ಸಾಮಾಜಿಕ ಸಮಾನತೆ, ಸಹಬಾಳ್ವೆ ಅಂಬೇಡ್ಕರ್ ಆಶಯ: ಜಯನ್ ಮಲ್ಪೆ

ಕಲ್ಯಾಣಪುರ, ಎ.16: ಸಾಮಾಜಿಕ ಸಮಾನತೆ ಮತ್ತು ಸಹೋದರತ್ವ ಸಂವಿಧಾನದ ಮೂಲಭೂತ ಆಶಯವಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಬಹಳ ಆತಂಕಕಾರಿ ವಿಷಯ ಎಂದು ಸಾಮಾಜಿಕ ಕಾರ್ಯಕರ್ತ ಜಯನ್ ಮಲ್ಪೆ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವುದು ಸರಕಾರದ ಕರ್ತವ್ಯವಾಗಿದ್ದು, ಹಾಗಾದಾಗ ಮಾತ್ರ ಅಂಬೇಡ್ಕರ್ ಜಯಂತಿ ಅರ್ಥಪೂರ್ಣವಾಗುತ್ತದೆ ಎಂದರು.
ಕಾಲೇಜಿನ ಇತಿಹಾಸ ವಿಭಾಗ, ಎಸ್ಸಿ-ಎಸ್ಟಿ ಸೆಲ್ ಮತ್ತು ಲೈಬ್ರೆರಿ ವಿಭಾಗದ ಸಂಯುಕ್ತವಾಗಿ ಆಯೋಜಿ ಸಿದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರ ರಚನಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಮತ್ತು ಅಂಬೇಡ್ಕರ್ ಜೀವನದ ಕುರಿತು ವಿದ್ಯಾರ್ಥಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ, ಅಂಬೇಡ್ಕರ್ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಐಕ್ಯೂಎಸಿ ಸಂಚಾಲಕರಾದ ಶಾಲೆಟ್ ಮಥಾಯಸ್, ಡಾ. ಜಯರಾಮ್ ಶೆಟ್ಟಿಗಾರ್, ಕ್ಲಾರಾ ಲೋಬೊ, ರೇಖಾ, ವಿದ್ಯಾರ್ಥಿ ಸಂಘಟಕರಾದ ವಸೀಫ ಮತ್ತು ಧನ್ಯಾ ಉಪಸ್ಥಿತರಿದ್ದರು.
ಭೂಮಿಕ ಆರಂಭದಲ್ಲಿ ಸ್ವಾಗತಿಸಿದರೆ, ಶ್ರದ್ಧ ವಂದಿಸಿದರು. ಸಿಂಚನ ಕಾರ್ಯಕ್ರಮ ನಿರೂಪಿಸಿದರು.