ಯಕ್ಷಗಾನ ವಿಶಿಷ್ಟವಾದ ಕಲಾ ಮಾಧ್ಯಮ: ಡಾ.ಧರಣೇದೇವಿ

ಉಡುಪಿ, ಫೆ.16: ಯಕ್ಷಗಾನ ಎಂಬುದು ಕೇವಲ ಕಲೆಯಲ್ಲ, ಅದೊಂದು ವಿಸ್ಮಯದ ಜಗತ್ತು. ಅಲ್ಲಿ ಎಲ್ಲವೂ ಇದೆ. ಗಾಯನ, ನೃತ್ಯ, ಕಥನ, ಜೀವನ ಎಲ್ಲವೂ ಒಳಗೊಂಡ ವಿಶಿಷ್ಟವಾದ ಮಾಧ್ಯಮ ಎಂದು ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣೀದೇವಿ ಮಾಲಗತ್ತಿ ಹೇಳಿದ್ದಾರೆ
ಹವ್ಯಾಸಿ ಯಕ್ಷ ಬಳಗ ಪುತ್ತೂರು, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸಹಯೋಗ ಮತ್ತು ಥಿಯೇಟರ್ ಯಕ್ಷ ಉಡುಪಿ ಸಹಕಾರದೊಂದಿಗೆ ಇತ್ತೀಚೆಗೆ ಬೆಂಗಳೂರಿನ ಕನ್ನಡ ಭವನದಲ್ಲಿ ಆಯೋಜಿಸಲಾದ ವಚನಗಳ ಯಕ್ಷ ಗಾಯನ ಮತ್ತು ಪ್ರಯೋಗಾತ್ಮಕ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯಕ್ಷಗಾನ ಎಲ್ಲವನ್ನೂ ಎಲ್ಲರನ್ನೂ ತನ್ನೊಳಗೆ ಸೇರಿಸಿಕೊಳ್ಳುತ್ತ ಸಮಾಜಮುಖಿ ಕಲೆಯಾಗಿ ಬೆಳೆದುಬಂದಿದೆ. ಯಕ್ಷಗಾನವನ್ನು ಜನರ ಕಲೆಯಾಗಿ ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಥಿಯೇಟರ್ ಯಕ್ಷ ಸಂಚಾಲಕ ಸುನಿಲ್ ಪಲ್ಲಮಜಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗವತ ವಿಶ್ವಾಸ್ ಕರ್ಬೆಟ್ಟು ಬಸವಣ್ಣ ಮತ್ತು ಅಕ್ಕಮಹಾದೇವಿಯವರ ವಚನಗಳನ್ನು ಯಕ್ಷಗಾನ ಶೆಲಿಗೆ ಸಂಯೋಜಿಸಿ ಪ್ರಸ್ತುತಪಡಿಸಿದರು. ಮದ್ಲೆಗಾರ ಸ್ಕಂದ ಕೊನ್ನಾರ್ ಮತ್ತು ಪಿಟೀಲು ವಿದ್ವಾನ್ ಪ್ರಣೀತ್ ಬಳ್ಳಕ್ಕರಾಯ ಹಿಮ್ಮೇಳದಲ್ಲಿ ಸಹಕರಿಸಿದರು.
ಸಂಯೋಜಕ, ಹಿರಿಯ ವೇಷಧಾರಿ ಶಶಿಕಿರಣ್ ಕಾವು ಮುಖ್ಯ ಅತಿಥಿಗಳನ್ನು ಗೌರವಿಸಿದರು. ನಾಗೆೇಶ್ ಬೆಲೂರು ವಂದಿಸಿದರು. ಬಳಿಕ ಪೃಥ್ವೀರಾಜ ಕವತ್ತಾರು ನಿರ್ದೇಶನದಲ್ಲಿ ಥಿಯೇಟರ್ ಯಕ್ಷ ತಂಡದವರು ಶ್ರೀಮನೋಹರ ಸ್ವಾಮಿ ಪರಾಕು ಯಕ್ಷಗಾನವನ್ನು ಪ್ರಸ್ತುತಪಡಿಸಿದರು.







