ಕರಾವಳಿ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ: ಡಿ.ಕೆ.ಶಿವಕುಮಾರ್

ಉಡುಪಿ, ಮಾ.2: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರತ್ಯೇಕ ವಿಶೇಷ ಪ್ರವಾಸೋದ್ಯಮ ನೀತಿ ತರಲು ಚಿಂತನೆ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಬೇರೆ ಬೇರೆಯವರೊಂದಿ ಸಮಾಲೋಚನೆ ಮಾಡುತಿದ್ದಾರೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಇದರಿಂದ ಜಿಲ್ಲೆಯಲ್ಲಿ ಸಂಚಲನ ಮೂಡುತ್ತಾ ಎಂದು ಕೇಳಿದಾಗ, ಇಲ್ಲಿನ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ಹೊರಗೆ ವಲಸೆ ಹೋಗುವುದನ್ನು ತಪ್ಪಿಸಿ ಇಲ್ಲೇ ಅವರಿಗೆ ಉದ್ಯೋಗ ದೊರಕುವಂತೆ ಮಾಡುವುದು ನಮ್ಮ ಉದ್ದೇಶ. ಇಲ್ಲಿನ ಜನ ವಿದ್ಯಾ ವಂತರು, ಬುದ್ಧಿವಂತರು, ಪ್ರಜ್ಞಾವಂತರಿದ್ದಾರೆ. ಕರಾವಳಿ ವಿಶೇಷ ಪ್ರವಾಸೋದ್ಯಮ ನೀತಿ ಮೂಲಕ ಅವರು ಇಲ್ಲೇ ಉದ್ಯೋಗ ಪಡೆಯುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಸಿನಿಮಾ ರಂಗದವರಿಗೆ ಮತ್ತೊಮ್ಮೆ ಎಚ್ಚರಿಕೆ: ಕನ್ನಡ ಚಿತ್ರರಂಗದವರ ಕುರಿತು ತಾನು ನೀಡಿದ ಹೇಳಿಕೆ ವಿವಾದ ಎಬ್ಬಿಸಿ ರುವ ಕುರಿತು ಅವರ ಗಮನ ಸೆಳೆದಾಗ, ನನ್ನ ಹೇಳಿಕೆಯ ಕುರಿತಂತೆ ಅಶೋಕ್ ಏನಾದರೂ ಮಾತಾಡಿಕೊಳ್ಳಲಿ, ಸಿನಿಮಾದವರು ಏನಾದರೂ ಮಾತನಾಡಿಕೊಳ್ಳಲಿ. ನನಗೆ ಗೊತ್ತಿರುವ ಸತ್ಯವನ್ನು ಹೇಳಿದ್ದೇನೆ. ಅವರು ಬೇಕಿದ್ದರೆ ಪ್ರತಿಭಟನೆ ಮಾಡಲಿ ಹೋರಾಟ ಆದ್ರೂ ಮಾಡಲಿ ಎಂದರು.
ನಮ್ಮ ನೀರು, ನಮ್ಮ ಹಕ್ಕಿನ ಹೋರಾಟಕ್ಕೆ ಅವರು ಬಂದಿಲ್ಲ. ನೆಲ ಜಲದ ವಿಚಾರದಲ್ಲಿ ಪಕ್ಷಾತೀತವಾಗಿ ನಾವು ಹೋರಾಟ ಮಾಡಿದ್ದೇವೆ. ಮೇಕೆದಾಟು ಯಾತ್ರೆ ಮಾಡುವಾಗ ಯಾರು ಬರಲಿಲ್ಲ. ನೆಲ ಜಲದ ವಿಚಾರದಲ್ಲಿ ಹೋರಾಟ ಮಾಡುತ್ತೇವೆ ಎನ್ನುವ ಚಿತ್ರರಂಗದವರು ಈ ಹೋರಾಟಕ್ಕೆ ಬಂದಿದ್ದಾರಾ ಎಂದು ಪ್ರಶ್ನಿಸಿದರು.ಕೇವಲ ಪ್ರೇಮ್ ಕೇಸು ಹಾಕಿಸಿಕೊಂಡರು. ದುನಿಯಾ ವಿಜಿ, ಸಾಧು ಕೋಕಿಲ ಇವರು ಮಾತ್ರ ಕೇಸು ಹಾಕಿಸಿಕೊಂಡರು. ಬಿಜೆಪಿಯವರು ಅವರ ಮೇಲೆ ಕೇಸು ಹಾಕಿದರು ಎಂದರು.
ಈಗ ನಿನ್ನೆಯ ಕಾರ್ಯಕ್ರಮವನ್ನೇ ತೆಗೆದುಕೊಳ್ಳಿ. ಆಗಿರೋದು ಯಾರ ಫಂಕ್ಷನ್ನು? ಅದೇನು ನನ್ನ ಕಾರ್ಯಕ್ರಮನಾ. ಫಿಲಂ ಇಂಡಸ್ಟ್ರಿ ಸತ್ತು ಹೋಯಿತು ಥಿಯೇಟರಗಳು ಮುಚ್ಚಿಹೋಯಿತು ಅಂತ ಬೊಬ್ಬೆ ಹೊಡಿತಾರೆ. ನಮ್ಮ ಊಟ ಹೋಯಿತು ಅಂತ ಮಾತಾಡ್ತಾರೆ. ನಿನ್ನೆಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಾರಿಗೋಸ್ಕರ ಮಾಡಿದ್ದು. ಇಂಡಸ್ಟ್ರಿ ಅಂತ ಹೇಳಿದರೆ ಕ್ಯಾಮರಾ ಮೆನ್, ಸ್ಕ್ರಿಪ್ಟ್ ರೈಟರ್, ನಟರು, ನಿರ್ದೇಶಕರು ಎಲ್ಲರೂ ಬರಬೇಕು. ಅವರ ಹಬ್ಬದಲ್ಲಿ, ಸಂಭ್ರಮದಲ್ಲಿ ಅವರೇ ಇಲ್ಲ ಅಂದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.
ಸಿನಿಮಾರಂಗದವರೇನು ಕಾಂಗ್ರೆಸ್ ಕಾರ್ಯಕರ್ತರೇ ಎಂಬ ಆರ್. ಅಶೋಕ್ ಹೇಳಿಕೆಗೆ ಗರಂ ಆದ ಡಿಕೆಶಿ, ಅಶೋಕ್ ಬೇಕಾದ್ರೆ ತಲೆ ಕೆಳಗೆ ಮಾಡಿಕೊಳ್ಳಿ. ಇದು ಕಾರ್ಯಕರ್ತರ ಪ್ರಶ್ನೆಯಲ್ಲ. ಚಿತ್ರರಂಗದವರ ಕಾರ್ಯ ಕ್ರಮದಲ್ಲಿ ಅವರೇ ಇಲ್ಲದಿದ್ದರೆ ಹೇಗೆ ಎಂದರು.
ಇತ್ತೀಚೆಗೆ ನಾವು ಐಟಿ, ಬಿಟಿ, ಇನ್ವೆಸ್ಟರ್ಸ್ ಮೀಟ್ ಮಾಡಿದೆವು. ಅದರಲ್ಲಿ ಭಾಗವಹಿಸಿದವರನ್ನು ಕಾಂಗ್ರೆಸ್ ಕಾರ್ಯ ಕರ್ತರು ಅನ್ನೋಕೆ ಆಗುತ್ತಾ. ಗೃಹಲಕ್ಷ್ಮಿ, ಗೃಹಜ್ಯೋತಿ ಕಾಂಗ್ರೆಸ್ನವರಿಗೆ ಮಾತ್ರ ಕೊಡ್ತಾ ಇದ್ದೇವಾ? ಬಿಜೆಪಿ ಕಾರ್ಯ ಕರ್ತರು ಯಾರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳಬೇಡಿ ಎಂದು ಕರೆ ಕೊಟ್ಟುಬಿಡಿ..ಕಾಂಗ್ರೆಸ್ ಕೊಟ್ಟ ಕಾರ್ಯಕ್ರಮ ನೀವ್ಯಾರು ತಗೋಳಬೇಡಿ ಅಂತ ಹೇಳಿ...ಎಲ್ಲಾ ಪಕ್ಷದವರು ಸೌಲಭ್ಯಗಳನ್ನು ಎಂಜಾಯ್ ಮಾಡ್ತಾ ಇದ್ದಾರೆ. ಬೇಕಿದ್ರೆ ಬಿಜೆಪಿಯವರು ಹಣ ಕೊಟ್ಟೆ ಬಸ್ಸಿನಲ್ಲಿ ಓಡಾಟ ಮಾಡ್ಲಿ... ನೋಡಿ ಜನರು ಕರೆಕ್ಟ್ ಆಗಿ ಇದ್ದಾರೆ, ಆದರೆ ನಾಯಕರಿಗೆ ತಮಗೆ ಅವಕಾಶ ಸಿಕ್ಕಿಲ್ಲ ಅನ್ನುವ ಹೊಟ್ಟೆ ಉರಿ ಎಂದು ವ್ಯಂಗ್ಯವಾಡಿದರು.







