"ದಲಿತ ಕುಟುಂಬಕ್ಕೆ ಹಕ್ಕುಪತ್ರ ನೀಡಲು ತಾರತಮ್ಯ ಆರೋಪ; ಪರಿಹಾರ ಸಿಗದಿದ್ದರೆ ಧರಣಿ"
ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಎಚ್ಚರಿಕೆ

ಕುಂದಾಪುರ: ಇಲ್ಲಿನ ಟಿ.ಟಿ.ರಸ್ತೆಯ ಬಡ ದಲಿತ ಕುಟುಂಬಕ್ಕೆ ಹಕ್ಕುಪತ್ರ ನೀಡಲು ಯಾಕೆ ತಾರತಮ್ಯ ಮಾಡಲಾಗುತ್ತದೆ. ದಲಿತರಿಗೆ ಹೀಗಾದರೆ ಸಾಮಾಜಿಕ ನ್ಯಾಯ ಸಿಗುವುದು ಹೇಗೆ? ಮುಂದಿನ ಸಭೆ ಯೊಳಗೆ ಇದಕ್ಕೆ ತಾರ್ಕಿಕ ಅಂತ್ಯ ಸಿಗದಿದ್ದರೆ ನೊಂದವರ ಜೊತೆಗೂಡಿ ಪುರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಆಡಳಿತ ಪಕ್ಷದ ಸದಸ್ಯೆ, ಮಾಜಿ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಇಂದು ನಡೆದ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಮೋಹನದಾಸ್ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವೀಣಾ ಭಾಸ್ಕರ್, ಈ ವಿಚಾರದಲ್ಲಿ ಅಧ್ಯಕ್ಷರು ಯಾವುದೇ ರೀತಿಯಲ್ಲೂ ಕಾಳಜಿ ವಹಿಸುತ್ತಿಲ್ಲ. ಈ ಬಗ್ಗೆ ಪ್ರತಿಸಭೆಯಲ್ಲಿ ಧ್ವನಿ ಎತ್ತಿದ್ದೇನೆ ಎಂದು ತಿಳಿಸಿದರು.
ಕಂದಾಯ ಹಾಗೂ ಕಾನೂನು ವ್ಯಾಪ್ತಿಯಾಗಿರುವುದರಿಂದ ಮುಖ್ಯಾಧಿಕಾರಿ ಗಳು ಉತ್ತರಿಸುತ್ತಾರೆ ಎಂದು ಅಧ್ಯಕ್ಷರು ಹೇಳಿದರು. ಕಂದಾಯ ಶಾಖೆಯವರು ಈ ಬಗ್ಗೆ ತುರ್ತು ಗಮನವಹಿಸಿ ಎಂದು ಸಭೆಯಲ್ಲಿ ಮುಖ್ಯಾಧಿಕಾರಿಗಳು ಸೂಚಿಸಿದರು.
ವಲಸೆ ಕಾರ್ಮಿಕರ ಎತ್ತಂಗಡಿ: ಕುಂದಾಪುರ ಶಾಸ್ತ್ರೀ ವೃತ್ತದ ಫ್ಲೈಓವರ್ ಕೆಳಭಾಗದಲ್ಲಿ ವಲಸೆ ಕಾರ್ಮಿ ಕರು ಮಲಗಿ ಅನಗತ್ಯ ಸಮಸ್ಯೆ ಉಂಟು ಮಾಡುತ್ತಿರುವ ಬಗ್ಗೆ ಹಲವು ಸಭೆಗಳಲ್ಲಿ ಪ್ರಸ್ತಾಪಿಸಿದ್ದು, ಇದಕ್ಕೆ ಸೂಕ್ತ ಕ್ರಮಕ್ಕೆ ನಿರ್ಣಯಿಸಲಾಗಿತ್ತು. ಆದರೂ ಅದರ ಬಗ್ಗೆ ಯಾವುದೇ ಪೂರಕ ಕ್ರಮ ಕೈಗೊಂಡಿರಲಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಗಿರೀಶ್ ಜಿ.ಕೆ. ತಿಳಿಸಿದರು.
ಆದರೆ ಸಿಎಂ, ಸಚಿವರು ಹೇಳಿದರೆಂಬ ಕಾರಣಕ್ಕೆ ವಲಸೆ ಕಾರ್ಮಿಕರನ್ನು ತೆರವು ಮಾಡಿಸಲಾಗಿದೆ. ಆದರೆ ಇಷ್ಟು ಸಮಯ ಕೌನ್ಸಿಲ್ ಸಭೆಯಲ್ಲಿ ಮಾಡಿದ ಚರ್ಚೆ, ನಿರ್ಣಯಕ್ಕೆ ಯಾಕೆ ಬೆಲೆ ಸಿಕ್ಕಿಲ್ಲ. ಸಭೆ ನಿರ್ಣಯ ಎಂದರೆ ಅಷ್ಟು ನಿರ್ಲಕ್ಷ್ಯವೇ ಎಂದು ಗಿರೀಶ್ ಜಿ.ಕೆ. ಪ್ರಶ್ನಿಸಿದರು. ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದಿದ್ದು ಆಡಳಿತದಿಂದಲ್ಲ ಎಂದು ಪುರಸಭಾಧ್ಯಕ್ಷ ಮೋಹನದಾಸ್ ಶೆಣೈ ಹೇಳಿದರು.
ವಲಸೆ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಬೇಕೆಂದು 2022ರಲ್ಲಿ ತೀರ್ಮಾನ ವಾಗಿತ್ತು. ಏಕಾಏಕಿ ವಲಸೆ ಕಾರ್ಮಿಕರನ್ನು ಎಬ್ಬಿಸಿರುವುದು ಜನಾಕ್ರೋಶಕ್ಕೆ ಗುರಿಯಾಗಿದೆ ಎಂದು ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ ಹೇಳಿದರು. ಮೊದಲು ವಲಸೆ ಕಾರ್ಮಿಕರು ಹಾಗೂ ಅವರನ್ನು ನಿತ್ಯ ಕೆಲಸಕ್ಕೆ ಕರೆದೊಯ್ಯುವ ಗುತ್ತಿಗೆದಾರರಿಗೆ ಜಾಗೃತಿ ಮೂಡಿಸಬೇಕಿತ್ತು ಎಂದವರು ಅಭಿಪ್ರಾಯಪಟ್ಟರು.
ಹಂಪ್ಗಳ ಸಮಸ್ಯೆ: ನಗರದಲ್ಲಿ ವಾಹನಗಳ ವೇಗ ಮಿತಿಗಾಗಿ ಅಳವಡಿಸಿದ್ದ ಹಂಪ್ಸ್ಗಳನ್ನು ಅಗೆದು ವರ್ಷದ ಬಳಿಕ ಮತ್ತೆ ನಿರ್ಮಿಸಲಾಗಿದೆ. ಇದು ವೈಜ್ಞಾನಿಕವಾಗಿಲ್ಲ. ಹಂಪ್ ಎತ್ತರ ಹೆಚ್ಚಿದ್ದರಿಂದ ದ್ವಿಚಕ್ರ, ತ್ರಿಚಕ್ರ ಹಾಗೂ ಕಾರುಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ದೂರುಗಳು ಬರುತ್ತಿವೆ. ಇದನ್ನು ಶೀಘ್ರ ಸರಿಪಡಿಸಿ ಹಾಗೂ ಹಂಪ್ಗಳು ಕಾಣಿಸುವಂತೆ ಬಣ್ಣ ಬಳಿದು, ರಿಫ್ಲೆಕ್ಟರ್ ಅಳವಡಿಸಬೇಕು. ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ರಾತ್ರೋರಾತ್ರಿ ಹಂಪ್ ತೆರವು ಮಾಡುವ ಕ್ರಮ ನಿಲ್ಲಬೇಕು ಎಂದು ಸದಸ್ಯ ಚಂದ್ರಶೇಖರ್ ಖಾರ್ವಿ ಆಗ್ರಹಿಸಿದರು.
ಕೋಡಿಯಲ್ಲಿ ಯಾಕೆ ಹಂಪ್ ನಿರ್ಮಾಣ ಮಾಡುವುದಿಲ್ಲ ಎಂದು ವಿಪಕ್ಷ ಸದಸ್ಯ ಅಶ್ಫಕ್ ಕೋಡಿ ಪ್ರಶ್ನಿಸಿ ದರು. ಕುಂದಾಪುರ ಬಿಇಓ ಕಚೇರಿ ಮೇಲೆ ಮರದ ಗೆಲ್ಲು ಬಿದ್ದು ಸಮಸ್ಯೆಯಾಗುವ ಬಗ್ಗೆ ಕಟಾವಿಗೆ ಪುರಸಭೆಗೆ ಪತ್ರ ನೀಡಿದ್ದು ಈ ಬಗ್ಗೆ ತುರ್ತಾಗಿ ಗಮನಹರಿಸಿ ಎಂದು ಸದಸ್ಯ ಅಬು ಮಹಮ್ಮದ್ ತಿಳಿಸಿದರು.
ಇನ್ನು ಮಳೆಗಾಲ ಹತ್ತಿರವಾಗುತ್ತಿದ್ದು ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ಮಳೆ ನೀರಿನ ಸಮಸ್ಯೆ ಬಗ್ಗೆ ನಾಮನಿರ್ದೇಶಿತ ಸದಸ್ಯ ಗಣೇಶ್ ಶೇರಿಗಾರ್, ಸದಸ್ಯರಾದ ಶ್ರೀಧರ್ ಶೇರಿಗಾರ, ಜಿ.ಕೆ.ಗಿರೀಶ್ ಅಭಿಪ್ರಾಯ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಇತ್ತೀಚೆಗೆ ಡಿಸಿ, ಎಸ್ಪಿ ಸ್ಥಳ ಪರಿಶೀಲನೆ ವೇಳೆ ತೆರಳಿ ಅಗತ್ಯ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಮುಖ್ಯಾಧಿಕಾರಿ ಆನಂದ್ ಜೆ. ಹಾಜರಿದ್ದರು.
ಅಂಬೇಡ್ಕರ್ ವೃತ್ತ, ಪುತ್ಥಳಿ ನಿರ್ಮಾಣಕ್ಕೆ ಆಗ್ರಹ
ಕುಂದಾಪುರ ಜ್ಯೂನಿಯರ್ ಕಾಲೇಜು ಸಮೀಪವಿರುವ ಪಾರಿಜಾತ ಸರ್ಕಲ್ನಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಿಸಿ ಅಂಬೇಡ್ಕರ್ ವೃತ್ತ ರಚಿಸುವ ಬಗ್ಗೆ ಹಿಂದಿನ ಸಭೆಯಲ್ಲಿ ನಿರ್ಣಯಿಸಲಾಗಿದ್ದು ಅದಕ್ಕೆ ಮೂರು ಆಕ್ಷೇಪಣೆ ಅರ್ಜಿಗಳು ಬಂದ ಹಿನ್ನೆಲೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ. ಕುಂದಾಪುರ ಮಾತನಾಡಿ, ಈ ಹಿಂದಿನ ನಿರ್ಣಯದಂತೆ ಅಂಬೇಡ್ಕರ್ ಪ್ರತಿಮೆ ಅದೇ ಸ್ಥಳದಲ್ಲಿ ಮಾಡಬೇಕು. ಇದಕ್ಕೆ ಯಾವ ಆಕ್ಷೇಪಣೆಗಳು ತಡೆಯಾಗಬಾರದು ಎಂದರು. ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಗಿರೀಶ್ ಜಿ.ಕೆ., ಸರ್ಕಲ್ ಅಭಿವೃದ್ಧಿಗೆ ಆಕ್ಷೇಪಣೆ ಸಲ್ಲಿಸುವುದು ಸರಿಯಲ್ಲ ಎಂದರು.
ವಿಪಕ್ಷ ಸದಸ್ಯರಾದ ಚಂದ್ರಶೇಖರ್ ಖಾರ್ವಿ, ಶ್ರೀಧರ್ ಶೇರಿಗಾರ್ ಮಾತನಾಡಿ, ದಾನಿಗಳು ಸಿಕ್ಕರೆ ಅವರ ನೆರವು ಪಡೆದು ಅಂಬೇಡ್ಕರ್ ವೃತ್ತ ರಿಚಸಬೇಕು. ಇಲ್ಲವಾದರೆ ಪುರಸಭೆಯಿಂದಲೇ ಮಾಡಬೇಕು. ಆದರೆ ಅದೇ ಸ್ಥಳದಲ್ಲಿ ಮಾಡುವ ಹಿಂದಿನ ನಿರ್ಣಯಕ್ಕೆ ಬದ್ಧರಾಗಿರಬೇಕು ಎಂದರು. ಸ್ಥಳದಲ್ಲಿ ವೃತ್ತ ನಿರ್ಮಾಣಕ್ಕೆ ಪೊಲೀಸರ ವರದಿಯೊಂದು ಬಾಕಿಯಿದ್ದು ಅದು ಶೀಘ್ರ ಸಿಗಲಿದೆ. ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡುವುದಾಗಿ ನಿರ್ಣಯಿಸಲಾಯಿತು.