ಕರ್ನಾಟಕ ಇತಿಹಾಸ ಪರಿಷತ್ತು ಮಹಾ ಅಧಿವೇಶನದ ದತ್ತಿ ಉಪನ್ಯಾಸ ಉದ್ಘಾಟನೆ

ಕುಂದಾಪುರ, ಫೆ.22: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬೆಂಗಳೂರು ಮತ್ತು ಧಾರವಾಡ ವಲಯ, ಮಂಗಳೂರು ವಿಶ್ವವಿದ್ಯಾಲಯ ಇತಿಹಾಸ ಅಧ್ಯಾಪಕರ ಸಂಘ ಮತ್ತು ಕಾಲೇಜಿನ ಐಕ್ಯೂಎಸಿ ಇವರ ಸಹಯೋಗದಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಯೋಜಿಸಲಾದ ’ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನ’ದ ವಿವಿಧ ದತ್ತಿ ಉಪನ್ಯಾಸ ಗಳನ್ನು ಪ್ರೊ.ಎಂ.ಎನ್.ಶ್ರೀನಿವಾಸ ಶುಕ್ರವಾರ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಶ್ವತ್ಥನಾ ರಾಯಣ ವಹಿಸಿದ್ದರು. ಪ್ರೊ.ಎಸ್.ಶೆಟ್ಟರ್ ದತ್ತಿನಿಧಿ ಉಪನ್ಯಾಸದಲ್ಲಿ ಅಧಿವೇಶನದ ಸರ್ವಾಧ್ಯಕ್ಷರಾದ ಡಾ.ಕೇಶವನ್ ವೆಳುತ್ತಾಟ್, ವೆನ್ ಎ ಹಿಸ್ಟ್ರಿಯೋಗ್ರಫಿ ಲೀಡ್ಸ್ ಪೋಯಟ್ರಿ: ಎ ಟ್ರಿಬ್ಯೂಟ್ ಟು ಪ್ರೊ.ಎಸ್.ಶೆಟ್ಟರ್ ಎಂಬ ವಿಷಯದ ಕುರಿತು ಮಾತನಾಡಿದರು.
ಪ್ರೊ.ಎಲ್.ಪಿ.ರಾಜು ದತ್ತಿನಿಧಿ ಉಪನ್ಯಾಸದಲ್ಲಿ ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯಕ್ ತುಳುನಾಡಿನ ಬುಡಕಟ್ಟು ದೈವಗಳು, ಆಧುನಿಕ ಮುಖಾಮುಖಿ ಕುರಿತು ಮಾತನಾಡಿದರು. ಪ್ರೊ.ಈರಣ್ಣ ಪತ್ತಾರ್ ದತ್ತಿನಿಧಿ ಉಪನ್ಯಾಸದಲ್ಲಿ ಮಂಗಳೂರಿನ ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಗೌಡ ಉತ್ತರ ಕನ್ನಡ ಜಿಲ್ಲೆಯ ಶಾಸನಗಳು: ಇತಿಹಾಸ ಮತ್ತು ಸಂಸ್ಕೃತಿ ಕುರಿತು ಮಾತನಾಡಿದರು. ಭಂಡಾರ್ಕಾರ್ಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಸ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.
ಎರಡನೇ ದಿನವಾದ ಶನಿವಾರದ ದತ್ತಿ ಉಪನ್ಯಾಸಗಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲ ಯದ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ.ತ್ರಿವೇಣಿ ಅರಸ್ ವಹಿಸಿದ್ದರು. ಪ್ರೊ.ಎಸ್.ರಾಜಶೇಖರ ದತ್ತಿನಿಧಿ ಉಪನ್ಯಾಸ ದಲ್ಲಿ ದಿ.ವಿ.ಟಿ ರಾಜಶೇಖರ -ದಲಿತ ಧ್ವನಿ ಎಂಬ ವಿಷಯದ ಕುರಿತು ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಅಧ್ಯಯನ ಕೇಂದ್ರದ ಹಿರಿಯ ಪ್ರಾಧ್ಯಾಪಕ ಮತ್ತು ನಿರ್ದೇಶಕ ಡಾ.ಜೆ.ಸೋಮಶೇಖರ ಉಪನ್ಯಾಸ ನೀಡಿದರು.
ಪ್ರೊ.ಶಿವರುದ್ರ ಕಲ್ಲೋಳಿಕರ್ ದತ್ತಿನಿಧಿ ಉಪನ್ಯಾಸದಲ್ಲಿ ದ ಕಾಂಟ್ರಿಬ್ಯೂಷನ್ ಆಫ್ ಕುದ್ಮಲ್ ರಂಗರಾವ್: ಎಸ್ ಅ ಸೋಶಿಯಲ್ ರಿಫಾರ್ಮರ್ ಆಫ್ ಮಾಡರ್ನ್ ಕರ್ನಾಟಕ ಎಂಬ ವಿಷಯದ ಕುರಿತು ಮಂಗಳೂರು ವಿವಿ ಇತಿಹಾಸ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ನಿರ್ಮಲ್ ರಾಜು ಉಪನ್ಯಾಸ ನೀಡಿದರು.
ಪ್ರೊ.ಎಸ್.ನಾಗರತ್ನಮ್ಮ ದತ್ತಿನಿಧಿ ಉಪನ್ಯಾಸದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಮೋನಾ ಮೆಂಡೊನ್ಸಾ, ಲೈಫ್ ಅಂಡ್ ಟೈಮ್ಸ್ ಆಫ್ ಉಮಾಬಾಯಿ ಕುಂದಾಪುರ ಎಂಬ ವಿಷಯದ ಕುರಿತು ಮಾತನಾಡಿದರು. ಕಾಲೇಜಿನ ಕನ್ನಡ ಉಪನ್ಯಾಸಕಿ ರೇಣುಕಾ ಕಾರ್ಯಕ್ರಮ ನಿರ್ವಹಿಸಿದರು.







