ಮಾತೃ ಭಾಷೆ ಕೊಂಕಣಿಯ ಬಗ್ಗೆ ಮಮತೆ, ಪ್ರೀತಿ ಮುಖ್ಯ: ಉಡುಪಿ ಬಿಷಪ್ ಜೆರಾಲ್ಡ್

ಉಡುಪಿ: ಇತರ ಭಾಷೆಗಳಿಗೆ ಪ್ರೋತ್ಸಾಹಿಸುವುದರೊಂದಿಗೆ ಮಾತೃ ಭಾಷೆ ಕೊಂಕಣಿಯ ಮೇಲೆ ಮಮತೆ ಮತ್ತು ಪ್ರೀತಿ ಯನ್ನು ಇರಿಸಿಕೊಳ್ಳ ಬೇಕು. ಪ್ರತಿನಿತ್ಯ ನಮ್ಮ ಮನೆಗಳಲ್ಲಿ ಅದನ್ನು ಕಡ್ಡಾಯವಾಗಿ ಕೊಂಕಣಿ ಮಾತನಾಡುವುದರ ಮೂಲಕ ಅದರ ಬೆಳವಣಿಗೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಅಂಬಾಗಿಲು ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ರವಿವಾರ ನಡೆದ ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್ ಇದರ 11ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.
ಇಂದು ನಾವು ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದಿಂದ ಇತರ ಭಾಷೆಗಳಿಗೆ ಅವಲಂಬಿತರಾಗಬೇಕಾಗಿದ್ದು ಅದ ರೊಂದಿಗೆ ಮನೆಗಳಲ್ಲಿ ಕೊಂಕಣಿ ಭಾಷೆಯ ಉಪಯೋಗವನ್ನು ಮಾಡುವುದರಿಂದ ಅದು ಜೀವಂತ ವಾಗಿರಲು ಸಾಧ್ಯವಿದೆ. ಇತರ ಭಾಷೆಯ ಪತ್ರಿಕೆಗಳಿಗೂ ಬೆಂಬಲ ನೀಡುವುದರೊಂದಿಗೆ ಪವಿತ್ರ ಧರ್ಮಸಭೆಯ ಧ್ಯೇಯ ಉದ್ದೇಶಗಳನ್ನು ಕೊಂಕಣಿ ಭಾಷಿಕರಾದ ನಮ್ಮ ಮಾತೃ ಭಾಷೆಯ ಪತ್ರಿಕೆಯಲ್ಲಿ ಪ್ರಚಾರ ಪಡಿಸುತ್ತಿದ್ದು ಅದನ್ನು ಬೆಂಬಲಿಸುವ ಕೆಲಸವನ್ನು ಪ್ರತಿ ಯೊಬ್ಬರೂ ಮಾಡಿದಾಗ ಭಾಷೆಯ ಉಳಿವು ಸಾಧ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಸಾಹಿತಿ ವಲೇರಿಯನ್ ಕ್ವಾಡ್ರಸ್ ಅಜೆಕಾರ್ ಮಾತನಾಡಿ, ಕೊಂಕಣಿ ಸಾಹಿತಿಗಳು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಬರುವ ಕೆಲಸವನ್ನು ಸಮುದಾಯ ಮಾಡಿಕೊಂಡು ಬಂದಿದ್ದು ಅದು ಮುಂದು ವರೆಯಬೇಕಾಗಿದೆ. ಈ ಮೂಲಕ ಕೊಂಕಣಿ ಸಾಹಿತಿಗಳು ಮುಂದೆಯೂ ಒಗ್ಗಟ್ಟಿನಿಂದ ಸಾಹಿತ್ಯದ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ದೀಪಾ ಟ್ರಸ್ಟ್ ಪ್ರಕಾಶನದಲ್ಲಿ ಉಜ್ವಾಡ್ ಪತ್ರಿಕೆಯ ಸಂಪಾದಕ ವಂ.ಆಲ್ವಿನ್ ಸೆರಾವೊ ಅವರ ಜೆರಿಕೊಚೊ ಪಾಗೊರ್ ಹಾಗೂ ಯುವ ಸಾಹಿತಿ ಅನ್ಸಿಟಾ ಡಿಸೋಜ ಅವರ ತಾಳೊ ಪುಸ್ತಕಗಳನ್ನು ಧರ್ಮಾಧ್ಯಕ್ಷರು ಲೋಕಾರ್ಪಣೆ ಗೊಳಿಸಿದರು.
ಉಜ್ವಾಡ್ ಪತ್ರಿಕೆಯ ಪ್ರಾಯೋಜಕತ್ವದಲ್ಲಿ ನಡೆದ ಸಾಹಿತ್ಯ ಸ್ಪರ್ಧೆಗಳು ಹಾಗೂ ಕ್ವಿಜ್ ಸ್ಪರ್ಧೆಗಳ ವಿಜೇತರನ್ನು ಗೌರವಿಸ ಲಾಯಿತು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ದಾಯ್ಜಿ ದುಬಾಯ್ ಸಂಘಟನೆಯ ಮಂಗಳೂರು ಸಂಚಾಲಕ ಪ್ರವೀಣ್ ತಾವ್ರೊ ಉಪಸ್ಥಿತರಿದ್ದರು.
ದೀಪಾ ಟ್ರಸ್ಟ್ ಮುಖ್ಯಸ್ಥರು ಹಾಗೂ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಉಜ್ವಾಡ್ ಪತ್ರಿಕೆಯ ಸಂಪಾದಕ ವಂ.ಆಲ್ವಿನ್ ಸೆರಾವೊ ವಂದಿಸಿದರು. ಡಾ.ವಿನ್ಸೆಂಟ್ ಆಳ್ವಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸದಸ್ಯರಿಂದ ಹ್ಯಾಂಗ್ ಆನ್ ಕೊಂಕಣಿ ನಾಟಕ ಪ್ರದರ್ಶನಗೊಂಡಿತು.







