ಜಾಗೃತ ಗ್ರಾಹಕನಿಂದ ಮೋಸ, ವಂಚನೆಗಳಿಗೆ ಕಡಿವಾಣ: ಉಡುಪಿ ಡಿಸಿ ವಿದ್ಯಾಕುಮಾರಿ
ಉಡುಪಿಯಲ್ಲಿ ವಿಶ್ವ ಗ್ರಾಹಕ ದಿನಾಚರಣೆ

ಉಡುಪಿ, ಮಾ.15: ಜಾಗೃತ ಗ್ರಾಹಕನಿಂದ ಪ್ರತಿದಿನ ನಮ್ಮ ಸುತ್ತಮುತ್ತ ನಡೆಯುವ ಮೋಸ, ವಂಚನೆಗಳಿಗೆ ಕಡಿವಾಣ ಹಾಕಲು ಸಾಧ್ಯ. ಕೆಲವೊಮ್ಮೆ ಗ್ರಾಹಕರು ಎಷ್ಟೇ ವಿದ್ಯಾವಂತರಾಗಿದ್ದರೂ ಸಹ ತಮಗೆ ಅರಿಲ್ಲದಂತೆ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಹೀಗಾಗಿ ಮಾರುಕಟ್ಟೆಯಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ಜಾಗೃತರಾಗಿ, ತಮ್ಮ ಹಕ್ಕು ಹಾಗೂ ಕಾಯ್ದೆಗಳ ಬಗ್ಗೆ ಅರಿವನ್ನು ಹೊಂದಿ ಅನ್ಯಾಯವಾಗದ ರೀತಿಯಲ್ಲಿ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಉಪೇಂದ್ರ ಮಂಟಪದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಗ್ರಾಹಕರೇ ಆಗಿರುತ್ತಾರೆ. ದೈನಂದಿನ ವಸ್ತುಗಳು ಸೇರಿದಂತೆ ಯಾವುದೇ ಸೇವೆಯನ್ನು ಪಡೆಯುವಾಗ ವಸ್ತುಗಳ ಗುಣಮಟ್ಟ ಪರೀಕ್ಷಿಸಿ, ಎಚ್ಚರಿಕೆಯಿಂದ ಖರೀದಿಸಬೇಕು. ಒಂದೊಮ್ಮೆ ಮೋಸವಾದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮಾರುಕಟ್ಟೆಗಳು ತನ್ನ ಆಕರ್ಷಕ ಜಾಹೀರಾತು ಹಾಗೂ ಮಾಧ್ಯಮಗಳ ಮೂಲಕ ಸಾರ್ವಜನಿಕರನ್ನು ಆರ್ಕಷಿ ಸುತ್ತಿದ್ದು, ಅವುಗಳು ಸರಕು/ ಸೇವೆಗಳನ್ನು ಪಡೆಯುವಂತೆ ಪ್ರಚೋದಿಸುತ್ತಿವೆ. ನಮಗಿರುವ ಅವಶ್ಯಕತೆ ಹಾಗೂ ಅನಿವಾರ್ಯತೆಗಳನ್ನು ಅರಿತು, ಅನಾವಶ್ಯಕ ದುಂದುವೆಚ್ಚ ಮಾಡದೇ ಸರಕು ಹಾಗೂ ಸೇವೆಗಳ ಸತ್ಯಾಸತ್ಯತೆಗಳನ್ನು ಪರಾಂಬರಿಸಿ ನಂತರ ಖರೀದಿಸಬೇಕು ಎಂದರು.
ಆಹಾರ, ಔಷಧಿ ಸೇರಿದಂತೆ ವಿವಿಧ ದೈನಂದಿನ ವಸ್ತುಗಳನ್ನು ಖರೀದಿಸುವ ಮೊದಲು ಅದರ ಉತ್ಪಾದನಾ ದಿನಾಂಕ ಹಾಗೂ ಅವುಗಳ ಅವಧಿ ಮುಗಿಯುವ ದಿನಾಂಕವನ್ನು ಪರೀಕ್ಷಿಸಿ, ಖರೀದಿಸುವ ಅಭ್ಯಾಸ ಬೆಳೆಸಿಕೊಳ್ಳ ಬೇಕು. ಅವಧಿ ಮುಗಿದ ಔಷಧಿಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದು, ಸಾರ್ವಜನಿಕರಿಗೆ ಗ್ರಾಹಕರ ರಕ್ಷಣಾ ಕಾಯಿದೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕ ಯು.ಜಿ. ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಒಬ್ಬ ವ್ಯಕ್ತಿ ಹುಟ್ಟಿನಿಂದ ಕೊನೆಯವರೆಗೂ ತನಗೆ ಅಗತ್ಯವಿರುವ ವಸ್ತುಗಳನ್ನು ಹಾಗೂ ಸೇವೆಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷ ರೀತಿಯಲ್ಲಿ ಪಡೆದು ಬಳಕೆದಾರನಾಗುತ್ತಾನೆ. ತಾನು ಪಡೆದ ವಸ್ತು/ಸೇವೆಯಲ್ಲಿ ಏನಾದರೂ ನ್ಯೂನ್ಯತೆಗಳು ಕಂಡುಬಂದಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿ, ಅತಿ ಕಡಿಮೆ ಖರ್ಚಿನಲ್ಲಿ ನ್ಯಾಯ ಪಡೆಯಬಹುದು ಎಂದರು.
ಬಳಕೆದಾರರ ಕಾನೂನುಗಳು ಜನಸಾಮಾನ್ಯರಿಗೆ ಅರ್ಥವಾಗುವ ನಿಟ್ಟಿನಲ್ಲಿ ಸರಳವಾಗಿದ್ದು, ಅನ್ಯಾಯವಾದ ಸಂದರ್ಭದಲ್ಲಿ ಗ್ರಾಹಕರು ಶೀಘ್ರವಾಗಿ ನ್ಯಾಯ ಪಡೆಯಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುನೀಲ ತಿ. ಮಾಸರೆಡ್ಡಿ ಮಾತನಾಡಿ, ವಸ್ತು ಹಾಗೂ ಸೇವೆಗಳನ್ನು ಪಡೆದ ಅಂತಿಮ ಬಳಕೆದಾರನು ಗ್ರಾಹಕನಾಗುತ್ತಾನೆ. ಯಾವುದೇ ವಸ್ತು ಗಳನ್ನು ಖರೀದಿಸಿದಲ್ಲಿ ಅದರ ಬಿಲ್ಲು/ರಶೀದಿಗಳನ್ನು ಕನಿಷ್ಠ ಅವಧಿಯವರೆಗಾದರೂ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳಬೇಕು. ಒಂದು ವೇಳೆ ಪ್ರತಿಫಲ ನೀಡಿ ಖರೀದಿ ಸಿದ ವಸ್ತುಗಳಲ್ಲಿ ದೋಷ ಕಂಡುಬಂದಾಗ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ವ್ಯಾಜ್ಯ ಹೂಡಿ ಪರಿಹಾರ ಪಡೆದುಕೊಳ್ಳಬಹುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಮಾತನಾಡಿ, ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಯುಪಿಎಂಸಿ ಕಾಲೇಜಿನ ಪ್ರಾಂಶುಪಾಲೆ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಗೀತಾ ಶೇಟ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸುಜಾತಾ ಕೋರಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಬಳಕೆದಾರರ ವೇದಿಕೆಯ ವಿಶ್ವಸ್ಥ ಹರಿಕೃಷ್ಣ ಶಿವತ್ತಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಎನ್.ರಾಮ ಭಟ್ ವಂದಿಸಿದರು.







