ಕೋರೆಯಲ್ಲಿ ಕಲ್ಲು ಸಿಡಿದು ಕಾರ್ಮಿಕ ಮೃತ್ಯು

ಕಾರ್ಕಳ: ಕಲ್ಲುಕೋರೆಯಲ್ಲಿ ಸ್ಪೋಟಿಸಿದ ಕಲ್ಲು ಬಡಿದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮೇ 8ರಂದು ನಂದಳಿಕೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರಾಯಚೂರಿನ ಶಿವರಾಜ(27) ಎಂದು ಗುರುತಿಸಲಾಗಿದೆ. ಫ್ರಾನ್ಸಿಸ್ ಡಿಸೋಜ ಎಂಬವರ ಕಲ್ಲುಕೋರೆಯಲ್ಲಿ ಮಧ್ಯಾಹ್ನ ಶಿವರಾಜ್ ಮತ್ತು ಅವರ ಜೊತೆಯಲ್ಲಿದ್ದವರು ಕಂಪ್ರೆಸರ್ ಮೂಲಕ ಸಿಡಿಮದ್ದು ಸಿಡಿಸಲು ಡ್ರಿಲಿಂಗ್ ಮಾಡಿದ್ದರು. ನಂತರ ಕಲ್ಲುಕೋರೆಯ ಹೊರಗೆ ಬಂದು ಕಂಪ್ರೆಸರ್ ಬಳಿ ಕುಳಿತಿರು ವಾಗ ಸ್ಪೋಟಕ ಸಿಡಿದಿದ್ದು, ಇದರಿಂದ ಕಲ್ಲೊಂದು ವೇಗವಾಗಿ ಬಂದು ಕಂಪ್ರೆಸರ್ಗೆ ಬಡಿದು ಶಿವರಾಜ್ ಅವರ ತಲೆಗೆ ತಾಗಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಶಿವರಾಜ ಚಿಕಿತ್ಸೆ ಫಲಕಾರಿ ಯಾಗದೆ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ. ಕೋರೆಯ ಮಾಲಕ ಫ್ರಾನ್ಸಿಸ್ ಡಿಸೋಜ ಮತ್ತು ಸ್ಪೋಟಕ ಸಿಡಿಸಿದ ಜೋಸೆಫ್ ರಿಚರ್ಡ್ ಡಿಸೋಜ ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನದಿಂದ ಈ ಘಟನೆ ನಡೆದಿದೆ ಎಂದು ದೂರಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.