ಖಿದ್ಮಾ ಫೌಂಡೇಶನ್ನಿಂದ ಸೌಹಾರ್ದ ಇಫ್ತಾರ್ ಕೂಟ

ಕುಂದಾಪುರ: ಖಿದ್ಮಾ ಫೌಂಡೇಶನ್ ಕುಂದಾಪುರ ತಾಲೂಕು ವತಿಯಿಂದ ಸೌಹಾರ್ದ ಇಫ್ತಾರ್ ಕೂಟವನ್ನು ಆನಗಳ್ಳಿ ಬಸ್ರೂರಿನ ಆದಿತ್ಯ ರೆಸಾರ್ಟ್ನಲ್ಲಿ ಆಯೋಜಿಸಲಾಗಿತ್ತು.
ದಿಕ್ಸೂಚಿ ಭಾಷಣ ಮಾಡಿದ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಇದ್ರೀಸ್ ಹೂಡೆ ಮಾತನಾಡಿ, ಉಪವಾಸವು ಉಪವಾಸಿಗನಲ್ಲಿ ತ್ಯಾಗ, ಬಲಿದಾನ, ಕ್ಷಮೆ ಮತ್ತು ಸಹಾನು ಭೂತಿಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ದಾನ ಧರ್ಮ ಮತ್ತು ಸೇವಾ ಮನೋಭಾವ ಬೆಳೆಸುತ್ತದೆ. ಸಮಾಜದ ಬಡ, ದರಿದ್ರ, ಸಂಕಷ್ಟ ಪೀಡಿತ ಅಗತ್ಯವುಳ್ಳ ಜನರ ತೊಂದರೆಗಳನ್ನು ಅರಿಯಲು ಮತ್ತು ಅವರಿಗೆ ನೆರವಾಗಲು ಉಪವಾಸಿಗನನ್ನು ಪ್ರೇರೇಪಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಸಹಬಾಳ್ವೆ ಕುಂದಾಪುರದ ಅಧ್ಯಕ್ಷ ರಾಮಕೃಷ್ಣ ಹೆರ್ಳೆ, ರಾಜಕೀಯ ಮುಖಂಡ ದೇವಾನಂದ ಶೆಟ್ಟಿ, ಕುಂದಾಪುರ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಬಸ್ರೂರು ಗ್ರಾಪಂ ಅಧ್ಯಕ್ಷ ಬೇಳೂರು ದಿನಕರ ಶೆಟ್ಟಿ, ಬಸ್ರೂರು ನಿವೇದಿತಾ ಪ್ರೌಢಶಾಲೆಯ ನಿವೃತ್ತ ಮುಖ್ಯೋ ಪಾಧ್ಯಾಯ ದಿನಕರ್ ಆರ್.ಶೆಟ್ಟಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಕುಂದಾಪುರ ತಾಲೂಕಿನ ಸಂಚಾಲಕ ಕೆ.ಸಿ.ರಾಜು ಬೆಟ್ಟಿನ ಮನೆ ಮಾತನಾಡಿದರು.
ಖಿದ್ಮಾ ಫೌಂಡೇಶನ್ ತಾಲೂಕು ಕುಂದಾಪುರ ಮತ್ತು ಬೈಂದೂರು ಅಧ್ಯಕ್ಷ ಶೇಖ್ ಅಬು ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರದ ಆದರ್ಶ್ ಆಸ್ಪತ್ರೆಯ ಡಾ.ಆದರ್ಶ ಹೆಬ್ಬಾರ್, ಖಿದ್ಮಾ ರಿಯಾದ್ನ ಪ್ರತಿನಿಧಿ ಶೇಖ್ ಹನೀಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ ಮೊದಲಾದವರು ಉಪಸ್ಥಿತರಿದ್ದರು.
ಮೌಲಾನಾ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಹ್ಮದ್ ಸವೋದ್ ಕುರ್ಆನ್ ಪಠಿಸಿದರು. ಮಾಜಿ ಅಧ್ಯಕ್ಷ ಶೇಖ್ ಅಸ್ಗರ್ ಅಲಿ ವಂದಿಸಿದರು. ಮುನೀರ್ ಅಹ್ಮದ್ ಕಂಡ್ಲೂರು ಕಾರ್ಯಕ್ರಮ ನಿರೂಪಿಸಿದರು.







