣಿರಾಜ್ ಮಾತನಾಡಿ, ಸಿನಿಮಾವನ್ನು ಸೂಕ್ಷ್ಮವಾಗಿ ಮತ್ತು ವಿದ್ವತ್ಪೂರ್ಣ ಸಿನಿಮಾ ಮಾಡುವ ಹಿಂದೆ ಹೆಚ್ಚಿನ ಸಂಶೋಧನೆ ನಡೆದಿದೆ ಎಂದರು. ಪ್ರೊ.ವರದೇಶ್ ಹಿರೇಗಂಗೆ ತಮ್ಮ ಅಭಿಪ್ರಾಯ ಮಂಡಿಸಿದರು.
ಪ್ರೊ.ಮುರುಳೀಧರ ಉಪಾಧ್ಯ, ಡಾ.ಶ್ರೀಕುಮಾರ್, ಸಾಮಾಜಿಕ ಹೋರಾಟ ಗಾರರಾದ ಬಿ.ಸಿ.ಶೆಟ್ಟಿ, ಮಮತಾ ರೈ, ಚಿತ್ರ ನಿರ್ಮಾಪಕರಾದ ಸುಮಂತ್ ಭಟ್ ಮತ್ತು ಶಿಶಿರರಾಜ್ ಮೋಹನ್, ಪ್ರೊ.ಟಿ.ಕೆ.ಹಿರೇಗಂಗೆ, ಡಾ.ನಿರಂಜನ, ಜಾನಪದ ತಜ್ಞ ಕೃಷ್ಣಯ್ಯ, ಡಾ.ಭ್ರಮರಿ ಶಿವಪ್ರಕಾಶ್ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.







