ಬೈಕ್ಗಳ ಮುಖಾಮುಖಿ ಢಿಕ್ಕಿ: ಓರ್ವ ಸವಾರ ಮತ್ಯು, ಇಬ್ಬರಿಗೆ ಗಾಯ

ಮಲ್ಪೆ: ಎರಡು ಬೈಕ್ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಫೆ.17ರಂದು ರಾತ್ರಿ 8.45ರ ಸುಮಾರಿಗೆ ಅಜ್ಜರಕಾಡು ಅಗ್ನಿಶಾಮಕ ದಳದ ಕಚೇರಿ ಎದುರು ನಡೆದಿದೆ.
ಮೃತರನ್ನು ಉಡುಪಿ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಸ್ಯಾಮುಯೆಲ್ ಸದಾನಂದ ಕರ್ಕಡ(59) ಎಂದು ಗುರುತಿ ಸಲಾಗಿದೆ. ಬೈಕ್ನಲ್ಲಿ ಇವರ ಪತ್ನಿ ಲಾನೆಟ್ ಸ್ಮಿತ ಕರ್ಕಡ(48) ಹಾಗೂ ಬೈಕ್ ಸವಾರ ಜಯಲಕ್ಷ್ಮೀ ಸಿಲ್ಕ್ಸ್ ಉದ್ಯೋಗಿ ಪವನ್ ಎಂಬವರು ಗಾಯಗೊಂಡಿದ್ದಾರೆ.
ಸದಾನಂದ ಕರ್ಕಡ ತನ್ನ ಪತ್ನಿಯೊಂದಿಗೆ ಬೈಕ್ನಲ್ಲಿ ಅಜ್ಜರಕಾಡು ಪಾರ್ಕ್ ಬಳಿಯ ಅಂಗಡಿಯಿಂದ ಸಾಮಾನು ಖರೀದಿಸಲು ಕಿನ್ನಿಮುಲ್ಕಿಯ ಸ್ವಾಗತ ಗೋಪುರ ಕಡೆಯಿಂದ ಅಜ್ಜರಕಾಡು ಕ್ರೀಡಾಂಗಣದ ರಸ್ತೆಯಲ್ಲಿ ಹೋಗುತ್ತಿದ್ದು, ಈ ವೇಳೆ ಎದುರಿನಿಂದ ಅಂದರೆ ಬ್ರಹ್ಮಗಿರಿ ಕಡೆಯಿಂದ ಕಿನ್ನಿಮೂಲ್ಕಿಯ ಕಡೆಗೆ ಬರುತ್ತಿದ್ದ ಬೈಕ್, ಸದಾನಂದ ಅವರ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸದಾನಂದ ಕರ್ಕಡ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಎರಡು ದಿನಗಳ ಹಿಂದೆ ಎಷ್ಟೇ ವಿದೇಶದಿಂದ ಆಗಮಿಸಿದ್ದರು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ವಲಯ: ಮೂರು ರಸ್ತೆ ಸೇರುವ ಈ ಸ್ಥಳ ಇದೀಗ ಅಪಘಾತ ವಲಯವಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ವಾಹನಗಳು ನೂರರ ವೇಗದಲ್ಲಿ ಚಲಾಯಿಸುತ್ತಿದ್ದು ಯಾವುದೇ ರೀತಿಯ ವೇಗ ನಿಯಂತ್ರಕ ಇಲ್ಲದಿರುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ಆರೋಪಿಸಿದ್ದಾರೆ.
ಇದರಿಂದ ಈ ರಸ್ತೆಯಲ್ಲಿ ವೃದ್ಧರು, ವಿದ್ಯಾರ್ಥಿಗಳು, ಮಹಿಳೆಯರು ಜೀವ ಕೈಯಲ್ಲಿಟ್ಟು ನಡೆದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಆದುದರಿಂದ ಸಂಬಂಧಪಟ್ಟವರು ಈ ರಸ್ತೆಯಲ್ಲಿ ಹಂಪ್ಸ್ ಅಥವಾ ಬ್ಯಾರಿಗೇಡ್ ಅಳವಡಿಸಿ ವಾಹನಗಳ ವೇಗ ವನ್ನು ನಿಯಂತ್ರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.







