ನಾಡ: ಕೆಎಸ್ಸಾರ್ಟಿಸಿ ಬಸ್ ಪುನರಾರಂಭಕ್ಕೆ ಆಗ್ರಹಿಸಿ ಪ್ರತಿಭಟನೆ
ಪರ್ಮಿಟ್ ಇದ್ದೂ ಓಡಿಸದ ಖಾಸಗೀ ಬಸ್ ಪರವಾನಿಗೆ ರದ್ದಿಗೆ ಒತ್ತಾಯ

ಕುಂದಾಪುರ, ಎ.24: ಮೊವಾಡಿ ಮಾರ್ಗವಾಗಿ ನಾಡ, ಬಡಾಕೆರೆ, ಕೋಣ್ಕಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್ಗೆ ಖಾಸಗಿ ಬಸ್ ಮಾಲಕರು ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದು, ಇದು ಕರಾವಳಿ ಜಿಲ್ಲೆಗಳ ಖಾಸಗಿ ಬಸ್ ಮಾಲಕರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಇವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿಯಿಲ್ಲ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಗುರುವಾರ ನಾಡ ಗ್ರಾಪಂ ಕಚೇರಿ ಎದುರು ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಪಡುಕೋಣೆ ಘಟಕ, ಮೊವಾಡಿ ಫ್ರೆಂಡ್ಸ್, ಜನವಾದಿ ಮಹಿಳಾ ಸಂಘಟನೆ ನಾಡ ವಲಯ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ನಾಡ ಹಾಗೂ ಮೊವಾಡಿ ವಲಯ ಅಲ್ಲದೇ ಮೊವಾಡಿ ಫ್ರೆಂಡ್ಸ್ ನೇತೃತ್ವದಲ್ಲಿ ಕುಂದಾಪುರದಿಂದ ತ್ರಾಸಿ-ಮೊವಾಡಿ- ಪಡುಕೋಣೆ, ಬಡಾಕೆರೆಯಾಗಿ ನಾಡ, ಕೋಣ್ಕಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಆಗ್ರಹಿಸಿ ನಡೆದ ಗ್ರಾಮಸ್ಥರ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸರಕಾರಿ ಬಸ್ ಸಂಚಾರ ಮತ್ತೆ ಆರಂಭಿಸಬೇಕು ಎನ್ನುವ ನಿಟ್ಟಿನಲ್ಲಿ ಇದು ಮೊದಲ ಹಂತದ ಹೋರಾಟ. ಮುಂದೆ ಕಾನೂನು ಹೋರಾಟದ ಅನಿವಾರ್ಯತೆಯೂ ಇದ್ದು, ಅದಕ್ಕಾಗಿ ಗ್ರಾಮಸ್ಥರಿಂದ ಭಿಕ್ಷೆ ಎತ್ತಿಯಾ ದರೂ, ಹಣ ಸಂಗ್ರಹಿಸಿ, ನ್ಯಾಯ ಸಿಗುವವರೆಗೆ ಹೋರಾಟ ಮಾಡಲಾಗುವುದು ಎಂದು ಅವರು ಘೋಷಿಸಿದರು.
ಖಾಸಗಿ ಬಸ್ ಮಾಲಕರು ಎಲ್ಲಾ ಮಾರ್ಗಗಳಲ್ಲಿ ಪರ್ಮಿಟ್ ಹೊಂದಿದ್ದರೂ, ಬಹುತೇಕ ಕಡೆಗಳಲ್ಲಿ ಬಸ್ ಓಡಿಸದೇ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೆಲವು ಮಾರ್ಗಗಳಲ್ಲಿ ಪರ್ಮಿಟ್ ಇಲ್ಲದೆಯೂ ಕಾನೂನು ಬಾಹಿರವಾಗಿ ಓಡುಸುತ್ತಿರುವವರ ವಿರುದ್ಧ ಪ್ರಾಧಿಕಾರ ಕ್ರಮ ಕೈಗೊಂಡು ಸಂಚಾರವನ್ನು ರದ್ದು ಪಡಿಸಬೇಕು ಎಂದವರು ಆಗ್ರಹಿಸಿದರು.
ಈ ಮಾರ್ಗದ ಬಸ್ ಸಂಚಾರ ಸಂಚಾರ ಸ್ಥಗಿತಗೊಳಿಸಿ 20 ದಿನಗಳಾಗಿವೆ. ಆದರೆ ಯಾವೊಬ್ಬ ಜನಪ್ರತಿನಿಧಿಯು ಈ ಬಗ್ಗೆ ಧ್ವನಿಯೆತ್ತಿಲ್ಲ. ಜನರೊಂದಿಗೆ ನಿಲ್ಲಬೇಕಾದ ಜನಪ್ರತಿನಿಧಿಗಳು ಈ ಬಗ್ಗೆ ಏನೂ ಮಾತಾಡಲ್ಲ. ಬಡ ಜನರ ಬಗ್ಗೆ ಕಾಳಜಿ ವಹಿಸುವ ಕನಿಷ್ಠ ಜವಾಬ್ದಾರಿಯು ಅವರಿಗಿಲ್ಲ. ಹೋರಾಟದ ಫಲವಾಗಿ ಬಂದ ಸರಕಾರಿ ಬಸ್ಸನ್ನು ನಿಲ್ಲಿಸಲು ಪ್ರಯತ್ನಿಸಿರುವುದು ಅನ್ಯಾಯ. ಇದರ ವಿರುದ್ಧ ಬೀದಿ ಗಿಳಿದು, ಕಾನೂನು ಮೂಲಕ ನಿರಂತರ ಹೋರಾಟ ನಡೆಯಲಿದೆ ಎಂದು ಸುರೇಶ್ ಕಲ್ಲಾಗರ ಹೇಳಿದರು.
ಡಿವೈಎಫ್ಐ ಮುಖಂಡ ರಾಜೀವ ಪಡುಕೋಣೆ ಮಾತನಾಡಿ, ಗ್ರಾಮಗಳ ಬಸ್ ಸೇವೆಗಾಗಿ ಕಳೆದ 9 ತಿಂಗಳಿಂದ ಹೋರಾಟ ನಡೆಸಿ ಖಾಸಗಿ ಬಸ್ ಇಲ್ಲದ ಕಡೆಗಳಲ್ಲಿ ಪರವಾನಿಗೆ ಪಡೆಯಲಾಗಿತ್ತು. ಈ ಬಸ್ ಉತ್ತಮ ಸೇವೆ ಸಲ್ಲಿಸಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸುಮಾರು 30 ಲಕ್ಷ ರೂ. ಗಳಷ್ಟು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ ಎಂದು ವಿವರಿಸಿದರು.
ಆದರೆ ಖಾಸಗಿ ಬಸ್ ಮಾಲಕರು ಸುಳ್ಳು ಮಾಹಿತಿ ನೀಡಿ ನ್ಯಾಯಾಲಯ ದಿಂದ ತಡೆಯಾಜ್ಞೆ ತಂದು ಜನರಿಗೆ ಅನ್ಯಾಯ ಮಾಡಿದ್ದಾರೆ. ಹಿಂದೆ ಈ ಬಸ್ ಸಂಚಾರದಿಂದ ಈ ಭಾಗದ ಹತ್ತಾರು ಊರಿನ ಬಡ ಪ್ರಯಾಣಿಕರಿಗೆ ಪ್ರಯೋಜನವಾಗುತ್ತಿತ್ತು. ಗ್ರಾಮೀಣ ಭಾಗದವರಿಗೆ ವರದಾನವಾದ ಈ ಬಸ್ ಸ್ಥಗಿತ ದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಬಸ್ಗಾಗಿ ಹೈಕೋರ್ಟ್ಗೂ ಹೋಗುತ್ತೇವೆ. ಬೈಂದೂರು ಕ್ಷೇತ್ರದಲ್ಲಿ ಮಾತ್ರ ಸರಕಾರಿ ಬಸ್ಗಳಿಗೆ ತಡ ತರುವ ಪ್ರಯತ್ನ ಆಗುತ್ತಿದೆ ಎಂದಲರು ಆರೋಪಿಸಿದರು.
ಆಲೂರು, ಹೊಯ್ಯಾಣ, ಅಕ್ಕಸಾಲಿಬೆಟ್ಟು ಮಾರ್ಗದಲ್ಲಿ ಕೆಎಸ್ಸಾರ್ಟಿಸಿ ಪರ್ಮಿಟ್ ಇದ್ದರೂ ಕೂಡ ಸರಕಾರಿ ಬಸ್ ಓಡಿಸದೇ ಇರುವುದು ಜನರಿಗೆ ಅನುಮಾನ ಮೂಡುವಂತಾಗಿದೆ ಎಂದು ಮತ್ತೊಬ್ಬ ಮುಖಂಡ ರಾಜೇಶ್ ಪಡುಕೋಣೆ ದೂರಿದರು.
ಡಿವೈಎಫ್ಐ ಮುಖಂಡ ಫಿಲಿಪ್ ಡಿಸಿಲ್ವಾ, ಹಂಚು ಕಾರ್ಮಿಕರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಹೆಚ್. ನರಸಿಂಹ, ಜನವಾದಿ ಮಹಿಳಾ ಸಂಘಟನೆಯ ನಾಗರತ್ನ ನಾಡ ಮಾತನಾಡಿದರು. ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮನೋರಮಾ ಭಂಡಾರಿ, ಪಲ್ಲವಿ, ಮೊವಾಡಿ ಫ್ರೆಂಡ್ಸ್ನ ಶಿವಾನಂದ, ರಾಘವೇಂದ್ರ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷೆ ಗುಲಾಬಿ, ನಾಗರಾಜ್, ನಾಡ ಗ್ರಾಪಂ ಸದಸ್ಯೆ ಶೋಭಾ, ನಿಸರ್ಗ ಪಡುಕೋಣೆ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನಾ ನಿರತರಿಂದ ನಾಡ ಗ್ರಾಪಂ ಅಧ್ಯಕ್ಷೆ ಪಾರ್ವತಿ ಮೊಗವೀರ, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯ ಡಿಟಿಒ ಕಮಲ್ ಕುಮಾರ್, ಕುಂದಾಪುರ ಡಿಪೋ ಮ್ಯಾನೇಜರ್ ರಾಜೇಶ್ ಶೆಟ್ಟಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿ ಶಾಂತರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಲಾಯಿತು. ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.







