ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಅನಪೇಕ್ಷಿತ: ಎಐಐಇಎ ಖಂಡನೆ

ಉಡುಪಿ, ಫೆ.3: ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ (ಎಫ್ಡಿಐ) ಮಿತಿಯನ್ನು ಶೇ.74ರಿಂದ ಶೇ.100ಕ್ಕೆ ಹೆಚ್ಚಿಸುವುದಾಗಿ ಬಜೆಟ್ ಮಂಡನೆ ಸಂದರ್ಭದಲ್ಲಿ ವಿತ್ತ ಸಚಿವರು ಘೋಷಿಸಿದ್ದಾರೆ. ಈ ನಿರ್ಧಾರವು ಅನಗತ್ಯವಾಗಿದ್ದು, ಇದರಿಂದ ಭಾರತೀಯ ಆರ್ಥಿಕತೆಯ ಅಭಿವೃದ್ಧಿಗೆ ಅಮೂಲ್ಯ ಸಂಪನ್ಮೂಲ ಕ್ರೋಢಿಕರಣ ಮತ್ತು ದೇಶದ ನಾಗರಿಕರಿಗೆ ಪೂರೈಸುವ ಬಾಧ್ಯತೆಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂದು ಅಖಿಲ ಭಾರತ ವಿಮಾ ನೌಕರರ ಸಂಘ(ಎಐಐಇಎ) ಈ ನಿರ್ಧಾರವನ್ನು ಬಲವಾಗಿ ಖಂಡಿಸಿದ್ದು, ಈ ಕ್ರಮದ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಮುಂದಾಗುವುದಾಗಿ ಸಂಘ ಪ್ರಕಟಣೆಯಲ್ಲಿ ಎಚ್ಚರಿಸಿದೆ.
1999ರ ಐಆರ್ಡಿಎ ಮಸೂದೆ ಅಂಗೀಕಾರದೊಂದಿಗೆ ವಿಮಾ ವಲಯ ವನ್ನು ರಾಷ್ಟ್ರೀಕರಣದಿಂದ ವಿಮುಖಗೊಳಿಸ ಲಾಯಿತು. ಮಸೂದೆಯ ಮೂಲಕ ಭಾರತೀಯ ಖಾಸಗಿ ಬಂಡವಾಳವು ವಿದೇಶಿ ಕಂಪನಿಗಳ ಸಹಭಾಗಿತ್ವದಲ್ಲಿ ವಿಮಾ ಉದ್ಯಮದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಯಿತು. ಈ ಸಂದರ್ಭದಲ್ಲಿ ವಿದೇಶಿ ನೇರ ಬಂಡವಾಳದ ಮಿತಿ ಯನ್ನು ಶೇ.26ಕ್ಕೆ ಮಿತಿ ಗೊಳಿಸಲಾಗಿತ್ತು. ಮತ್ತು ಕಾಲಕ್ರಮದಲ್ಲಿ ಇದನ್ನು ಶೇ.74ಕ್ಕೆ ಏರಿಸಲಾಗಿತ್ತು.
ಸದ್ಯ ವಿದೇಶಿ ಪಾಲುದಾರರೊಂದಿಗೆ ಹೆಚ್ಚಿನ ಸಂಖ್ಯೆಯ ಖಾಸಗಿ ವಿಮಾ ಸಂಸ್ಥೆಗಳು ಜೀವವಿಮೆ ಮತ್ತು ಸಾಮಾನ್ಯ ವಿಮಾ ಉದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಕಂಪೆನಿಗಳು ತಮ್ಮ ವ್ಯವಹಾರವನ್ನು ನಡೆಸಲು ಬಂಡವಾಳವು ಎಂದಿಗೂ ಅಡಚಣೆಯಾಗಿರಲಿಲ್ಲ; ಏಕೆಂದರೆ ಅವು ಉನ್ನತ ಮಟ್ಟದ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿ ರುವ ದೊಡ್ಡ ವ್ಯವಹಾರ ನಡೆಸುವ ಸಂಸ್ಥೆಗಳ ಒಡೆತನದಲ್ಲಿವೆ. ಬಹುಶ: ಒಂದು ಕಂಪೆನಿಯನ್ನು ಹೊರತುಪಡಿಸಿ ಯಾವುದೇ ವಿಮಾ ಕಂಪೆನಿಯೂ ಶೇ.74 ವಿದೇಶಿ ನೇರ ಬಂಡವಾಳ ಮಿತಿಯನ್ನು ಹೇರುವ ಸಾಧ್ಯತೆಗಳಿಲ್ಲ. ವಾಸ್ತವ ವಾಗಿ ವಿಮೆಯಲ್ಲಿನ ಒಟ್ಟು ವಿದೇಶಿ ನೇರ ಬಂಡವಾಳದ ಪಾಲ್ಗೊಳ್ಳುವಿಕೆ ಸುಮಾರು ಶೇ.32 ಮಾತ್ರ. ಪರಿಸ್ಥಿತಿ ಹೀಗಿರುವಾಗ, ಸರಕಾರವು ವಿದೇಶಿ ಬಂಡವಾಳವು ಭಾರತದಲ್ಲಿ ಕಾರ್ಯನಿರ್ವಹಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲು ಏಕೆ ಕ್ರಮಕೈಗೊಂಡಿದೆ ಎಂಬುದು ಆಶ್ಚರ್ಯಕರವಾಗಿದೆ ಎಂದು ಸಂಘ ಹೇಳಿಕೆಯಲ್ಲಿ ಅಚ್ಚರಿ ವ್ಯಕ್ತಪಡಿಸಿದೆ.
ಈಗ ಅಸ್ತಿತ್ವದಲ್ಲಿರುವ ವಿದೇಶಿ ಪಾಲುದಾರರು ಪ್ರತ್ಯೇಕ ಕಂಪನಿಯನ್ನು ರಚಿಸಲು ಪಾಲುದಾರಿಕೆಯಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದರೆ, ಈ ನಿರ್ಧಾರವು ಭಾರತೀಯ ಕಂಪನಿಗಳು ಮತ್ತು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅಸ್ತಿತ್ವದಲ್ಲಿರುವ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರತಿಕೂಲ ಬಿಡ್ಗಳೂ ಸಹ ಇರಬಹುದು ಎಂದು ಹೇಳಿಕೆ ತಿಳಿಸಿದೆ.
ವಿದೇಶಿ ಬಂಡವಾಳಕ್ಕೆ ಹೆಚ್ಚಿನ ಪ್ರವೇಶ ಮತ್ತು ಸಂಪೂರ್ಣ ಸ್ವಾತಂತ್ರ್ಯ ಅನುಮತಿಸುವುದರಿಂದ ವಿಮಾ ಉದ್ದಿಮೆಯ ಕ್ರಮಬದ್ದ ಬೆಳವಣಿಯನ್ನು ಕುಂಠಿತಗೊಳಿಸಬಹುದು. ಜನರಿಗೆ ಮತ್ತು ವ್ಯವಹಾರಕ್ಕೆ ಅಗತ್ಯವಾದ ಭದ್ರತೆ ಯನ್ನು ಒದಗಿಸುವ ಬದಲು ಲಾಭದ ಮೇಲೆಯೇ ಗಮನ ಹರಿಸಬಬಹುದು ಎಂಬುದು ಅಖಿಲ ಭಾರತದ ವಿಮಾ ನೌಕರರ ಸಂಘ ಅಭಿಪ್ರಾಯಪಟ್ಟಿದೆ. ಇದು ಭಾರತೀಯ ಸಮಾಜದ ಅಂಚಿನಲ್ಲಿರುವ ವರ್ಗಗಳ ಹಿತಾಸಕ್ತಿಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಮಾತ್ರವಲ್ಲ ವಿದೇಶಿ ಬಂಡವಾಳ ಎಂದಿಗೂ ದೇಶೀಯ ಉಳಿತಾಯಕ್ಕೆ ಪರ್ಯಾಯ ವಾಗಲು ಸಾಧ್ಯವಿಲ್ಲ ಎಂದಿದೆ.
ಸರಕಾರವು ಅಸ್ತಿತ್ವದಲ್ಲಿರುವ ವಿಮಾ ಕಾನೂನುಗಳಿಗೆ ತಿದ್ದುಪಡಿಗಳನ್ನು ಮಾಡುವ ಮೂಲಕ ಸಮಗ್ರ ಶಾಸನವನ್ನು ತರಲು ಉದ್ದೇಶಿಸಿದೆ ಎಂಬ ವರದಿಗಳಿವೆ. ಈ ತಿದ್ದುಪಡಿಗಳು ದೇಶವನ್ನು 1956ರ ಹಿಂದಿನ ಅಂದರೆ ಜೀವವಿಮಾ ವ್ಯವ ಹಾರದ ರಾಷ್ಟ್ರೀಕರಣ ಪೂರ್ವ ಸ್ಥಿತಿಗೆ ಕೊಂಡೊಯ್ಯಲಿದೆ. ಪ್ರಸ್ತುತ ಸರಕಾರ ವಿಮಾವಲಯವನ್ನು ಹಣಕಾಸುದಾರರು ಮತ್ತು ಬ್ಯಾಂಕರ್ಗಳಿಗೆ ಹಸ್ತಾಂತರಿಸುವ ಸಾಧ್ಯತೆ ಇದ್ದು, ಇದರಿಂದ ಜನರ ಉಳಿತಾಯಕ್ಕೆ ಹೆಚ್ಚಿನ ಅಪಾಯವಿದೆ ಎಂದು ಎಚ್ಚರಿಸಿದೆ.
ವಿಮೆಯಲ್ಲಿ ವಿದೇಶಿ ನೇರ ಬಂಡವಾಳದ ಮಿತಿಯನ್ನು ಹೆಚ್ಚಿಸುವ ನಿರ್ಧಾರವನ್ನು ಎಐಐಇಎ ಬಲವಾಗಿ ಪ್ರತಿಭಟಿಸಲಿದೆ. ತಕ್ಷಣ ಈ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಿಸಿದೆ. 1938ರ ವಿಮಾ ಕಾಯ್ದೆ, 1956ರ ಎಲ್ಐಸಿ ಕಾಯ್ದೆ ಮತ್ತು 1999ರ ಐಅರ್ಡಿಎ ಕಾಯ್ದೆ ಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಯ ವಿರುದ್ದವೂ ಸಂಘ ಸರಕಾರವನ್ನು ಹೇಳಿಕೆ ಯಲ್ಲಿ ಎಚ್ಚರಿಸಿದೆ. ಆರ್ಥಿಕ ನೀತಿಗಳನ್ನು ಕಾರ್ಪೋರೆಟ್ ಪಕ್ಷಪಾತ ದಿಂದ ಜನ ಕೇಂದ್ರಿತ ಕ್ರಮಗಳತ್ತ ಮರು ಹೊಂದಿಸು ವಂತೆ ಅದು ಸರಕಾರವನ್ನು ಒತ್ತಾಯಿಸಿದೆ.







