ರಸ್ತೆಗೆ ಅಡ್ಡ ಬಂದ ದನ: ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ; ಚಾಲಕ ಮೃತ್ಯು

ಬ್ರಹ್ಮಾವರ, ಮಾ.13: ರಸ್ತೆಗೆ ಅಡ್ಡ ಬಂದ ದನವನ್ನು ತಪ್ಪಿಸುವ ಭರದಲ್ಲಿ ಕಾರೊಂದು ರಸ್ತೆಯ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಹೊಸೂರು ಗ್ರಾಮದ ಕುರ್ಪಾಡಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಮೃತರನ್ನು ಶ್ರೀಕಾಂತ್ ಆಚಾರ್ಯ(38) ಎಂದು ಗುರುತಿಸಲಾಗಿದೆ. ಮಾ.12ರಂದು ಮಧ್ಯಾಹ್ನ ಹೆಬ್ರಿ ಕಡೆಯಿಂದ ಬರುತ್ತಿದ್ದ ಕಾರಿಗೆ ಒಮ್ಮೆಲೇ ದನವೊಂದು ಅಡ್ಡ ಬಂತು. ಆ ದನಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಕಾರನ್ನು ರಸ್ತೆಯ ಎಡ ಬದಿಯ ಮಣ್ಣು ರಸ್ತೆಗೆ ಚಲಾಯಿಸಿದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಶ್ರೀಕಾಂತ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾ.13ರಂದು ನಸುಕಿನ ವೇಳೆ 1.25ರ ಸುಮಾರಿಗೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story