ಉಚಿತ ನೇತ್ರ ತಪಾಸಣಾ ಕಾರ್ಯಕ್ರಮ
ಉಡುಪಿ, ಮೇ 6: ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಹಿರಿಯ ನಾಗರಿಕರ ಸಂಸ್ಥೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ಗಳ ಜಂಟಿ ಆಶ್ರಯದಲ್ಲಿ ಉಡುಪಿಯ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣಾ ಕಾರ್ಯಕ್ರಮವನ್ನು ಉಡುಪಿ ಪ್ರಸಾದ್ ನೇತ್ರಾಲಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ಮಾತನಾಡಿ, ಇಂದು ನಮ್ಮ ಮನೆಯ ಹಿರಿಯರ ಆರೋಗ್ಯವನ್ನು ಕಾಪಾಡುವುದು ಅವರ ಮಕ್ಕಳ ಜವಾಬ್ದಾರಿ. ವೃದ್ಧಾಪ್ಯದಲ್ಲಿ ಕಣ್ಣಿನ ದೃಷ್ಟಿಯು ಸರಿಯಾಗಿದ್ದರೆ ಹಿರಿಯರ ಅರ್ಧ ಆರೋಗ್ಯ ಸಮಸ್ಯೆಗಳು ಕಮ್ಮಿಯಾಗಿ, ಬಹಳ ಚಟುವಟಿಕೆಯಿಂದ ಇರುತ್ತಾರೆ. ಹಾಗಾಗಿ ಕಾಲ ಕಾಲಕ್ಕೆ ಅವರ ದೈಹಿಕ ಹಾಗೂ ಕಣ್ಣಿನ ಪರೀಕ್ಷೆಗಳನ್ನು ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ನೀಡುವ ಜವಾಬ್ದಾರಿಯನ್ನು ಮಕ್ಕಳು ಹೊಂದರಿ ಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ನಾಗರಾಜ್ ರಾವ್ ಮಾತನಾಡಿ, ತಮ್ಮ ಸಂಸ್ಥೆಯಿಂದ ಪ್ರತೀ ವರ್ಷ ಸದಸ್ಯರಿಗಾಗಿ ಉಳಿದೆಲ್ಲಾ ಚಟುವಟಿಕೆಗಳೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ನೇತ್ರ ತಪಾಸಣಾ ಕಾರ್ಯಕ್ರಮವನ್ನು ನಡೆಸುತ್ತಿದ್ದು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ನಾಗರಿಕ ಸಂಸ್ಥೆಯ ಪೂರ್ವಾಧ್ಯಕ್ಷ ಎಚ್.ವಿಶ್ವನಾಥ್ ಹೆಗ್ಡೆ, ಕಾರ್ಯದರ್ಶಿ ಸದಾನಂದ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಸಾದ್ ನೇತ್ರಾಲಯದ ಆಡಳಿತಾಧಿಕಾರಿ ಎಂ.ವಿ.ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ.ಕೃಷ್ಣ ಪ್ರಸಾದ್ ಕೂಡ್ಲು ಹಾಗೂ ಡಾ.ಮಾನಸ ಭಟ್ ನೇತ್ರ ತಪಾಸಣೆ ನಡೆಸಿದರು. ಶಿಬಿರ ಸಂಯೋಜಕಿ ಸುರೇಖ ಮಂಜುನಾಥ್, ನೇತ್ರ ಸಹಾಯಕಿ ಆಶಾ ಸಹಕರಿಸಿದರು.







