ಟ್ಯಾಕ್ಟರ್ ಅಪಘಾತ: ಗಾಯಾಳು ಮೃತ್ಯು

ಕಾರ್ಕಳ, ಫೆ.28: ಮುಂಡ್ಕೂರು ಗ್ರಾಮದ ಕಜೆ ಶಾಲೆಯ ಹತ್ತಿರ ಎಂಬಲ್ಲಿ ಎರಡು ದಿನಗಳ ಹಿಂದೆ ಟ್ಯಾಕ್ಟರ್ ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ತೆನ್ನರಸನ್ ಎಂದು ಗುರುತಿಸಲಾಗಿದೆ. ಇವರು ಫೆ.26ರಂದು ಸಚ್ಚೇರಿಪೇಟೆಯಿಂದ ಬೆಳ್ಮಣ್ ಕಡೆಗೆ ಹೋಗುತ್ತಿದ್ದಾಗ ಟ್ರಾಕ್ಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಇದರಿಂದ ತೆನ್ನರಸನ್ ಗಂಭೀರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ.
ಕಾರ್ಕಳ, ಉಡುಪಿ, ಮಣಿಪಾಲ, ಮಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನಿಂದ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಅವರು ಫೆ.28ರಂದು ಬೆಳಗಿನ ಜಾವ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





