ತೊಟ್ಟಂ ಚರ್ಚಿನಲ್ಲಿ ಅಪ್ಪಂದಿರ ದಿನಾಚರಣೆ

ಮಲ್ಪೆ, ಮಾ.21: ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಕುಟುಂಬ ಆಯೋಗದ ನೇತೃತ್ವದಲ್ಲಿ ಅಪ್ಪಂದಿರ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.
ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಪವಿತ್ರ ಬಲಿಪೂಜೆ ಯನ್ನು ನೇರವೇರಿಸಿ ಸಂದೇಶ ನೀಡಿದರು. ಪ್ರತಿಯೊಂದು ಕುಟುಂಬಗಳಲ್ಲಿ ತಂದೆಯ ಪಾತ್ರ ಮಹತ್ವದ್ದಾಗಿದ್ದು ಅವರ ಜವಾಬ್ದಾರಿ, ನಿಷ್ಠೆ, ಪ್ರಾಮಾಣಿಕತೆ, ದಾನ ಮತ್ತು ಕ್ಷಮಿಸುವಂತಹ ಪ್ರಮುಖ ಸಾಮರ್ಥ್ಯಗಳನ್ನು ಗುರುತಿಸಬೇಕು. ಯಾವುದೇ ಸವಾಲುಗಳು ಎದುರಾದಾಗ ಅದನ್ನು ಧೈರ್ಯವಾಗಿ ಎದುರಿಸಲು ತಂದೆ ತನ್ನ ಮಕ್ಕಳಿಗೆ ಸದಾ ಭರವ ಸೆಯ ವ್ಯಕ್ತಿಯಾಗಿರುತ್ತಾರೆ ಎಂದರು.
ಚರ್ಚಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಪ್ರೀತಿಯ ತಂದೆ ಮತ್ತು ಶ್ರದ್ಧಾಭರಿತ ಪತಿಯಾಗಿರುವಾಗ ತಂದೆ ಜೀವನದ ಸವಾಲುಗಳನ್ನು ಹೇಗೆ ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬುದರ ಕುರಿತು ಅಮೂಲ್ಯ ವಾದ ಒಳನೋಟಗಳನ್ನು ಹಂಚಿಕೊಂಡರು.
ಅಪ್ಪಂದಿರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕುಟುಂಬ ಆಯೋಗದ ಸಂಚಾಲಕ ಹೆರಾಲ್ಡ್ ಡಿಸೋಜ ಸ್ವಾಗತಿಸಿದರು. ಧರ್ಮಪ್ರಾಂತ್ಯದ ಕುಟುಂಬ ಆಯೋಗದ ಕಾರ್ಯದರ್ಶಿ ಲೆಸ್ಲಿ ಆಯೋಗ ಕಾರ್ಯಕ್ರಮ ನಿರೂಪಿಸಿದರು.







