ವಸತಿ/ವಾಣಿಜ್ಯ ಸಂಕೀರ್ಣಗಳ ತ್ಯಾಜ್ಯ ನೀರಿನ ವೈಜ್ಞಾನಿಕ ವಿಲೇವಾರಿಗೆ ಸೂಚನೆ
ಉಡುಪಿ, ಎ.23: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣಗಳ ತ್ಯಾಜ್ಯ ನೀರನ್ನು ಮಳೆ ನೀರು ಹರಿಯುವ ಚರಂಡಿಗಳಿಗೆ ಬಿಡುತ್ತಿರುವವರನ್ನು ಪತ್ತೆಹಚ್ಚಿ ಆಯಾ ಕಟ್ಟಡಗಳ ಮಾಲಕರಿಗೆ ತಮ್ಮ ಕಟ್ಟಡದ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಲೇ ಮಾಡಿಕೊಳ್ಳಲು ನೋಟಿಸ್ ನೀಡಿ ತಿಳುವಳಿಕೆ ನೀಡಲಾಗಿದ್ದರೂ ಸಹ, ಮಣಿಪಾಲ ಭಾಗದಲ್ಲಿ ನಗರಸಭೆಯ ನೋಟೀಸ್ಗೆ ಎಚ್ಚೆತ್ತುಕೊಳ್ಳದ ಕಟ್ಟಡ ಮಾಲಕರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಪ್ರಾಯೋಗಿಕವಾಗಿ ಮಳೆ ನೀರು ಹರಿಯುವ ಚರಂಡಿಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಮೂಲವನ್ನು ಪರಿಶೀಲಿಸಿ ಎಂಡ್ ಕ್ಯಾಪ್ ಹಾಕಿಸಿ ದಂಡ ವಿಧಿಸಲಾಗಿದೆ.
ಮುಂದಿನ ದಿನಗಳಲ್ಲಿ ಇದೇ ರೀತಿ ಯಾವುದೇ ಕಟ್ಟಡ ಮಾಲಕರು ತಮ್ಮ ಕಟ್ಟಡದ ಕೊಳಚೆ ನೀರನ್ನು, ಮಳೆ ನೀರು ಹರಿಯುವ ಚರಂಡಿಗೆ ಬಿಡುತ್ತಿರುವುದು ಕಂಡು ಬಂದಲ್ಲಿ ದಂಡವನ್ನು ವಿಧಿಸಿ, ಜಲಮಾಲಿನ್ಯ ತಡೆ ಕಾಯ್ದೆ ಅನ್ವಯ ಕಾನೂನು ಕ್ರಮವನ್ನು ಜರುಗಿಸಿ, ಕಟ್ಟಡಗಳ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲು ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





