ಕೃತಕ ಆಭರಣ, ಕರಕುಶಲ ವಸ್ತುಗಳ ತರಬೇತಿ ಉದ್ಘಾಟನೆ

ಹೆಬ್ರಿ, ಫೆ.22: ರೊಬೊಸಾಫ್ಟ್ ಟೆಕ್ನಾಲಜೀಸ್ ಉಡುಪಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ರೋಟರಿ ಕ್ಲಬ್ ಮಣಿಪಾಲ, ರೋಟರಿ ಸಮುದಾಯ ದಳ ಹೆಬ್ರಿ, ಗ್ರಾಮ ಪಂಚಾಯತ್ ಹೆಬ್ರಿ ಮತ್ತು ಧನಲಕ್ಷ್ಮಿ ಸಂಜೀವಿನಿ ಒಕ್ಕೂಟ ಹೆಬ್ರಿ ಇವರ ಸಂಯುಕ್ತ ಆಶ್ರಯದಲ್ಲಿ 10 ದಿನಗಳ ವಿವಿಧ ರೀತಿಯ ಕೃತಕ ಆಭರಣ ಮತ್ತು ಅಲಂಕಾರಿಕ ಕರಕುಶಲ ವಸ್ತುಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಹೆಬ್ರಿಯ ಸಮುದಾಯ ಭವನದಲ್ಲಿ ಜರಗಿತು.
ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ ಬಂಗೇರ ಮಾತನಾಡಿ, ಹೆಬ್ರಿ ಗ್ರಾಮದ ಮಹಿಳೆಯರಿಗೆ ಸ್ವಉದ್ಯೋಗ ಮಾಡಲು ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ಗ್ರಾಮ ಪಂಚಾ ಯತ್ ನೀಡಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಹೆಬ್ರಿ ಗ್ರಾಮದಲ್ಲಿ ಹಮ್ಮಿಕೊಳ್ಳ ಲಾಗುವುದು ಎಂದು ಭರವಸೆ ನೀಡಿದರು.
ಮಣಿಪಾಲದ ಬಿವಿಟಿ ಸಂಸ್ಥೆಯ ಹಿರಿಯ ಸಲಹೆಗಾರರಾದ ಜಗದೀಶ್ ಪೈ ಅವರು ಮಾಜಿ ಕೇಂದ್ರ ಸಚಿವ ಟಿ.ಎ.ಪೈ ಅವರಿಂದ ಸ್ಥಾಪಿಸಲ್ಪಟ್ಟ ಭಾರತೀಯ ವಿಕಾಸ ಟ್ರಸ್ಟ್ನ ಹಿನ್ನೆಲೆ ಹಾಗೂ ಅದರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮಣಿಪಾಲ ರೋಟರಿಯ ಕಾರ್ಯದರ್ಶಿ ಫರೀದ ಉಪ್ಪಿನ್, ರಾಜವರ್ಮ ಅರಿಗ, ಹೆಬ್ರಿ ಸಮುದಾಯ ದಳದ ಅಧ್ಯಕ್ಷರಾದ ಕೃಷ್ಣರಾಜ್ ಕೆ., ರಾಮಕೃಷ್ಣ ಆಚಾರ್, ಹೆಬ್ರಿ ಎನ್ಆರ್ಎಲ್ಎಂನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಉಮಾ, ಧನಲಕ್ಷ್ಮೀ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶಕುಂತಲಾ ಹಾಗೂ ಸಂಪನ್ಮೂಲ ವ್ಯಕ್ತಿ ರಶ್ಮಿ ಭಟ್ ಉಪಸ್ಥಿತರಿದ್ದರು.
ರೋಟರಿ ಸಮುದಾಯ ದಳದ ಕಾರ್ಯದರ್ಶಿ ನಿತ್ಯಾನಂದ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಜೀವಿನಿ ಸಂಘದ ಎಂಬಿಕೆ ನಾಗಾನಂದಿನಿ ವಂದಿಸಿದರು. ಸುಮಾರು 25 ಮಂದಿ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದಾರೆ.







