‘ಬದುಕಿನ ಆದರ್ಶಗಳನ್ನು ಸಾಧನವಾಗಿಸಿದ ಸಂತರಿಗೆ ಒಲಿಯುವ ಕಾವ್ಯ’

ಉಡುಪಿ: ಬದುಕಿನ ಆದರ್ಶಗಳನ್ನು ಸಾಧನವಾಗಿ ಮಾಡಿಕೊಂಡ ಸಂತರಿಗೆ ಕಾವ್ಯ ಒಲಿಯುತ್ತದೆ. ಧಾರವಾಡದ ಸಾಧನಾ ಕೇರಿಯ ಸಂತನಿಗೆ ಈ ರೀತಿಯ ಕಾವ್ಯಸಿದ್ಧಿ ಒಲಿದಿದೆ ಎಂದು ತೆಂಕನಿಡಿಯೂರು ಸರಕಾರಿ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿಷ್ಣುಮೂರ್ತಿ ಪ್ರಭು ಹೇಳಿದ್ದಾರೆ.
ತೆಂಕನಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ, ಕಾಲೇಜಿನ ಐಕ್ಯೂಎಸಿ ಯೊಂದಿಗೆ ಆಯೋಜಿಸಿದ ಕನ್ನಡದ ವರಕವಿ ದ.ರಾ.ಬೇಂದ್ರೆ ಅವರ ಜನ್ಮದಿನಾಚರಣೆ ಕಾರ್ಯ ಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
ವರಕವಿ ಬೆಂದು ಬೇಂದ್ರೆಯಾದವರು. ಅವರು ಕತೆಗಳಲ್ಲಿ ಕಾಣಿಸುವ ದಾಂಪತ್ಯದ ಪರಿಕಲ್ಪನೆ, ಮಾನವೀಯತೆ, ಸಾಮಾಜಿಕ ಆಶಯಗಳೊಂದಿಗೆ ಇಂದಿಗೂ ಜ್ವಲಂತ ಸಮಸ್ಯೆಯಾಗಿ ಮಾನವ ಕುಲವನ್ನು ಹಿಂಡುತ್ತಿರುವ ಬಡತನ ತೀವ್ರವಾಗಿ ಕಾಣಿಸಿಕೊಂಡಿವೆ. ಆದರೆ ಬಡತನದ ಬಗ್ಗೆ ಬೇಂದ್ರೆ ಯವರಿಗೆ ನಿಜವಾಗಿಯೂ ಗರ್ವವಿತ್ತು. ಶ್ರೀಮಂತಿಕೆಯನ್ನು ಕಿತ್ತುಕೊಳ್ಳ ಬಹುದು; ಆದರೆ ಬಡತನವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಸ್ವತಃ ಬೇಂದ್ರೆಯವರೇ ಹೇಳಿದ್ದಾರೆ ಎಂದು ಡಾ.ಪ್ರಭು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ನಿತ್ಯಾನಂದ ವಿ.ಗಾಂವಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಂದ್ರೆಯವರ ಜೀವನಾನುಭವಗಳೇ ಕಾವ್ಯವಾಗಿ ಅರಳಿದೆ. ಅವರ ಸರಳತೆ, ಪದಗಳನ್ನು ಕಟ್ಟುವ ಕ್ರಿಯೆುಂದ ಅವರು ಸಾಹಿತ್ಯ ಲೋಕ ದಲ್ಲಿ ಶಬ್ದಗಾರುಡಿಗ ಎನಿಸಿಕೊಂಡಿದ್ದಾರೆ ಎಂದರು.
ವಿದ್ಯಾರ್ಥಿಗಳಾದ ರಶ್ಮಿತಾ, ಕೃಷ್ಣ ಜಿ.ಜಿ. ಮತ್ತು ಜ್ಯೋತಿ ಬೇಂದ್ರೆಯವರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಅರ್ಥ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಗೋಪಿ ಎಚ್. ಹಾಗೂ ಕನ್ನಡ ವಿಭಾಗ ಉಪನ್ಯಾಸಕರಾದ ಅರ್ಚನಾ, ಭಾರತಿ ಹಾಗೂ ಶಾಲಿನಿ ಯು.ಬಿ. ಉಪಸ್ಥಿತರಿದ್ದರು.
ಎಂ.ಎ. ಕನ್ನಡ ವಿದ್ಯಾರ್ಥಿನಿ ಕೀರ್ತನಾ ಶೆಟ್ಟಿ ಬೇಂದ್ರೆ ಗಾಯನ ಹಾಡಿದರು. ಶಿವಾನಿ ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರತ್ನಮಾಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಶ್ಮಿತಾ ಶೆಟ್ಟಿ ವಂದಿಸಿ ನೈನಾ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.