ಕಸಾಪ ನಿಬಂಧನೆಗಳ ತಿದ್ದುಪಡಿಗಳು ಕಾನೂನು ಬಾಹಿರ ಅಲ್ಲ: ಡಾ.ಮಹೇಶ್ ಜೋಷಿ ಸ್ಪಷ್ಟನೆ

ಉಡುಪಿ, ಎ.30: ಕಾಲಕಾಲಕ್ಕೆ ಆಡಳಿತ ಚುರುಕು ಆಗಲು ಹೊಸ ಕಾನೂನಿನ ಅಳವಡಿಕೆಗಾಗಿ ನಮ್ಮಲ್ಲಿ ರುವ ನಿಬಂಧನೆಗಳನ್ನು ನಿಬಂಧನೆಗಳ ಅಡಿಯಲ್ಲಿಯೇ ತಿದ್ದುಪಡಿ ಮಾಡುವ ಅವಕಾಶ ಕನ್ನಡ ಸಾಹಿತ್ಯ ಪರಿಷತ್ಗೆ ಇದೆ. ನಾವು ಈವರೆಗೆ ಮಾಡಲಾದ ತಿದ್ದುಪಡಿ ಯಾವುದೂ ಕೂಡ ಕಾನೂನು ಬಾಹಿರ ಅಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಬಂಧನೆ ತಿದ್ದುಪಡಿ ಸಲಹಾ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ಮಾಡಿ, ಎಲ್ಲರು ಒಪ್ಪಿಗೆ ಕೊಟ್ಟರೆ ಏಕಧ್ವನಿ, ಇಲ್ಲದಿದ್ದರೆ ಮತಗಳಲ್ಲಿ ಬದಲಾವಣೆ ಮಾಡಲಾಗುವುದು. ಇಲ್ಲಿ ಎಲ್ಲವೂ ಚರ್ಚೆ ಮಾಡಿ ಅನಿವಾರ್ಯತೆ ಹಿನ್ನೆಲೆಯಲ್ಲಿ ಬದಲಾವಣೆಗಳನ್ನು ಮಾಡಿದ್ದೇವೆ. ನಮ್ಮ ಕೆಲವು ನಿಬಂಧನೆಗಳಲ್ಲಿ ಸ್ಪಷ್ಟತೆ ಇಲ್ಲದೆ ಸಮಸ್ಯೆಗಳಾಗುತ್ತಿವೆ. ಹಾಗಾಗಿ ಕಾನೂನು ತಜ್ಞರ ಅಭಿಪ್ರಾಯದಂತೆ ಕಾನೂನಾತ್ಮಕ ತಿದ್ದುಪಡಿಗಳನ್ನು ಮಾಡುತ್ತಿದ್ದೇವೆ ಎಂದರು.
ಪರಿಷತ್ಗೆ 35-40ಕೋಟಿ ಅನುದಾನ ನೀಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರಕಾರ ನಮಗೆ ಕೇವಲ 5ಕೋಟಿ ರೂ. ಅನುದಾನ ನೀಡಿದೆ. ಇದು ತುಂಬಾ ಕಡಿಮೆ ಆಗಿದೆ. ನಾವು ಜಿಲ್ಲಾ ಸಮ್ಮೇಳನ ಗಳಿಗೆ ತಲಾ 5ಲಕ್ಷ ರೂ. ಅನುದಾನವನ್ನು ನೀಡುತ್ತೇವೆ ಎಂದು ಅವರು ತಿಳಿಸಿದರು.





