ಕೆಎಸ್ಸಾರ್ಟಿಸಿ ಸಾರಿಗೆ ವಿದ್ಯಾರ್ಥಿ ಸ್ನೇಹಿ ಆಗಿರಬೇಕು: ಡಾ.ತಿಪ್ಪೇಸ್ವಾಮಿ

ಉಡುಪಿ: ಇತ್ತೀಚೆಗೆ ಸಾರಿಗೆ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿ ಸುತ್ತಿದ್ದು, ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ವಿದ್ಯಾರ್ಥಿ ಸ್ನೇಹಿ ಸಾರಿಗೆ ಎನಿಸಿ ಕೊಳ್ಳಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಹೇಳಿದ್ದಾರೆ.
ನಗರದ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಹಾಗೂ ಕುಂದಾಪುರ ವಿಭಾಗದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕು. ಕೇವಲ ಹಕ್ಕುಗಳನ್ನು ನೀಡಿದರೆ ಸಾಲದು. ಅದನ್ನು ಪಡೆಯಲು ಅಗತ್ಯವಾದ ಪೂರಕ ವ್ಯವಸ್ಥೆಗಳನ್ನು ಸಹ ಕಲ್ಪಿಸಿದಾಗ ಮಾತ್ರ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಮಕ್ಕಳು ಸಮರ್ಪಕವಾದ ಶಿಕ್ಷಣ ಪಡೆದುಕೊಳ್ಳುವಲ್ಲಿ ಸಾರಿಗೆ ವ್ಯವಸ್ಥೆಯೂ ಬಹುಮುಖ್ಯ ಪಾತ್ರವಹಿಸುತ್ತದೆ ಎಂದವರು ಹೇಳಿದರು.
ತಮ್ಮ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ಶಾಲಾ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಿ ಅಲ್ಲಿನ ಸಮಯವನ್ನು ತಿಳಿದುಕೊಂಡು ಆ ಸಮಯಕ್ಕೆ ಸರಿಯಾದ ಸಾರಿಗೆಗಳನ್ನು ಓಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದ ಅವರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾರಿಗೆಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ದೂರುಗಳು ಬಂದಲ್ಲಿ ಶೀಘ್ರದಲ್ಲಿ ಅದನ್ನು ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಸೇರುವ ಜಂಕ್ಷನ್ಗಳಲ್ಲಿ ಸಾರಿಗೆ ಸೇವೆಗಳ ಮೇಲ್ವಿಚಾರಣೆಗೆ ಸಂಚಾರ ನಿಯಂತ್ರಕರು ಅಥವಾ ಮೇಲ್ವಿಚಾರಕರನ್ನು ನಿಯೋಜಿಸಿ, ಸುಗಮ ಕಾರ್ಯಾಚರಣೆ ಬಗ್ಗೆ ನಿಗಾ ವಹಿಸಬೇಕು. ತಮ್ಮ ಭಾಗದ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರಯಾಣಿಸಲು ನಿಗದಿತ ಬಸ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಅವರನ್ನು ಹತ್ತಿಸಿ, ಇಳಿಸಿ ಮುಂದೆ ಹೋಗುವುದರ ಜೊತೆಗೆ ವಿದ್ಯಾರ್ಥಿಗಳ ಜೊತೆಗೆ ಸೌಜನ್ಯಯುತವಾಗಿ ವರ್ತಿಸುವಂತೆ ತಿಳುವಳಿಕೆ ನೀಡಬೇಕು ಎಂದರು.
ಬಾಲಾ ನ್ಯಾಯ ಕಾಯಿದೆ ಮತು ಪೋಕ್ಸೋ ಕಾಯಿದೆ ಬಗ್ಗೆ ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡ ಬೇಕು. ಅತಿ ಹೆಚ್ಚಿನ ವಿದ್ಯಾರ್ಥಿಗಳು ನಿಂತು ಪ್ರಯಾಣಿಸುವ ಸರತಿಗಳ ಬಗ್ಗೆ ವಿಭಾಗ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಹೆಚ್ಚುವರಿ ಸರತಿಗಳನ್ನು ಅಳವಡಿಸುವ ಅವಶ್ಯಕತೆ ಬಗ್ಗೆ ಪರಿಶೀಲಿಸಿ ಕ್ರಮವಹಿಸಬೇಕು ಎಂದರು.
ಪ್ರತೀ ಬಸ್ನಿಲ್ದಾಣದಲ್ಲಿ ಹಾಗೂ ಬಸ್ಗಳಲ್ಲಿ ಮಕ್ಕಳ ಸಹಾಯವಾಣಿ ಯನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು. ಅಗತ್ಯವಿದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಕಾರವನ್ನು ಪಡೆದು ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಕ್ಕಳ ಸ್ನೇಹಿಯಾಗಿ ಸಾರಿಗೆ ಸೇವೆಯನ್ನು ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಸಹಾಯಕ ಸಂಚಾರ ನಿರೀಕ್ಷಕ ರವೀಂದ್ರ, ಉಡುಪಿಯ ಸಂಚಾರ ನಿಯಂತ್ರಕರಾದ ದಿನೇಶ ಸಿ.ಕೆ, ಮುತ್ತಪ್ಪ, ಗಣಪತಿ ಪ್ರಭು ಹಾಗೂ ಅರುಣ್ ಕುಮಾರ್, ಘಟಕ ವ್ಯವಸ್ಥಾಪಕ ಅಶೋಕ ಹೆಗಡೆ, ಕುಂದಾಪುರದ ಸಂಚಾರ ನಿಯಂತ್ರಕರಾದ ಯಾದವ, ಶಂಕ್ರಪ್ಪ ದಾನಣ್ಣವರ ಹಾಗೂ ವಿಷ್ಣು ಪಟಗಾರ ಮತ್ತಿತರರು ಉಪಸ್ಥಿತರಿದ್ದರು.







