ರಂಗಚಟುವಟಿಕೆಯಿಂದ ಹಾದಿ ತಪ್ಪುವವರನ್ನು ತಡೆಯುವ ಕಾರ್ಯ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ, ಮಾ.2: ಯುವಜನರು ದಾರಿ ತಪ್ಪುವುದನ್ನು, ದುಶ್ಚಟಕ್ಕೆ ಬಲಿಯಾಗುವುದನ್ನು ತಡೆಯುವ ಕೆಲಸ ರಂಗಚಟುವಟಿಕೆ, ಸಮಾಜಮುಖಿ ಕಾರ್ಯಗಳಿಂದ ಆಗುತ್ತವೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಜಯಕರಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.
ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ಶನಿವಾರ ನಡೆದ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಣ್ಣಪ್ರಾಯದಲ್ಲಿಯೇ ಹಾಡು, ನೃತ್ಯ, ನಾಟಕಗಳಲ್ಲಿ ತೊಡಗಿಸಿ ಕೊಳ್ಳುವವರು ದಾರಿ ತಪ್ಪುವುದಿಲ್ಲ. ದುರಭ್ಯಾಸಗಳಿಗೆ ಒಳಗಾಗುವುದಿಲ್ಲ. ರಂಗ ಸಂಸ್ಥೆಗಳು ಕಲೆಯನ್ನು ಕಲಿಸುವುದರ ಜೊತೆಗೆ ಜೀವನ ಪಾಠವನ್ನೂ ಹೇಳಿಕೊಡುತ್ತವೆ ಎಂದು ಅವರು ತಿಳಿಸಿದರು.
ಲಯನ್ಸ್ ಉಪ ಗವರ್ನರ್ ಸಪ್ನಾ ಸುರೇಶ್ ಮಾತನಾಡಿದರು. ಯಕ್ಷಗುರು ಯು.ದುಗ್ಗಪ್ಪ ಸ್ಮರಣಾರ್ಥ ಯಕ್ಷಸುಮ ಪ್ರಶಸ್ತಿಯನ್ನು ಗೋಪು ಕೆ. ಅವರಿಗೆ ಪ್ರದಾನ ಮಾಡಲಾಯಿತು. ಉದ್ಯಮಿಗಳಾದ ಹರಿಯಪ್ಪಕೋಟ್ಯಾನ್, ಆನಂದ್ ಪಿ.ಸುವರ್ಣ, ಉದ್ಯಮಿ ಹರೀಶ್ ಶ್ರೀಯಾನ್, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ದೇವದಾಸ್ ಆರ್.ಸುವರ್ಣ, ಪ್ರಭಾಕರ ಪೂಜಾರಿ, ಸುಮನಸಾ ಕೊಡವೂರು ಸಂಸ್ಥೆಯ ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಅಕ್ಷತ್ ಅಮೀನ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿಯ ಪುನಹ ಥಿಯೇಟರ್ ಕಲಾವಿದರಿಂದ ಯೋಗಿ ಮತ್ತು ಭೋಗಿ ನಾಟಕ ಪ್ರದರ್ಶನಗೊಂಡಿತು.







