ಮಲ್ಪೆಯಲ್ಲಿ ಅಗ್ನಿಶಾಮಕ ದಳದಿಂದ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ

ಉಡುಪಿ, ಮೇ 10: ಭಾರತ-ಪಾಕಿಸ್ಥಾನ ನಡುವಿನ ಯುದ್ಧ ಭೀತಿಯ ಮುನ್ನೆಚ್ಚರಿಕೆ ಕ್ರಮವಾಗಿ ಮಲ್ಪೆಯ ಬಾಪುತೋಟದಲ್ಲಿರುವ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಅಗ್ನಿಶಾಮಕ ದಳದಿಂದ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ ಶುಕ್ರವಾರ ನಡೆಯಿತು.
ಸಂಜೆ ಸುಮಾರು 4ಗಂಟೆ ವೇಳೆಗೆ ಸಂಸ್ಥೆಯ ಸೈರನ್ ಮೊಳಗ ತೊಡಗಿದ್ದು, ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ವಿದ್ಯುತ್ ಹಾಗೂ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸಿದರು. ಕರ್ತವ್ಯ ನಿರತ ರಾಗಿದ್ದವರನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ರವಾನಿಸಿ ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿ ಪಡೆದು ಉಳಿದವರಿಗೆ ಒಳಭಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು.
ನಂತರ ಅವರನ್ನೂ ಪತ್ತೆ ಹಚ್ಚಲಾಯಿತು. ಕಂಪೆನಿಯ ಎಲ್ಲ ಕಾರ್ಯಾ ಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅನಂತರ 4.30ರ ಬಳಿಕ ಮತ್ತೆ ಕಾರ್ಯಾರಂಭ ಮಾಡಲಾಯಿತು. ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಗತ್ಯ ಇರುವ ಕಡೆಗಳಲ್ಲಿ ಇಂತಹ ಕಾರ್ಯಾ ಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ವಿನಾಯಕ ಕಲ್ಲುಟ್ಕರ್ ತಿಳಿಸಿದ್ದಾರೆ.